ಮೈಸೂರು : ನಾನು ರಾಜ್ಯದ ಎರಡು ಪಕ್ಷಗಳನ್ನು ಕಿತ್ತೊಗೆಯಲು ಜನರ ಮುಂದೆ ಸುಫಾರಿ ತೆಗೆದುಕೊಂಡು ಬರುತ್ತಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ವಿರುದ್ಧ ಮಾತನಾಡಲು ಸುಫಾರಿ ಪಡೆದಿದ್ದಾರೆ ಎಂಬ ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ಅವರ ಹೇಳಿಕೆಗೆ ಟಾಂಗ್ ನೀಡಿದರು. ನನ್ನ ಹೇಳಿಕೆ ಯಾವುದೇ ಧರ್ಮದ, ಜಾತಿಯ ಜನರ ಓಲೈಕೆಗಾಗಿ ಅಲ್ಲ ಸಾಮರಸ್ಯ ಕಾಪಾಡಲು ಎಂದು ಸ್ಪಷ್ಟಪಡಿಸಿದರು.
ಗೃಹ ಸಚಿವ ಯುವಕನ ಕೊಲೆಗೆ ಸಂಬಂಧಿಸಿದಂತೆ ಹೇಳಿಕೆ ನೀಡಿದ ಗೃಹಸಚಿವ ಆರಗ ಜ್ಞಾನೇಂದ್ರ ಅವರ ಹೇಳಿಕೆಗೆ ಸಂಬಂಧಿಸಿದಂತೆ ಮಾತನಾಡಿ, ಜವಾಬ್ದಾರಿಯುತ ಸ್ಥಾನದಲ್ಲಿರುವವರು ಬೇಜವಾಬ್ದಾರಿ ಹೇಳಿಕೆಗಳನ್ನು ನೀಡಿದಾಗ ಸಮಾಜದ ಸ್ವಾಸ್ಥ್ಯ ಯಾವ ರೀತಿ ಆಗಲಿದೆ ಎಂದು ಯೋಚಿಸಬೇಕು. ಮುಖ್ಯಮಂತ್ರಿಗಳು ಮೌನವಹಿಸಿದ್ದಾರೆ. ಮುಖ್ಯಮಂತ್ರಿಗಳ ಮೌನ ರಾಜ್ಯದಲ್ಲಿ ದೊಡ್ಡ ಅನಾಹುತಕ್ಕೆ ಕಾರಣವಾಗಲಿದೆ. ನಿಮ್ಮ ಮೌನವನ್ನು ಮುರಿಯಿರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾನು ಅವರಷ್ಟು ಬುದ್ಧಿವಂತ ಅಲ್ಲ, ಅವರಷ್ಟು ಓದಿಲ್ಲ ನಾನು. ಆದರೆ ಸಾರ್ವಜನಿಕವಾಗಿ ಜನರ ಜೊತೆ ಬದುಕಬೇಕೆಂಬ ಬದುಕನ್ನು ತಿಳಿದುಕೊಂಡಿದ್ದೇನೆ. ಜನರ ಸಮಸ್ಯೆಗೆ ಯಾವ ರೀತಿ ಸ್ಪಂದಿಸಬೇಕೆಂದು ಅರ್ಥ ಮಾಡಿಕೊಂಡಿದ್ದೇನೆ. ಸರ್ಕಾರ ನಡೆಸುವವರು ಪ್ರಾರಂಭಿಕ ಹಂತದಲ್ಲಿ ಇಂತಹ ಸಮಸ್ಯೆಗಳನ್ನು ಚಿವುಟಿ ಹಾಕಬೇಕು ಇಲ್ಲದೆ ಹೋದರೆ ಭವಿಷ್ಯದಲ್ಲಿ ಸಂಕಷ್ಟ ಎದುರಿಸಬೇಕಾಗುತ್ತದೆ ಎಂದರು.
ಸಮಾಜದಲ್ಲಿ ಬಾಂಧವ್ಯದ ಬಾಂಡಿಂಗ್ ನಶಿಸಿಹೋಗುತ್ತಿದೆ. ಅಪಘಾತದಲ್ಲಿ ಸಾಯುವವರನ್ನು ರಕ್ಷಿಸುವುದು ಹೇಗೆಂಬ ಯೋಚನೆ ಸರ್ಕಾರಕ್ಕಿಲ್ಲ. ಬೆಂಗಳೂರಿನಲ್ಲಿ ತಾಯಿಗೆ ಊಟ ತೆಗೆದುಕೊಂಡು ಹೋಗುವಾಗ ಯುವಕ ಗುಂಡಿಯಲ್ಲಿ ಬಿದ್ದು ಸತ್ತ, ಉಜ್ವಲ ಭವಿಷ್ಯ ಇದ್ದ ಮಗು ರಸ್ತೆ ದಾಟುವಾಗ ಸತ್ತಿದ್ದಾಳೆ. ಅದರ ಬಗ್ಗೆ ಮಹತ್ವವಿಲ್ಲ. ಆದರೆ ಮಂಗಳವಾರ ನಡೆದ ಕೊಲೆ ಅವರಿಗೆ ಮಹತ್ವದ್ದಾಗಿದೆ. ಬಿಜೆಪಿ ಸಮಾಜ ಹಾಳು ಮಾಡುವ ಕೆಲಸಕ್ಕೆ ಹೊರಟಿದೆ ಎಂದು ಕಿಡಿಕಾರಿದರು.