ಬಂಟ್ವಾಳ : ಕಕ್ಯಪದವು ಎಲ್ಸಿಆರ್ ಇಂಡಿಯನ್ ಸ್ಕೂಲ್ ಸಂಚಾಲಕ, ರೊಟರಿಕ್ಲಬ್ ೩೧೮೧ ಜಿಲ್ಲಾ ಮಾಜಿ ಗವರ್ನರ್, ಮಂಗಳೂರು ಬಿಜೈ ನಿವಾಸಿ ರೋಹಿನಾಥ್ ಪಾದೆ(೬೨)ಅವರು ಅನಾರೋಗ್ಯದಿಂದ ಎ.೧೧ರಂದು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
ಮೃತರು ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ರೋಹಿನಾಥ್ ಪಾದೆ ಅವರು ಮೂಲತ: ಬಂಟ್ವಾಳ ತಾಲೂಕಿನ ತೆಂಕಕಜೆಕಾರು ಗ್ರಾಮದ ಪ್ರತಿಷ್ಠಿತ ಪಾದೆಗುತ್ತು ಹೊಸಮನೆ ನಿವಾಸಿಯಾಗಿದ್ದು, ಉಜಿರೆಯ ಎಸ್.ಡಿ.ಎಂ. ಕಾಲೇಜಿನಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ವಿಜ್ಞಾನ ಪದವಿಯನ್ನು ಪಡೆದು ಮಂಗಳೂರಿನಲ್ಲಿ ಪ್ರೀಮಿಯರ್ ಸೆಕ್ಯೂರಿಟಿ ಸರ್ವಿಸಸ್ ಸಂಸ್ಥೆಯನ್ನು ನಡೆಸಿಕೊಂಡು ಬಂದಿದ್ದು ದೇಶದಾದ್ಯಂತ ಸಾವಿರಾರು ಜನರಿಗೆ ಉದ್ಯೋಗದಾತರಾಗಿದ್ದರು.
ತಂದೆ, ಶಿಕ್ಷಕ ದಿ. ಲಿಂಗಪ್ಪ ಮಾಸ್ಟರ್ ಅವರ ಆಶಯದಂತೆ ಕಕ್ಯಪದವುನಲ್ಲಿ ಶಿಕ್ಷಣ ಸಂಸ್ಥೆ ಸ್ಥಾಪಿಸಿದ್ದರು. ರೋಟರಿ ಕ್ಲಬ್ನ ವಿವಿಧ ಹುದ್ದೆಗಳನ್ನು ನಿಭಾಯಿಸಿ ರೋಟರಿ ಜಿಲ್ಲಾ ಗವರ್ನರ್ ಆಗಿ ಕಾರ್ಯ ನಿರ್ವಹಿಸಿದ್ದರು. ಕಬಡ್ಡಿ ಆಟಗಾರಾಗಿದ್ದ ಅವರು ಸತತ ಐದು ವರ್ಷ ಕಾಲೇಜು ತಂಡವನ್ನು ಪ್ರತಿನಿಧಿಸಿ ೧೯೮೧ರಲ್ಲಿ ಮೈಸೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿದ್ದರು.
ವಿವಿಧ ಧಾರ್ಮಿಕ,ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿರುವ ಅವರು ಕಕ್ಯಪದವು ಶ್ರೀ ಬ್ರಹ್ಮ ಬದರ್ಕಳ ಗರಡಿ ಜೀರ್ಣೋದ್ದಾರ ಸಮಿತಿ ಗೌರವಾಧ್ಯಕ್ಷರಾಗಿದ್ದರು. ತೆಂಕಕಜೆಕಾರು ಕರ್ಲ ಶ್ರೀ ಕೃಷ್ಣ ದೇವಸ್ಥಾನ ಜೀರ್ಣೋದ್ಧಾರ ಸಮಿತಿ, ಕುರುವರಗೋಳಿ ಶ್ರೀ ಮಹಮ್ಮಾಯಿ ದೇವಸ್ಥಾನ ಬ್ರಹ್ಮಕಲಶೋತ್ಸವ ಸಮಿತಿಗಳ ಅಧ್ಯಕ್ಷರಾಗಿ, ಕಜೆಕಾರು ಶ್ರೀ ಮಹದೇವದೇವೇಶ್ವರ ದೇವಸ್ಥಾನ ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷರಾಗಿ, ಮಡವು ಶ್ರೀ ಬಾಲಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮಂಡಳಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಪಾದೆಗುತ್ತು ಮನೆತನದ ದೈವಸ್ಥಾನಗಳ ಜೀರ್ಣೋದ್ದಾರ ಸಮಿತಿ ಅಧ್ಯಕ್ಷರಾಗಿದ್ದರು.