ಮೈಸೂರು: ರೈಲ್ವೆ ಮೈಸೂರು ವಿಭಾಗದ ವತಿಯಿಂದ ರೈಲ್ವೆ ಹಳಿಗಳ ಮೇಲೆ ಅತಿಕ್ರಮ ಪ್ರವೇಶ ಮಾಡದಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸುರಕ್ಷತಾ ಅಭಿಯಾನ ಆರಂಭಿಸಲಾಗಿದೆ.
ಇದೇ ವೇಳೆ ಹೆಡ್-ಫೋನ್, ಇಯರ್- ಫೋನ್ಗಳನ್ನು ಬಳಸುತ್ತಾ ರೈಲ್ವೆ ಹಳಿಗಳ ಮೇಲೆ ಅತಿಕ್ರಮ ಪ್ರವೇಶ ಮಾಡುವುದರಿಂದ ಆಗುವ ಅಪಾಯಗಳ ಕುರಿತು ರೈಲು-ಬಳಕೆದಾರರು ಸೇರಿದಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.
ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ರಾಹುಲ್ ಅಗರ್ವಾಲ್ ಅಭಿಯಾನಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ, ರೈಲು ಹಳಿಗಳನ್ನು ಅತಿಕ್ರಮಿಸುವುದಿಲ್ಲ ಮತ್ತು ರೈಲ್ವೆ ಹಳಿಗಳ ಬಳಿ ಹೆಡ್-ಫೋನ್, ಇಯರ್-ಫೋನ್ಗಳನ್ನು ಬಳಸುವುದಿಲ್ಲ ಎಂದು ಅವರು ಪ್ರಯಾಣಿಕರು ಮತ್ತು ಇತರ ರೈಲ್ವೆ ಸಿಬ್ಬಂದಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
ಬಳಿಕ ಮಾತನಾಡಿದ ಅವರು, ಹಳಿಗಳ ಮೇಲಿನ ನಮ್ಮ ನಿರ್ಲಕ್ಷ್ಯವು ಮಾರಣಾಂತಿಕ ಅವಘಡಗಳಿಗೆ ಕಾರಣವಾಗಬಹುದು ಮತ್ತು ನೂರಾರು ಇತರರ ಜೀವಕ್ಕೆ ಕೂಡ ಅಪಾಯವನ್ನುಂಟು ಮಾಡುತ್ತದೆ. ಆದ್ಧರಿಂದ ರೈಲ್ವೆ ಹಳಿ ಮತ್ತು ಎಲ್ಸಿ ಗೇಟ್ಗಳನ್ನು ದಾಟುವಾಗ ಜಾಗರೂಕರಾಗಿರಿ ಎಂದು ಮನವಿ ಮಾಡಿದರು.
ಇಯರ್ಫೋನ್ಗಳ ಬಳಕೆಯು ಪಾದಚಾರಿಗೆ ಅಥವಾ ಚಾಲಕನಿಗೆ ಸಮೀಪಿಸುತ್ತಿರುವ ವಾಹನದ ಬಗ್ಗೆ ನಿರ್ಲಕ್ಷ್ಯವನ್ನು ಉಂಟುಮಾಡುತ್ತದೆ ಮತ್ತು ಯಾವುದೇ ತುರ್ತು ಪರಿಸ್ಥಿತಿಗೆ ಪ್ರತಿಕ್ರಿಯಿಸಲು ಅವರ ಪ್ರತಿಕ್ರಿಯೆ ಸಮಯವನ್ನು ಬಹಳವಾಗಿ ಕಡಿಮೆ ಮಾಡುತ್ತದೆ ಎಂಬ ಅಂಶವನ್ನು ಅವರು ಒತ್ತಿ ಹೇಳಿದರು. ರೈಲು ಹಳಿಗಳನ್ನು ದಾಟುವಾಗ ಯಾವಾಗಲೂ ಪಾದಾಚಾರಿ ಮೇಲ್ಸೇತುವೆ ಅಥವಾ ಸುರಂಗ ಮಾರ್ಗಗಳನ್ನು ಬಳಸಬೇಕೆಂದು ಅವರು ಪ್ರಯಾಣಿಕರಿಗೆ ಮನವಿ ಮಾಡಿದರು.
ರೈಲ್ವೆ ಹಳಿ ಸೇರಿದಂತೆ ರೈಲ್ವೆ ಆವರಣದಲ್ಲಿ ಯಾವುದೇ ಅನಧಿಕೃತ ಅತಿಕ್ರಮ ಪ್ರವೇಶವು ರೈಲ್ವೆ ಕಾಯ್ದೆ, 1989 ರ ಸೆಕ್ಷನ್ 147 ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿದೆ ಮತ್ತು ಯಾವುದೇ ನಿಯಮಗಳನ್ನು ಉಲ್ಲಂಘಿಸಿದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರಲ್ಲದೆ, ಮೈಸೂರು ವಿಭಾಗವು ಹಳಿಗಳ ಸಂರಕ್ಷಣೆಗೆ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಜಾನುವಾರುಗಳು ಹಳಿ ದಾಟುವ ಘಟನೆಗಳನ್ನು ನಿವಾರಿಸಲು ಮತ್ತು ಅನಧಿಕೃತ ಅತಿಕ್ರಮ ಪ್ರವೇಶವನ್ನು ತಡೆಯಲು ಅಗತ್ಯವಾದ ಸ್ಥಳಗಳಲ್ಲಿ ಮತ್ತು ಪ್ರಮುಖ ರೈಲು ನಿಲ್ದಾಣಗಳ ಸಮೀಪದಲ್ಲಿ ಬೇಲಿ ನಿರ್ಮಾಣ ಸುರಕ್ಷತಾ ಕ್ರಮಗಳಲ್ಲಿ ಒಂದಾಗಿದೆ ಎಂದು ಹೇಳಿದರು.