ಮೈಸೂರು : ಕರ್ಕಶ ಸದ್ದು ಮಾಡುವ ವಾಹನಗಳಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂಬ ಆರೋಪ ಆಗಾಗ್ಗೆ ಕೇಳಿ ಬರುತ್ತಲೇ ಇದೆ. ಕೆಲವರಿಗೆ ಬುಲೆಟ್ ಗಳಿಗೆ ಸೈಲೆನ್ಸ್ ರ್ ಅಳವಡಿಸಿ ಎಲ್ಲೆಂದರಲ್ಲಿ ಕರ್ಕಶ ಸದ್ದು ಮಾಡುತ್ತಾ ಓಡಿಸಿ ವಿಕೃತ ಖುಷಿ ಪಡುವುದು ಮಾಮೂಲಿಯಾಗಿತ್ತು.
ಈ ಬಗ್ಗೆ ಪೊಲೀಸರಿಗೆ ಮೇಲಿಂದ ಮೇಲೆ ದೂರುಗಳು ಬಂದಿದ್ದರಿಂದ ಕಾರ್ಯಾಚರಣೆಗಿಳಿದ ಸಿದ್ಧಾರ್ಥ ಸಂಚಾರಿ ಠಾಣೆಯ ಪೊಲೀಸರು ಭಾರೀ ಹಾಗೂ ಕರ್ಕಶ ಸದ್ದು ಮಾಡುವ ಬುಲೆಟ್ ಸೇರಿದಂತೆ ವಾಹನಗಳನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಸಿದ್ಧಾರ್ಥನಗರ ಸಂಚಾರಿ ಠಾಣೆಯ ಪೊಲೀಸರು ಕಳೆದ ಮೂರು ದಿನಗಳಿಂದ ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದು, ಭಾರೀ ಸದ್ದು ಮಾಡುವ 12ಕ್ಕೂ ಹೆಚ್ಚು ವಾಹನಗಳನ್ನು ವಶಕ್ಕೆ ಪಡೆದು ಕ್ರಮ ಕೈಗೊಂಡಿದ್ದಾರೆ.
ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಅವರ ನಿರ್ದೇಶನದ ಮೇರೆಗೆ ಎಸಿಪಿ ಗಂಗಾಧರಯ್ಯ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪೊಲೀಸ್ ನಿರೀಕ್ಷರಾದ ನಟರಾಜ್, ಸಬ್ ಇನ್ ಸ್ಪೆಕ್ಟರ್ ಭವ್ಯ ಮತ್ತು ಇನ್ ಸ್ಪೆಕ್ಟರ್ ಅನಿಲ್ ಕುಮಾರ್ ಮೊದಲಾದ ಸಿಬ್ಬಂದಿಗಳು ಭಾಗವಹಿಸಿದ್ದರು.