ಮೈಸೂರು : ವಿಧಾನ ಪರಿಷತ್ ಚುನಾವಣೆಯಲ್ಲಿ ಯಾವ ಪಕ್ಷದೊಂದಿಗೂ ಹೊಂದಾಣಿಕೆ ಮಾಡಿಕೊಂಡಿಲ್ಲ ಎಂದು ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
ಭಾನುವಾರ ನಗರದ ರಾಜೇಂದ್ರ ಭವನದಲ್ಲಿ ನಡೆದ ವಿಧಾನ ಪರಿಷತ್ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಅಧಿಕಾರ ಇರಲಿ, ಇಲ್ಲದಿರಲಿ ಬಿ.ಎಸ್ . ಯಡಿಯೂರಪ್ಪ ಎಂದೆಂದಿಗೂ ರಾಜಾಹುಲಿಯೆ ಎಂದು ಬಣ್ಣಿಸಿದರು. ರಘು ಕೌಟಿಲ್ಯ ಪಕ್ಷದ ಸರ್ವಸಮ್ಮತ ಅಭ್ಯರ್ಥಿ ಆಗಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ಒಗ್ಗಟ್ಟಿಲ್ಲ. ಜೆಡಿಎಸ್ ನ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಜೆಡಿಎಸ್ ಪರ ಪ್ರಚಾರಕ್ಕೆ ಹೋದರೆ, ಅವರ ಪಕ್ಷದ ಶಾಸಕರೇ ಕಾಲೆಳೆಯುತ್ತಿದ್ದಾರೆ.
ಒಂದೆಡೆ ಚಾಮುಂಡೇಶ್ವರಿಯಲ್ಲಿ ಜಿಟಿಡಿ, ಮತ್ತೊಂದೆಡೆ ಪಿರಿಯಾಪಟ್ಟಣ ಶಾಸಕ ಕುಮಾರಸ್ವಾಮಿ ಕಾಲೆಳೆಯುತ್ತಿದ್ದಾರೆ.
ಆದರೆ, ಬಿಜೆಪಿಯಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಚುನಾವಣೆ ಎದುರಿಸುತ್ತಿದ್ದೇವೆ.ಮೈಸೂರು-ಚಾಮರಾಜನಗರ ಕ್ಷೇತ್ರದಲ್ಲಿ ನಾವು ಯಾರೊಂದಿಗೂ ಹೊಂದಾಣಿಕೆ ಮಾಡಿಕೊಂಡಿಲ್ಲ.
ಯಾರೊಂದಿಗೂ ಒಳ ಒಪ್ಪಂದವೂ ಇಲ್ಲ, ಹೊರ ಒಪ್ಪಂದವೂ ಇಲ್ಲ. ಹಾಗಾಗಿ ಬಿಜೆಪಿ ಅಭ್ಯರ್ಥಿ ರಘು ಕೌಟಿಲ್ಯರಿಗೆ ಪ್ರಥಮ ಪ್ರಾಶಸ್ತ್ಯದ ಮತಗಳನ್ನು ನೀಡಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.