ಮೈಸೂರು (ಜ. 6) : ದಸರಾ ಮಹೋತ್ಸವದ ಒಂದೂವರೆ ತಿಂಗಳ ಬಳಿಕ ಆಯೋಜಿಸಿದ್ದ ದಸರಾ ವಸ್ತು ಪ್ರದರ್ಶನವನ್ನು ವಾರಂತ್ಯ ಕಪ್ರ್ಯೂ ಮತ್ತು ಸೆಮಿ ಲಾಕ್ಡೌನ್ ಹಿನ್ನೆಲೆಯಲ್ಲಿ ಅರ್ಧಕ್ಕೆ ಮೊಟಕುಗೊಳಿಸಲು ದಸರಾ ವಸ್ತುಪ್ರದರ್ಶನ ಪ್ರಾಧಿಕಾರ ಮುಂದಾಗಿದೆ.
ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯ ಬಳಿಕ ವಸ್ತು ಪ್ರದರ್ಶನ ಮುಂದೂಡಿಕೆ ಅಥವಾ ಮೊಟಕುಗೊಳಿಸುವ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಶನಿವಾರ ಮತ್ತು ಭಾನುವಾರದಂದು ವಾರಾಂತ್ಯ ಕರ್ಫ್ಯೂ ಜಾರಿ ಆಗಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬಾರದಿರುವ ಕಾರಣ ನಷ್ಟವಾಗುವ ಸಾಧ್ಯತೆ ಇದೆ. ಇದರಿಂದ ಮಳಿಗೆಗಳ ಮಾಲೀಕರು ಚಿಂತೆಗೀಡಾಗಿದ್ದಾರೆ. ಪ್ರಾಧಿಕಾರ ಇಂತಹ ನಿರ್ಧಾರಕ್ಕೆ ಮುಂದಾಗಿದೆ. ಕೋವಿಡ್- 19 ಕಾರಣಕ್ಕಾಗಿ 2020 ಮತ್ತು 2021ರ ದಸರಾ ಮಹೋತ್ಸವ ಸಂದರ್ಭದಲ್ಲಿ ವಸ್ತು ಪ್ರದರ್ಶನವನ್ನು ರದ್ದುಗೊಳಿಸಲಾಗಿತ್ತು.
ಜಿಲ್ಲೆಯಲ್ಲಿ ಕೊರೋನಾ ಸೋಂಕು ಪ್ರಕರಣು ಇಳಿಕೆಯಾಗಿದ್ದರಿಂದ ವಸ್ತು ಪ್ರದರ್ಶನ ಪ್ರಾಧಿಕಾರವು ಖಾಸಗಿಯವರಿಗೆ ಗುತ್ತಿಗೆ ನೀಡುವ ಮೂಲಕ ಎರಡು ತಿಂಗಳ ಮಟ್ಟಿಗೆ ವಸ್ತು ಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟಿತ್ತು. ನ. 27 ರಿಂದ ಜ. 31ರವರೆಗೆ 65 ದಿನಗಳ ಕಾಲ ಪ್ರದರ್ಶನಕ್ಕೆ ಅನುಮತಿ ನೀಡಿದ್ದರಿಂದ ನ. 27 ರಂದು ಆರಂಭವಾಗಿತ್ತು. ಪ್ರದರ್ಶನದಲ್ಲಿ ವಿವಿಧ ಬಗೆಯ ಮನೋರಂಜನಾ ಆಟಿಕೆ, ಫುಟ್ ಕೋರ್ಟ್, ಫ್ಯಾನ್ಸಿ ಆಭರಣ ಮಳಿಗೆ ಸೇರಿ ಇತರ ಮಳಿಗೆಗಳು ತುಂಬಿ ತುಳುಕುತ್ತಿದ್ದವು.
ಕ್ರಿಸ್ಮಸ್ ಹಾಗೂ ಹೊಸ ವರ್ಷ ಆಚರಣೆಗೆ ನಗರಕ್ಕೆ ಲಗ್ಗೆ ಇಟ್ಟಿದ್ದ ಪ್ರವಾಸಿಗರು ವಸ್ತು ಪ್ರದರ್ಶನಕ್ಕೆ ಭೇಟಿ ನೀಡಿದ್ದರಿಂದ ತುಂಬಿ ತುಳುಕಿತ್ತು. ಆದರೆ, ರಾಜ್ಯಸರ್ಕಾರ ಕೋವಿಡ.-19, ಓಮಿಕ್ರಾನ್ ಪ್ರಕರಣಗಳು ಹೆಚ್ಚಾಗುತ್ತಿರುವುದನ್ನು ತಡೆಯಲು ಜ. 19 ರವರೆಗೆ ಸೆಮಿ ಲಾಕ್ಡೌನ್, ವೀಕೆಂಡ್ ಕಪ್ರ್ಯೂ ಜಾರಿಗೊಳಿಸಿ ಆದೇಶ ಹೊರಡಿಸಿದ್ದರಿಂದ ಸರ್ಕಾರದ ಅಂಗ ಸಂಸ್ಥೆಯಾದ ಪ್ರಾಧಿಕಾರವು ಈಗ ಮುಂದೂಡುವ ಅಥವಾ ಮೊಟಕುಗೊಳಿಸುವ ಸಾಧ್ಯತೆ ಇದೆ.
ತುರ್ತು ಸಂದರ್ಭದಲ್ಲಿ ಓಡಾಟ ಹೊರತುಪಡಿಸಿ ಉಳಿದಂತೆ ನಿರ್ಬಂಧ ಹೇರಿರುವ ಹಿನ್ನೆಲೆಯಲ್ಲಿ ಪ್ರಾಧಿಕಾರದ ಪ್ರವೇಶಕ್ಕೂ ಅವಕಾಶ ಇರುವುದಿಲ್ಲ. ಹೀಗಾಗಿ ಮಾಲೀಕರು ಮೊಟಕುಗೊಳಿಸುವಂತೆ ಅಥವಾ ಮುಂದೂಡುವಂತೆ ಬೇಡಿಕೆ ಇಟ್ಟಿರುವುದರಿಂದ ಪ್ರಾಧಿಕಾರ ಮುಂದಿನ ಕ್ರಮಕ್ಕೆ ಚಿಂತನೆ ನಡೆಸಿದೆ. ಜ. 31ರವರೆಗೆ ಅಂದರೆ ಗುತ್ತಿಗೆ ಪ್ರಕಾರ ಇನ್ನು 25 ದಿನಗಳ ಕಾಲ ವಸ್ತು ಪ್ರದರ್ಶನಕ್ಕೆ ಅವಕಾಶ ಇದ್ದರೂ ಜ. 19 ರವರೆಗೆ ಹಲವು ನಿರ್ಬಂಧ ವಿಧಿಸಿ ವಾರಾಂತ್ಯ ಕಪ್ರ್ಯೂ ಜಾರಿಗೊಳಿಸಿದ್ದರಿಂದ ಗುರುವಾರದ ಸಂಪುಟ ಸಭೆಯ ತೀರ್ಮಾನದ ಬಳಿಕ ಅಂತಿಮ ನಿರ್ಧಾರ ಹೊರಬೀಳಲಿದೆ.ಈ ಸಂಬಂಧ ಜಿಲ್ಲಾಧಿಕಾರಿ ಜೊತೆ ಚರ್ಚಿಸಿ, ಸಂಪುಟ ಸಭೆ ತೀರ್ಮಾನದ ಬಳಿಕ ಮುಂದೂಡುವ ಕುರಿತು ಸಮಾಲೋಚಿಸಲಾಗುವುದು ಎಂದು ವಸ್ತು ಪ್ರದರ್ಶನ ಪ್ರಾಧಿಕಾರ ಅಧ್ಯಕ್ಷರಾದ ಹೇಮಂತಕುಮಾರ್ ಗೌಡ ಹೇಳಿದ್ದಾರೆ
ಸರಳ ದಸರಾ
ಈ ಬಾರಿ ಸರಳ ಮತ್ತು ಸಾಂಪ್ರದಾಯಿಕವಾಗಿ ಆಚರಿಸಲಾದ ಮೈಸೂರು ದಸರಾ ಮಹೋತ್ಸವಕ್ಕೆ ಒಟ್ಟು .4.22 ಕೋಟಿ ವೆಚ್ಚ ಮಾಡಲಾಗಿದೆ. ಇದರಲ್ಲಿ ಆನೆಗಳ ನಿರ್ವಹಣೆಗೆ .50 ಲಕ್ಷ, ಅರಮನೆಗೆ ಗೌರವ ಸಂಭಾವನೆಯಾಗಿ ಮಾಡಿದ .40 ಲಕ್ಷ ವೆಚ್ಚ ಕೂಡ ಸೇರಿದೆ. ಮೈಸೂರು ದಸರಾಗಾಗಿ ಸರ್ಕಾರ ನೀಡಿದ್ದ 6 ಕೋಟಿ ಅನುದಾನದಲ್ಲಿ ಮಂಡ್ಯ, ಚಾಮರಾಜನಗರ ಮತ್ತು ಹಾಸನ ಜಿಲ್ಲೆಗೆ ಒಟ್ಟು .1.20 ಕೋಟಿ ನೀಡಲಾಗಿದ್ದು, ಮೈಸೂರು ದಸರಾಗೆ .4.22 ಕೋಟಿ ವೆಚ್ಚ ಮಾಡಲಾಗಿದೆ. ಒಟ್ಟಾರೆ . 5,42,07,679 ವೆಚ್ಚವಾಗಿದ್ದು, ಸುಮಾರು .57 ಲಕ್ಷ ಅನುದಾನ ಉಳಿದಿದೆ.