ಮೈಸೂರು: ರಾಜ್ಯದಲ್ಲಿ ಕೆಲವು ದಿನಗಳಿಂದ ಹಿಜಾಬ್ ವಿವಾದದಿಂದಾಗಿ ಶಾಲಾ ಕಾಲೇಜುಗಳಲ್ಲಿ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಿದೆ. ಇದು ವಿದ್ಯಾರ್ಥಿಗಳ ಕಲಿಕೆ ಮೇಲೆ ಮಾತ್ರವಲ್ಲದೆ, ಸೌಹಾರ್ಧತೆಗೆ ಧಕ್ಕೆ ತರುತ್ತಿದೆ. ಹೀಗಾಗಿ ಶಾಲಾ ಕಾಲೇಜುಗಳಲ್ಲಿ ಒಂದೊಳ್ಳೆಯ ವಾತಾವರಣ ನಿರ್ಮಾಣ ಮಾಡುವ ಸಲುವಾಗಿ ಎಐಡಿಎಸ್ ಓ ಜಿಲ್ಲಾ ಸಮಿತಿ ವಿನೂತನ ಕಾರ್ಯಕ್ರಮಕ್ಕೆ ಮುಂದಾಗಿದೆ.
ರಾಜ್ಯಾದ್ಯಂತ ಸುಮಾರು 15ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಗೋಡೆ ಬರಹಗಳ ಮೂಲಕ ಪ್ರಜಾತಾಂತ್ರಿಕ, ಧರ್ಮನಿರಪೇಕ್ಷ, ವೈಜ್ಞಾನಿಕ ಆಶಯಗಳನ್ನು ಎತ್ತಿ ಹಿಡಿಯುವ ಪ್ರಯತ್ನಕ್ಕೆ ಮುಂದಾಗಿದೆ. ವೈಜ್ಞಾನಿಕ – ಧರ್ಮನಿರಪೇಕ್ಷ – ಪ್ರಜಾತಾಂತ್ರಿಕ ಶಿಕ್ಷಣ ನಮ್ಮದಾಗಲಿ ಎಂಬ ಆಶಯದೊಂದಿಗೆ ಕ್ರಮಗಳನ್ನು ಕೈಗೊಂಡಿದ್ದು, ಅದರಂತೆ ಮಹಾನ್ ನಾಯಕರ ಘೋಷಣೆಗಳನ್ನು ಗೋಡೆಗಳಲ್ಲಿ ಬರೆಯಲಾಗುತ್ತಿದೆ.
ಇನ್ನು ಮಹಾನ್ ನೇತಾಜಿ ಹಾಗೂ ಭಗತ್ ಸಿಂಗ್ ರ ಕನಸುಗಳನ್ನು ನನಸಾಗಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಹೀಗಾಗಿ ಗೋಡೆಗಳಲ್ಲಿ ಶಿಕ್ಷಣ ಹಾಗೂ ರಾಜಕೀಯದಲ್ಲಿ ಧರ್ಮ ಬರಬಾರದು, ಸಾಮಾಜಿಕ ಕಾನೂನುಗಳನ್ನು ರೂಪಿಸುವಲ್ಲಿ ಧರ್ಮಕ್ಕೆ ಯಾವುದೇ ಪಾತ್ರವಿಲ್ಲ ಎಂಬ ಘೋಷಣೆಯೊಂದಿಗೆ ಕೋಮು ಸಾಮರಸ್ಯದ ಕುರಿತು ಸ್ವಾಮಿ ವಿವೇಕಾನಂದ, ಕುವೆಂಪು, ಭಗತ್ ಸಿಂಗ್, ನೇತಾಜಿ ಮುಂತಾದ ಮಹಾನ್ ವ್ಯಕ್ತಿಗಳ ಸೂಕ್ತಿಗಳ ಗೋಡೆ ಬರಹವನ್ನು ಬರೆಯಲಾಗುತ್ತಿದೆ. ವಿದ್ಯಾರ್ಥಿಗಳ ಈ ಕಾರ್ಯಕ್ಕೆ ಉತ್ತಮ ರೀತಿಯ ಸ್ಪಂದನೆ ವ್ಯಕ್ತವಾಗುತ್ತಿದೆ.