ಮೈಸೂರು: ಯಶಸ್ಸಿಗೆ ಯಾವುದೇ ಅಡ್ಡದಾರಿಗಳು ಇಲ್ಲ. ಒಂದು ಗುರಿಯನ್ನು ಇಟ್ಟುಕೊಂಡು, ಶ್ರಮಪಟ್ಟು ಹಾದಿಯಲ್ಲಿ ಸಾಗಿದಾಗ ಮಾತ್ರ ಯಶಸ್ಸು ಲಭಿಸುತ್ತದೆ. ನಾನು ಶಾರ್ಟ್ಸ್ (ತುಂಡುಡಿಗೆ) ಧರಿಸಬಹುದು. ಆದರೆ ಶಾರ್ಟ್ಕಟ್ (ಅಡ್ಡದಾರಿ) ಅಡ್ಡದಾರಿ ಹಿಡಿಯುವುದಿಲ್ಲ ಬಾಲಿವುಡ್ ನಟಿ ರಾಖಿ ಸಾವಂತ್ ಮಾರ್ಮಿಕವಾಗಿ ನುಡಿದಿದ್ದಾರೆ.
ಎಸ್.ರಾಜ್ ಬ್ಯಾನರ್ನಡಿ ನಡೆಯಲಿರುವ ರಿಯಾಲಿಟಿ ಶೋ ಕಾರ್ಯಕ್ರಮಕ್ಕೆ ರಾಖಿಸಾವಂತ್ ತೀರ್ಪುಗಾರರಾಗಿ ಆಯ್ಕೆಯಾಗಿದ್ದು, ಒಡಂಬಡಿಕೆಗೆ ಸಹಿ ಹಾಕುವ ಸಲುವಾಗಿ ಸೋಮವಾರ ಮೈಸೂರಿಗೆ ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ಸುಮಾರು ಒಂದೂವರೆ ದಶಕದ ಹಿಂದೆ ಗೆಳೆಯ ಚಿತ್ರದಲ್ಲಿ ಹಾಡೊಂದರ ದೃಶ್ಯದಲ್ಲಿ ಅಭಿನಯಿಸಿದ್ದೆ, ಈಗಲೂ ಅವಕಾಶ ಸಿಕ್ಕರೆ ಕನ್ನಡ ಸಿನಿಮಾದಲ್ಲಿ ನಟಿಸುವ ಆಸೆ ಇದೆ ಎಂದು ಹೇಳಿದರು.
ಕನ್ನಡ ಸಿನಿಮಾಗಳು ವಿಶ್ವ ಮಟ್ಟದಲ್ಲಿ ಸದ್ದು ಮಾಡುತ್ತಿವೆ. ರಾಕಿಂಗ್ ಸ್ಟಾರ್ ಯಶ್ ಜತೆ ಮತ್ತೊಬ್ಬ ರಾಕಿಂಗ್ ರಾಖೀ ಸೇರಿಕೊಂಡರೆ ಸಿನಿಮಾವನ್ನು ಧೂಳ್ ಎಬ್ಬಿಸಿಬಿಡಬಹುದು ಎಂದ ಅವರು ಸಿನಿಮಾಗಳಲ್ಲಿ ಅಭಿನಯಿಸಲು ನಾನೇನು ದೊಡ್ಡ-ದೊಡ್ಡ ಷರತ್ತು ಹಾಗೂ ಬೇಡಿಕೆಗಳನ್ನು ಇಡುವುದಿಲ್ಲ. ಸಿನಿಮಾ ರಂಗಕ್ಕೆ ಬರುವ ಮೊದಲು ಕಡುಕಷ್ಟವನ್ನು ಕಂಡಿರುವುದರಿಂದ ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗುತ್ತೇನೆ. ಇದೇ ಬೇಕು ಎನ್ನುವ ಧೋರಣೆ ನನ್ನಲ್ಲಿ ಇಲ್ಲ ಎಂದರು.
ದಕ್ಷಿಣ ಭಾರತದ ಸಿನಿಮಾರಂಗಗಳಲ್ಲಿ ಒಳ್ಳೆಯ ಚಿತ್ರಗಳು ಹೊರ ಬರುತ್ತಿವೆ. ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಸಿನಿಮಾದ ಪೂರ್ವ ಪ್ರದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿ, ಆ ಸಿನಿಮಾವನ್ನು ವೀಕ್ಷಣೆ ಮಾಡಿದೆ. ಅದಕ್ಕೆ 7 ಸ್ಟಾರ್ ನೀಡಬಹುದು ಎಂದರು.
ಸುಜೀವ್ ಸಂಸ್ಥೆಯ ರಾಜಾರಾಮ್ ಮಾತನಾಡಿ, ಪ್ರತಿಭೆಯಿದ್ದರೂ ಅದನ್ನು ಪ್ರದರ್ಶಿಸಲು ಸೂಕ್ತ ವೇದಿಕೆ ಇಲ್ಲದವರನ್ನು ಗುರುತಿಸಿ, ಅವರಿಗೆ ಸ್ಪರ್ಧೆಯನ್ನು ಏರ್ಪಡಿಸಲು ರಿಯಾಲಿಟಿ ಶೋ ಪ್ರಾರಂಭಿಸುತ್ತಿದ್ದೇವೆ. ಇಡೀ ಭಾರತವನ್ನು ಕೇಂದ್ರೀಕರಿಸಿ ಈ ರಿಯಾಲಿಟಿ ಶೋ ಆಯೋಜನೆ ಮಾಡುವುದರಿಂದ ಕಾರ್ಯಕ್ರಮವೆಲ್ಲವೂ ಮುಂಬೈನಲ್ಲೇ ನಡೆಯುತ್ತವೆ. ಒಂದೆರಡು ಸೀಸನ್ಗಳು ಆದ ಬಳಿಕ ಪ್ರಾದೇಶಿಕ ಭಾಷೆಗಳಲ್ಲೂ ಶೋ ನಿರ್ಮಾಣ ಮಾಡುವುದಾಗಿ ಅವರು ತಿಳಿಸಿದರು.
ಫೇಸ್ಬುಕ್ ಹಾಗೂ ಇನ್ಸ್ಟಾಗ್ರಾಂನಲ್ಲಿ ವಿಡಿಯೋಗಳ ಮೂಲಕ ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಿರುವವರಲ್ಲಿ ಅನೇಕರು ಸಹಸ್ರಾರು ಲೈಕ್ ಹಾಗೂ ರೀಲ್ಸ್ಗಳನ್ನು ಪಡೆದಿರುತ್ತಾರೆ. ಆದರೆ ಹಲವಾರು ಕಾರಣಗಳಿಂದ ವೇದಿಕೆ ಸಿಗದೆ ವಂಚಿತರಾಗಿರುತ್ತಾರೆ. ಅಂತಹವರನ್ನು ಶೋಧಿಸಿ ಅವರಿಗೆ ವೇದಿಕೆ ಕಲ್ಪಿಸಲಾಗುತ್ತದೆ ಎಂದು ತಿಳಿಸಿದರು.
ರಿಯಾಲಿಟಿ ಶೋದಲ್ಲಿ ಭಾಗವಹಿಸಿ ಅರ್ಹತೆ ಸುತ್ತಿಗೆ ಬಂದ ಪ್ರತಿಭಾವಂತರಿಗೆ ರಾಖಿ ಸಾವಂತ್ ಡ್ಯಾನ್ಸ್ ಅಕಾಡೆಮಿಯಿಂದ ನೃತ್ಯ ತರಬೇತಿ ಕೊಡಿಸಲಾಗುತ್ತದೆ. ಅನುಪಮ್ ಖೇರ್ ನಟನಾ ಶಾಲೆಯಲ್ಲಿ ಕಲಿಕೆಗೆ ಸೇರಿಸಲಾಗುತ್ತದೆ ಎಂದು ಅವರು ತಿಳಿಸಿದರು.
ರಿಯಾಲಿಟಿ ಶೋ ನಿರ್ದೇಶಕ ರಾಜೀವ್, ಸಲ್ಲಿ, ಮಹಾದೇವ. ಸುನಿಲ್ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.