ಮೈಸೂರು: ಮೈಸೂರಿನ ಶ್ರೀ ಸ್ವರ್ಣ ನೃಸಿಂಹ ದತ್ತ ಸಾಯಿ ಪೀಠಿಕಾ ಸೇವಾ ಟ್ರಸ್ಟ್ (ರಿ) ವತಿಯಿಂದ ಸರಸ್ವತಿಪುರಂನಲ್ಲಿರುವ ಕಾಮಾಕ್ಷಿ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ ನಡೆಯಿತು.
ಶ್ರೀ ಅರ್ಜುನ್ ಅವಧೂತ ಮಹಾರಾಜರ ತಂದೆ ಆನಂದ್ ಅವರ ವರ್ಷದ ಕಾರ್ಯದ ನಿಮಿತ್ತ ನಡೆದ ರಕ್ತದಾನ ಶಿಬಿರದಲ್ಲಿ ಹಲವು ಸ್ವಯಂಸೇವಕರು ಪಾಲ್ಗೊಂಡು ರಕ್ತದಾನ ಮಾಡಿದರು.
ಈ ವೇಳೆ ಮಾತನಾಡಿದ ಕಾಮಾಕ್ಷಿ ಆಸ್ಪತ್ರೆಯ ಮುಖ್ಯಸ್ಥರಾದ ಡಾ.ಕಾಮತ್ ಅವರು, ಕೋವಿಡ್ ಸಂದರ್ಭದಲ್ಲೂ ಟ್ರಸ್ಟ್ ವತಿಯಿಂದ ರಕ್ತದಾನ ಶಿಬಿರ ನಡೆಸುತ್ತಿರುವುದು ಶ್ಲಾಘನೀಯ. ವಿದ್ಯೆಯೆಂಬ ಸಂಪತ್ತಿನಿಂದ ಯಾವ ಮಕ್ಕಳೂ ವಂಚಿತರಾಗಬಾರದು ಎಂಬ ಗುರುಗಳ ಮಾತನ್ನು ನಿಜವಾಗಿಸಲು ಟ್ರಸ್ಟ್ ನ ಪದಾಧಿಕಾರಿಗಳು ಶ್ರೀ ಆನಂದರವರ ಸ್ಮರಣಾರ್ಥವಾಗಿ ಪ್ರತಿವರ್ಷವೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ವಿದ್ಯಾನಂದಶ್ರೀ ಎಂಬ ಹೆಸರಿನಿಂದ ವಿದ್ಯಾರ್ಥಿ ವೇತನವನ್ನು ನೀಡುತ್ತಿರುವುದು ಉತ್ತಮ ಕಾರ್ಯವಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಮುಂದುವರೆದು ಸಾಕಷ್ಟು ಫಲಾನುಭವಿಗಳಿಗೆ ದಾರಿ ದೀಪವಾಗಲಿ ಎಂದು ಹೇಳಿದರು.
ಇದೇ ವೇಳೆ ಲಕ್ಷ್ಮೀಪುರಂ ಪೊಲೀಸ್ ಮಹಿಳಾ ಸಿಬ್ಬಂದಿಗಳಿಗೆ ರಾತ್ರಿಯ ಪಾಳಿಯಲ್ಲಿ ಕೆಲಸಕ್ಕೆ ಅನುಕೂಲ ಮಾಡಿ ಕೊಡುವ ಉದ್ದೇಶದಿಂದ ಜಾಕೆಟ್ ಗಳನ್ನು ಟ್ರಸ್ಟ್ ವತಿಯಿಂದ ವಿತರಿಸಲಾಯಿತು.
ಈ ಸಂದರ್ಭ ರಕ್ತನಿಧಿಯ ಮುಖ್ಯಸ್ಥರಾದ ಡಾ.ಪ್ರಸನ್ನ ಕುಮಾರ್, ಟ್ರಸ್ಟ್ನ ಸಾಮಾಜಿಕ ಚಟುವಟಿಕೆ ಮುಖ್ಯಸ್ಥರಾದ ಡಾ.ಸೋನಿಯಾ ಮಂದಪ್ಪ, ದ್ವಾರಕನಾಥ್, ಸವಿತಾ ಗಣೇಶ್, ಕೆ.ಎನ್.ರೂಪ, ವಿಕಾಸ್ ಹಾಗೂ ಸ್ಕಂದನ್ ಇದ್ದರು.