ಮೈಸೂರು : ಪಾನಮತ್ತನಾಗಿ ಆ್ಯಂಬುಲೆನ್ಸ್ ನ್ನು ಚಾಲಿಸದೆ ಅರ್ಧ ದಾರಿಯಲ್ಲಿ ನಿಲ್ಲಿಸಿದ ಪರಿಣಾಮ ಸಕಾಲದಲ್ಲಿ ಚಿಕಿತ್ಸೆ ಸಿಗದೆ ರೋಗಿ ಸಾವನ್ನಪ್ಪಿದ ಘಟನೆ ನಡೆದಿದ್ದು ಈ ಸಂಬಂಧ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.
ಹಾಸನದ ಸಿದ್ದಾಪುರ ಗ್ರಾಮದ ತೀರ್ಥಾನಂದ (30) ಮೃತಪಟ್ಟ ರೋಗಿ. ಇವರ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿತ್ತು. ಚಿಕಿತ್ಸೆಗೆಂದು ಸೋಮವಾರಪೇಟೆ ಆಸ್ಪತ್ರೆಗೆ ತೆರಳಿದ ಸಂದರ್ಭ ವೈದ್ಯರು ಕೂಡಲೇ ಬೆಂಗಳೂರಿನ ನಿಮಾನ್ಸ್ ಗೆ ತೆರಳುವಂತೆ ಸೂಚನೆ ನೀಡಿದ್ದರು. ಅದರಂತೆ ಆ್ಯಂಬುಲೆನ್ಸ್ ನಲ್ಲಿ ರೋಗಿಯನ್ನು ಕರೆದುಕೊಂಡು ಬೆಂಗಳೂರಿನತ್ತ ಹೊರಡಲಾಗಿತ್ತು.
ಆದರೆ ಚಾಲಕ ಮಾತ್ರ ಅಲ್ಲಲ್ಲಿ ಮದ್ಯ ಸೇವನೆ ಮಾಡಿದ್ದಲ್ಲದೆ . ಮೈಸೂರಿನ ಹುಣಸೂರು ನಗರದಲ್ಲಿ ಆ್ಯಂಬುಲೆನ್ಸ್ ನಿಲ್ಲಿಸಿ ಮುಂದೆ ತೆರಳಲು ಸಾಧ್ಯವಿಲ್ಲವೆಂದು ಮಲಗಿಬಿಟ್ಟಿದ್ದನು. ಈ ವೇಳೆ ರೋಗಿ ಕಡೆಯವರು ಸ್ಥಳೀಯರ ಸಹಾಯ ಪಡೆದು ಬೇರೆ ವ್ಯವಸ್ಥೆ ಮಾಡಿಕೊಂಡು ರೋಗಿ ತೀರ್ಥಾನಂದನನ್ನು ಮೈಸೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಚಿಕಿತ್ಸೆ ಫಲಕಾರಿಯಾಗದೆ ತೀರ್ಥಾನಂದ ಸೋಮವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ಈ ಸಂಬಂಧ ಆ್ಯಂಬುಲೆನ್ಸ್ ಹಾಗೂ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗಿದೆ.