News Karnataka Kannada
Monday, April 29 2024
ಮೈಸೂರು

ಮೈಸೂರು:  ಚಾಮುಂಡಿಬೆಟ್ಟಕ್ಕೆ ಹರಿದು ಬಂದ ಜನಸಾಗರ

Mysore (2)
Photo Credit :

ಮೈಸೂರು: ಕೊರೊನಾದಿಂದಾಗಿ ಸರ್ಕಾರ ಕಠಿಣ ನಿಯಮ ಮತ್ತು ಪ್ರವಾಸಿ ತಾಣಗಳಿಗೆ ನಿರ್ಬಂಧ ಹೇರಿದ್ದರಿಂದಾಗಿ ಚಾಮುಂಡಿಬೆಟ್ಟದತ್ತ ಬರುವವರ ಸಂಖ್ಯೆ ಕಡಿಮೆಯಾಗಿತ್ತು. ಆದರೆ ಈ ನಡುವೆ ಸರ್ಕಾರ ವೀಕೆಂಡ್ ಕರ್ಫ್ಯೂ ಮತ್ತು ನೈಟ್ ಕರ್ಫ್ಯೂನ್ನು ರದ್ದು ಗೊಳಿಸಿರುವ ಕಾರಣದಿಂದ ಭಾನುವಾರ ಚಾಮುಂಡಿ ಬೆಟ್ಟಕ್ಕೆ ಜನಸಾಗರವೇ ಹರಿದು ಬಂದಿತ್ತು.

ಮಕ್ಕಳು ಯುವಕ, ಯುವತಿಯರು, ವೃದ್ಧರು ಹೀಗೆ ಎಲ್ಲರೂ ಚಾಮುಂಡಿಬೆಟ್ಟದ ಪಾದದ ಮೂಲಕ ಒಂದು ಸಾವಿರ ಮೆಟ್ಟಿಲನ್ನೇರಿ ಚಾಮುಂಡಿಬೆಟ್ಟಕ್ಕೆ ಲಗ್ಗೆಯಿಟ್ಟ ದೃಶ್ಯ ಗೋಚರಿಸಿತು. ಮುಂಜಾನೆ ಐದು ಗಂಟೆ ಯಿಂದಲೇ ಮೆಟ್ಟಿಲೇರಲು ಆಗಮಿಸುತ್ತಿದ್ದದ್ದು ಕಂಡು ಬಂದಿತು. ಕಳೆದ ಕೆಲವು ಸಮಯದಿಂದ ಕೊರೊನಾಕ್ಕೆ ಹೆದರಿ ಮತ್ತು  ಸರ್ಕಾರ ನಿರ್ಬಂಧ ಹೇರಿದ್ದರಿಂದ ಮನೆಯಲ್ಲಿದ್ದವರು ವಾರಾಂತ್ಯದ ಭಾನುವಾರ ಮೈಕೊಡವಿಕೊಂಡು ಚಾಮುಂಡಿಬೆಟ್ಟದತ್ತ ಲಗ್ಗೆಯಿಟ್ಟಿದ್ದರಿಂದ ಜನಸಾಗರ  ಸೃಷ್ಟಿಯಾಗಿತ್ತು.

ಮುಂಜಾನೆಯ ಚುಮು ಚುಮು ಬೆಳಕಿನಲ್ಲಿ ಬೀಸುವ ತಂಗಾಳಿ ನಡುವೆ ಒಂದೊಂದೇ ಮೆಟ್ಟಿಲೇರುತ್ತಾ ಹಸಿರ ಸಿರಿಯ ಸೊಬಗು  ಸವಿಯುತ್ತಾ ನಿರಾಳರಾಗಲು ಜನ ಗುಂಪು ಗುಂಪಾಗಿ ಬಂದಿದ್ದರಿಂದ ಚಾಮುಂಡಿಬೆಟ್ಟದ ಪಾದದ ಬಳಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ವಾರಾಂತ್ಯದ ಶನಿವಾರ ಮತ್ತು ಭಾನುವಾರ ಚಾಮುಂಡಿಬೆಟ್ಟಕ್ಕೆ ಜನ ತಂಡೋಪ ತಂಡವಾಗಿ ಆಗಮಿಸುವುದು ಹೊಸತೇನಲ್ಲ. ಆದರೆ ಕೊರೊನಾ ಕಾರಣದಿಂದ ಡಿಸೆಂಬರ್ ಮತ್ತು ಜನವರಿ ಆರಂಭದಲ್ಲಿ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಂಡಿದ್ದರಿಂದ ಹೆಚ್ಚಿನ ಜನ ಮೆಟ್ಟಿಲೇರಲು ಬರುತ್ತಿರಲಿಲ್ಲ. ಆದರೆ ಈಗ ಮೈಸೂರಿನಲ್ಲಿ ಹೆಚ್ಚಿನ ಕೊರೊನಾ ಪ್ರಕರಣಗಳು ಪತ್ತೆಯಾಗುತ್ತಿದ್ದರೂ ಕೂಡ ಆ ಬಗ್ಗೆ ತಲೆಕೆಡಿಸಿಕೊಳ್ಳದೆ ಜನ ಆಗಮಿಸಿದ್ದು ಕಂಡು ಬಂದಿತು.

ಮೆಟ್ಟಿಲೇರಿ ತೆರಳಿದವರು ನಂದಿ, ವ್ಯೆ ಪಾಯಿಂಟ್‌ಗಳಲ್ಲಿ ನಿಸರ್ಗ ಸಿರಿಯನ್ನು ನೋಡುತ್ತಾ ಆನಂದಿಸುತ್ತಿದ್ದರು. ಹೀಗಾಗಿ ನಂದಿ ಸುತ್ತಮುತ್ತ ಇರುವ ಕಬ್ಬಿನ ಜ್ಯೂಸ್ ಅಂಗಡಿಗಳಿಗೆ ಜ್ಯೂಸ್‌ಗಾಗಿ ಜನ ಮುಗಿಬಿದ್ದದ್ದರು.

ಹಾಗೆನೋಡಿದರೆ ಮುಂಜಾನೆ ವಾಯುವಿಹಾರಕ್ಕೆ ಬರುವ ಮೈಸೂರು ನಗರ ವಾಸಿಗಳಿಗೆ ಚಾಮುಂಡಿಬೆಟ್ಟ ಆಕ್ಸಿಜನ್ ಕಣಜ ಇದ್ದಂತೆ. ಹೀಗಾಗಿ ಒಂದೊಳ್ಳೆಯ ಗಾಳಿ, ಮಾನಸಿಕ ನೆಮ್ಮದಿ, ಶರೀರಕ್ಕೆ ವ್ಯಾಯಾಮ, ಕಣ್ಣಿಗೆ ಹಸಿರಿನ ತಂಪು ಪಡೆಯಲು ಬರುವುದು ಸಹಜವಾಗಿದೆ. ನಿತ್ಯ ಸಾವಿರ ಮೆಟ್ಟಿಲೇರಿ ಚಾಮುಂಡಿತಾಯಿಯ ದರ್ಶನ ಮಾಡುವವರ ಸಂಖ್ಯೆ ನೂರಾರಿದೆ. ಕಳೆದ ಮೂವತೈದು ವರ್ಷಗಳಿಂದಲೂ ಬೆಟ್ಟವೇರುವವರಿದ್ದಾರೆ. ಅವರೆಲ್ಲರೂ ಪ್ರತಿದಿನವೂ ಮೆಟ್ಟಿಲೇರಿ ಚಾಮುಂಡಿದೇವಸ್ಥಾನಕ್ಕೆ ತೆರಳಿ  ದೇವರಿಗೆ ನಮಿಸಿ ಹಿಂತಿರುಗುವ ಪರಿಪಾಠವನ್ನಿಟ್ಟುಕೊಂಡಿದ್ದಾರೆ. ಇವರಲ್ಲಿ ಯುವಕ, ಯುವತಿಯರು, ಪುರುಷರು, ವೃದ್ಧರು, ಮಹಿಳೆಯರು ಹೀಗೆ ಎಲ್ಲರೂ ಇದ್ದು, ತಮ್ಮ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಲು ಮೆಟ್ಟಿಲೇರುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ.

ಖಾಯಂ ಆಗಿ ಚಾಮುಂಡಿಬೆಟ್ಟ ಹತ್ತುವುದರಿಂದ ಬಿಪಿ, ಶುಗರ್ ನೆಗಡಿ ದೂರವಾಗುತ್ತದೆಯಂತೆ, ಮಾನಸಿಕ ನೆಮ್ಮದಿ, ದೈಹಿಕ ಆರೋಗ್ಯ ವೃದ್ಧಿಸುತ್ತದೆಯಂತೆ. ಇನ್ನು ದಿನಾಲೂ ಮೆಟ್ಟಿಲೇರಿದರೆ ಮಂಡಿಚಿಪ್ಪು ಸವೆಯುತ್ತದೆ ಎಂಬ ಮಾತನ್ನು ಇವರಾರು  ಒಪ್ಪುವುದಿಲ್ಲ. ವಯಸ್ಸಾದ ಮೇಲೆ ಇದು ಸಹಜ. ಬೆಟ್ಟವೇರಿದಾಕ್ಷಣ ಮಂಡಿ ಚಿಪ್ಪು ಸವೆಯುತ್ತದೆ ಎನ್ನುವುದು ಸುಳ್ಳು ನಾವು ಹತ್ತಾರು ವರ್ಷಗಳಿಂದ ಹತ್ತುತ್ತಿದ್ದು ಅಂತಹ ಸಮಸ್ಯೆ ಎದುರಾಗಿಲ್ಲ ಎಂದು ಹಲವರು ಅಭಿಪ್ರಾಯಪಡುತ್ತಾರೆ.

ವಾರಪೂರ್ತಿ ತಮ್ಮದೇ ಕೆಲಸ ಕಾರ್ಯಗಳ ಜಂಜಾಟದಲ್ಲಿದ್ದವರು ಭಾನುವಾರ ತಮ್ಮ ಕುಟುಂಬ ಅಥವಾಸಹದ್ಯೋಗಿಗಳೊಂದಿಗೆ ಬಂದು ನಿಧಾನವಾಗಿ ಒಂದೊಂದೇ ಮೆಟ್ಟಿಲೇರಿ, ಇಲ್ಲಿನ ನಂದಿ ಹಾಗೂ ವ್ಯೆ ಪಾಯಿಂಟ್ ಗಳಲ್ಲಿ ಮೈಸೂರು ನಗರ ಸೇರಿದಂತೆ ದೂರದ ಬೆಟ್ಟಗುಡ್ಡಗಳ ಸುಂದರ ವಿಹಂಗಮ ನೋಟಗಳನ್ನು ನೋಡಿ ಬಳಿಕ  ಚಾಮುಂಡೇಶ್ವರಿಯ ದರ್ಶನ  ಮಾಡಿ ಮನೆಯ ಹಾದಿ ಹಿಡಿಯುವ ಪರಿಪಾಠವನ್ನಿಟ್ಟು ಕೊಂಡಿರುವುದರಿಂದ ವಾರಾಂತ್ಯದಲ್ಲಿ ಜನಸಾಗರವೇ ಸೃಷ್ಟಿಯಾಗಿ ಬಿಡುತ್ತದೆ.

ಈ ಬಾರಿ ಅಕಾಲಿಕ ಮಳೆ ಡಿಸೆಂಬರ್ ತಿಂಗಳ ತನಕ ಸುರಿದಿದ್ದರಿಂದ ಚಾಮುಂಡಿಬೆಟ್ಟದ ಅರಣ್ಯ ಹಸಿರಾಗಿದೆ. ಇಲ್ಲದೆ ಹೋಗಿದ್ದರೆ ಈ ವೇಳೆಗೆಲ್ಲ ಕುರುಚಲು ಗಿಡಗಳು ಒಣಗಿ ಅರಣ್ಯ ಬೋಳಾಗುತ್ತಿತ್ತು. ಸದ್ಯ ಇಡೀ ಪರಿಸರ ಹಸಿರಾಗಿದ್ದು ಸುಂದರ ವಾತಾವರಣ ಹುರುಪು ತುಂಬುತ್ತಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು