ಮೈಸೂರು: ನಗರದಲ್ಲಿ ಮನೆಮನೆಗೆ ತೆರಳಿ ಪಡಿತರ ಅಕ್ಕಿಯನ್ನು ಕಡಿಮೆ ಬೆಲೆಗೆ ಖರೀದಿಸಿ ಬಳಿಕ ಪಾಲಿಸ್ ಮಾಡಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ದಂಧೆ ನಡೆಯುತ್ತಿದ್ದು, ಆಗೊಮ್ಮೆ ಈಗೊಮ್ಮೆ ಮಾತ್ರ ಬೆಳಕಿಗೆ ಬರುತ್ತಿದೆ.
ಸರ್ಕಾರ ಬಡವರಿಗೆ ಪಡಿತರ ಅಕ್ಕಿಯನ್ನು ನೀಡುತ್ತಿದ್ದು, ಈ ಅಕ್ಕಿಗಳನ್ನು ಕೆಲವರು ಮಾರಾಟ ಮಾಡುತ್ತಿದ್ದು ಇದನ್ನು ಖರೀದಿಸಲೆಂದೇ ಕೆಲವರು ಬೀದಿ ಬೀದಿ ಅಲೆಯುವುದು ಕಂಡು ಬರುತ್ತಿದೆ. ಸರ್ಕಾರ ನೀಡುವ ಅಕ್ಕಿಯನ್ನು ಪಡಿತರದಾರರಿಂದ ಹತ್ತು ಹನ್ನೊಂದು ರೂಪಾಯಿಗೆ ಖರೀದಿಸುವ ಕೆಲವರು ಬಳಿಕ ಅದನ್ನು ಬೇರೆಡೆಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ.
ನಗರದ ಹಲವು ಬೀದಿಗಳಿಗೆ ವಾಹನಗಳಲ್ಲಿ ತೂಕದ ಯಂತ್ರಗಳನ್ನಿಟ್ಟು ಕೊಂಡು ಬರುವ ಖರೀದಿದಾರರು ಸ್ಥಳದಲ್ಲಿಯೇ ತೂಕ ಮಾಡಿ ಕೆಜಿಗೆ ಹನ್ನೊಂದು ಅಥವಾ ಹನ್ನೆರಡು ರೂಪಾಯಿಗಳಿಗೆ ಅಕ್ಕಿಯನ್ನು ಖರೀದಿ ಮಾಡುತ್ತಾರೆ. ಬಳಿಕ ಗೋದಾಮುಗಳಲ್ಲಿ ಸಂಗ್ರಹಿಸಿ ಹೆಚ್ಚಿನ ಬೆಲೆಗೆ ಬೇರೆಡೆಗೆ ಮಾರಾಟ ಮಾಡುತ್ತಾರೆ.
ನಗರದಲ್ಲಿ ಇದೊಂದು ದಂಧೆಯಾಗಿ ಮಾರ್ಪಟ್ಟಿದ್ದು, ಇದಕ್ಕೆ ಬ್ರೇಕ್ ಹಾಕುವ ಕೆಲಸವನ್ನು ಸಂಬಂಧಿಸಿದ ಇಲಾಖೆಗಳು ಮಾಡುತ್ತಿಲ್ಲ. ಈ ನಡುವೆ ಮನೆಗಳಿಂದ ಪಡಿತರ ಅಕ್ಕಿ ಖರೀದಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಮೇಟಗಳ್ಳಿ ಠಾಣೆ ಪೊಲೀಸರು ಬಂಧಿಸಿದ್ದು ಆತನಿಂದ 5.33 ಕ್ವಿಂಟಾಲ್ ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ.
ಆಹಾರ ನಿರೀಕ್ಷಕ ವೇಣುಗೋಪಾಲ್ ಅವರಿಗೆ ಬಂದ ಮಾಹಿತಿಯಂತೆ ಪೊಲೀಸರ ಜೊತೆ ಆಹಾರ ಇಲಾಖೆ ಅಧಿಕಾರಿಗಳು ಕುಂಬಾರಕೊಪ್ಪಲಿನ ಕಿಡಿಗಣ್ಣಮ್ಮನ ಬಡಾವಣೆಯಲ್ಲಿ ನಿಂತಿದ್ದ ಪ್ಯಾಸೆಂಜರ್ ಆಟೋವನ್ನು ತಪಾಸಣೆ ನಡೆಸಿದಾಗ ಅದರಲ್ಲಿ 12 ಚೀಲಗಳಲ್ಲಿ ಒಟ್ಟು 5.33 ಕ್ವಿಂಟಾಲ್ ಪಡಿತರ ಅಕ್ಕಿ ಪತ್ತೆಯಾಗಿದೆ.
ಆರೋಪಿ ಗೌಸಿಯಾ ನಗರದ ಅಫ್ಜಲ್ ಪಾಷಾ (26)ಎಂದು ಗುರುತಿಸಲಾಗಿದ್ದು, ಈತನನ್ನು ಪೊಲೀಸರು ವಿಚಾರಣೆಗೊಳಪಡಿಸಿದ ವೇಳೆ ಮನೆಗಳಿಂದ ಪಡಿತರ ಅಕ್ಕಿಯನ್ನು ಖರೀದಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವುದಾಗಿ ಬಾಯಿ ಬಿಟ್ಟಿದ್ದಾನೆ.
ಇಂತಹವರು ನಗರದಲ್ಲಿ ಇನ್ನಷ್ಟು ಮಂದಿಯಿದ್ದು, ಸರ್ಕಾರ ನೀಡುವ ಯೋಜನೆಗಳು ದುರುಪಯೋಗವಾಗುತ್ತಿರುವುದು ಎದ್ದು ಕಾಣುತ್ತಿದೆ. ಈ ನಿಟ್ಟಿನಲ್ಲಿ ಸಂಬಂಧಿಸಿದವರು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ.