ಮೈಸೂರು : ತಾಯಿ ನಿಂದಿಸಿದರೆ, ಹಿಂಸಿಸಿದರೆ ಅದಕ್ಕೆ ಪರಿಹಾರ ಇಲ್ಲ ಅಂತ ಪುರಾಣಗಳು ಹೇಳುತ್ತವೆ. ಆದರೆ ಇಲ್ಲಿ ತಾಯಿಯನ್ನು ಬರೀ ನಿಂದಿಸಿ, ಹಿಂಸಿಸಿಲ್ಲ, ಆಕೆಯನ್ನು ಕೊಂದೇ ಬಿಟ್ಟಿದ್ದಾನೆ. ಆ ಹಂತಕ ಬೇರೆ ಯಾರೂ ಅಲ್ಲ, ಆ ತಾಯಿಯದ್ದೇ ಮಗ ! ಹಾಗಿದ್ರೆ ಈ ಘಟನೆ ನಡೆದಿರುವುದು ಎಲ್ಲಿ, ತಾಯಿಯನ್ನೇ ಹತ್ಯೆ ಮಾಡಿದ ಆ ಪಾಪಿ ಪುತ್ರ ಯಾರು? ಅಸಲಿಗೆ ಅಲ್ಲಿ ನಡೆದಿದ್ದು ಏನು? ಈ ಎಲ್ಲವುಗಳ ಬಗ್ಗೆ ಆಘಾತಕಾರಿ ವರದಿ ಇಲ್ಲಿದೆ ನೋಡಿ.
ನೀವೆಲ್ಲ ರವಿಚಂದ್ರನ್ ಅಭಿನಯದ ಯುಗಪುರುಷ ಸಿನಿಮಾವನ್ನು ನೋಡೇ ಇರುತ್ತೀರಿ. ಅಲ್ಲಿ ಖಳನಾಯಕಿ ಸಿನಿಮಾ ಸ್ಟೈಲ್ನಲ್ಲಿ ಕಾರು ಹರಿಸಿ, ನಾಯಕನ ಅಣ್ಣನನ್ನು ಕೊಲ್ಲುತ್ತಾಳೆ. ಆ ದೃಶ್ಯವನ್ನು ಒಮ್ಮೆ ಕಣ್ಮುಂದೆ ತಂದುಕೊಳ್ಳಿ. ಅಲ್ಲಿ ನಾಯಕನ ಅಣ್ಣನನ್ನು ಕೊಂದಿದ್ರೆ, ಇಲ್ಲಿ ಒಬ್ಬ ಪಾಪಿ ಪುತ್ರ ಸೇಮ್ ಟು ಸೇಮ್ ಅದೇ ರೀತಿಯಲ್ಲಿ ತನ್ನ ತಾಯಿಯನ್ನೇ ಕೊಂದಿದ್ದಾನೆ.
ಹಣಕಾಸಿನ ವಿಚಾರಕ್ಕೆ ತಾಯಿ ಹಾಗೂ ಮಗನ ನಡುವೆ ನಿತ್ಯ ಗಲಾಟೆ ನಡೆಯುತ್ತಿತ್ತಂತೆ. ಆದರೆ ನಿನ್ನೆ ಆ ಗಲಾಟೆ ವಿಪರೀತಕ್ಕೆ ಹೋಗಿದೆ. ತನ್ನ ಜೊತೆ ಜಗಳವಾಡಿ ರಸ್ತೆ ಮೇಲೆ ಹೋಗುತ್ತಿದ್ದ ತಾಯಿ ಮೇಲೆ ಮಗ ಅಟ್ಯಾಕ್ ಮಾಡಿದ್ದಾನೆ. ಆಕೆಯ ಮೇಲೆ ಹಿಂದಿನಿಂದ ಜೀಪ್ ಹರಿಸಿ, ನಡು ಬೀದಿಯಲ್ಲೇ ಕೊಂದಿದ್ದಾನೆ.
ಮೈಸೂರು ಜಿಲ್ಲೆಯ ರಿಯಾಪಟ್ಟಣ ತಾಲೂಕಿನ ಹನುಮಂತಪುರದಲ್ಲಿ ಇಂಥದ್ದೊಂದು ಘಟನೆ ನಡೆದಿದೆ. 65 ವರ್ಷದ ನಾಗಮ್ಮ ಎಂಬಾಕೆಯೇ ಹತ್ಯೆಯಾಗಿದ್ದಾಳೆ. ಇವರ ಮಗ 45 ವರ್ಷದ ಹೇಮರಾಜ್ ಎಂಬಾತನೇ ಕೊಲೆ ಮಾಡಿದ್ದಾನೆ.
ತಾಯಿ ನಾಗಮ್ಮ ಹಾಗೂ ಪುತ್ರ ಹೇಮರಾಜ್ ನಡುವೆ ಹಣಕಾಸಿನ ವಿಚಾರವಾಗಿ ನಿತ್ಯ ಗಲಾಟೆ ನಡೆಯುತ್ತಾ ಇತ್ತು. ನಿತ್ಯ ಇದೇ ವಿಚಾರಕ್ಕೆ ಗಲಾಟೆ ನಡೆದು, ತಾಯಿ ಹಾಗೂ ಮಗ ಕಿತ್ತಾಡಿಕೊಳ್ಳುತ್ತಾ ಇದ್ದರು. ನಿನ್ನೆ ಗಲಾಟೆ ವಿಪರೀತಕ್ಕೆ ತಿರುಗಿ, ಕೊಲೆಯಲ್ಲಿ ಅಂತ್ಯವಾಗಿದೆ.
ಹೇಮರಾಜ್ ತಾಯಿ ನಾಗಮ್ಮನ ಹೆಸರಿನಲ್ಲಿ ಸಂಘದಿಂದ ಸುಮಾರು 70 ಸಾವಿರ ಸಾಲ ಪಡೆದು ತೂಫಾನ್ ವಾಹನವನ್ನು ತೆಗೆದುಕೊಂಡಿದ್ದ, ಸಾಲ ವಾಪಸ್ ಕಟ್ಟದಿದ್ದಾಗ ಸಂಘದ ಇತರ ಸದಸ್ಯರು ನಾಗಮ್ಮಳನ್ನು ಒತ್ತಾಯಿಸಿದ್ದರು.
ಇದರಿಂದ ನಾಗಮ್ಮ ಮಗ ಹೇಮರಾಜ್ನಿಗೆ ಸಾಲ ವಾಪಸ್ ಕಟ್ಟುವಂತೆ ಹೇಳಿದಾಗ ವಾಗ್ವಾದ ನಡೆದಿದೆ. ಕೊನೆಗೆ ಅದು ಜಗಳದ ರೂಪ ಪಡೆದು, ತಾಯಿಯನ್ನೇ ಮಗ ಹತ್ಯೆ ಮಾಡಿದ್ದಾನೆ. ತಾಯಿ ಬೀದಿ ಹೆಣವಾಗಿದ್ದನ್ನು ನೋಡಿ ಸ್ಥಳೀಯರು ಮಮ್ಮಲ ಮರುಗಿದ್ದಾರೆ.
ಇನ್ನು ಘಟನೆ ಸಂಬಂಧ ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಕ್ಷಣವೇ ಕಾರ್ಯಾಚರಣೆ ನಡೆಸಿದ ಬೆಟ್ಟದಪುರ ಠಾಣೆ ಪೊಲೀಸರು ಆರೋಪಿ ಹೇಮರಾಜ್ನನ್ನು ಬಂಧಿಸಿ, ತನಿಖೆ ಮುಂದುವರೆಸಿದ್ದಾರೆ.