ಮೈಸೂರು: ರೋಟರಿ ಕ್ಲಬ್ ಮೈಸೂರು ಪಶ್ಚಿಮ ಹಾಗೂ ಸಹಜ ಸಮೃದ್ಧ ಆಶ್ರಯದಲ್ಲಿ ನಂಜರಾಜ ಬಹದ್ದೂರು ಛತ್ರದಲ್ಲಿ ಆರಂಭಗೊಂಡಿರುವ ಗೆಡ್ಡೆ ಗೆಣಸು ಮೇಳವು ತಿನಿಸು ಪ್ರಿಯರನ್ನು ಸೆಳೆಯುತ್ತಿದೆ.
ಪ್ರತಿವರ್ಷದಂತೆ ಈ ಬಾರಿಯೂ ಗೆಡ್ಡೆಗೆಣಸು ಮೇಳವು ನಡೆಯುತ್ತಿದ್ದು, ಮೇಳದಲ್ಲಿ 120ಕ್ಕೂ ಹೆಚ್ಚು ವಿವಿಧ ಬಗೆಯ ಗೆಡ್ಡೆ-ಗೆಣಸುಗಳು ಪ್ರದರ್ಶನಗೊಂಡಿದ್ದು ಮಾರಾಟವಾಗುತ್ತಿದೆ. ಈ ಗೆಡ್ಡೆ ಗೆಣಸನ್ನು ಪುತ್ತೂರು, ಶಿರಸಿ, ಜೊಯಿಡಾ, ಮೈಸೂರು, ಪಿರಿಯಾಪಟ್ಟಣ, ಎಚ್.ಡಿ.ಕೋಟೆ, ಕುಂದಗೋಳ ಹಾಗೂ ಶಿಗ್ಗಾವಿ ತಾಲೂಕಿನ ರೈತರ ಗುಂಪುಗಳು ಹೀಗೆ ಹಲವೆಡೆಯಿಂದ ತಂದು ಪ್ರದರ್ಶನಕ್ಕಿಡಲಾಗಿದೆ. ವಿವಿಧ ಪ್ರಭೇದಕ್ಕೆ ಸೇರಿರುವ, ವೈವಿಧ್ಯಮಯ ಗಾತ್ರ ಹಾಗೂ ಆಕಾರದ ಗೆಡ್ಡೆ ಗೆಣಸುಗಳು ಮೇಳದಲ್ಲಿ ಗಮನ ಸೆಳೆಯುತ್ತಿವೆ. ಬುಡಕಟ್ಟು ಸಮುದಾಯಗಳು ಸಂರಕ್ಷಿಸಿಕೊಂಡು ಬಂದಿರುವ ಬೃಹತ್ ಗೆಡ್ಡೆ ಗೆಣಸುಗಳು ಮೇಳದ ಮುಖ್ಯ ಆಕರ್ಷಣೆಯಾಗಿದೆ. ಮೇಳವು ಫೆ.13ರಂದು ಸಂಜೆ 7 ಗಂಟೆಗೆ ಕೊನೆಗೊಳ್ಳಲಿದೆ.
ಮೇಳವನ್ನು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಉದ್ಘಾಟಿಸಿ ಮಾತನಾಡಿ ಪೌಷ್ಟಿಕಾಂಶಗಳ ಆಗರವಾಗಿರುವ ಗೆಡ್ಡೆ ಗೆಣಸುಗಳು ನಮ್ಮ ನಿಸರ್ಗದ ಅಮೂಲ್ಯ ಸಂಪತ್ತು. ಅವುಗಳನ್ನು ಸೇವಿಸುವ ಮೂಲಕ ನಮ್ಮ ಆರೋಗ್ಯ ಸಂರಕ್ಷಿಸಿಕೊಳ್ಳಬೇಕಿದೆ. ನಿಸರ್ಗದತ್ತವಾಗಿ ಬೆಳೆಯುವ ಅವುಗಳನ್ನು ಸೇವಿಸುವುದರಿಂದ ನಮ್ಮ ಆರೋಗ್ಯ ವೃದ್ಧಿಯಾಗುತ್ತದೆ. ರೋಗರುಜಿನಗಳನ್ನು ಎದುರಿಸುವ ಶಕ್ತಿ ಬರುತ್ತದೆ. ನಾವು ತಿನ್ನುವ ಆಹಾರಕ್ಕೂ, ಆರೋಗ್ಯಕ್ಕೂ ನೇರ ಸಂಬಂಧವಿದೆ. ಮನುಷ್ಯ ಕೃಷಿ ಮಾಡುವ ಮುನ್ನ ಗೆಡ್ಡೆ ಗೆಣಸು ಮನುಕುಲದ ಆಹಾರವಾಗಿದ್ದವು. ಇಂಥ ಗೆಡ್ಡೆ ಗೆಣಸು ನಮ್ಮ ಕೃಷಿ ಸಾಗುವಳಿಯ ಭಾಗವಾಗಬೇಕು ಎಂದು ಅವರು ತಿಳಿಸಿದರು.
ಗೆಡ್ಡೆಗೆಣಸು ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿದ ಮೈಸೂರು ತೋಟಗಾರಿಕೆ ವಿಶ್ವವಿದ್ಯಾಲಯದ ಡೀನ್ ಡಾ.ವಿಷ್ಣುವರ್ಧನ, ನಮ್ಮ ಪೂರ್ವಿಕರ ಆಹಾರವಾಗಿದ್ದ, ಪೋಷಕಾಂಶಗಳಿಂದ ಸಮೃದ್ಧವಾದ ನೈಸರ್ಗಿಕ ಗೆಡ್ಡೆ ಗೆಣಸುಗಳನ್ನು ಮತ್ತೆ ನಮ್ಮ ಅನ್ನದ ತಟ್ಟೆಗೆ ಬರಮಾಡಿಕೊಳ್ಳಬೇಕು. ಕಾಡಿನ ಗೆಣಸುಗಳನ್ನು ಬೇಯಿಸಿ ತಿನ್ನುವುದರ ಮೂಲಕ ನಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕಿದೆ ಎಂದರು.
ಹಾಸನದ ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ಮುಖ್ಯಸ್ಥ ಡಾ.ಎಚ್.ಅಮರ ನಂಜುಂಡೇಶ್ವರ ಮಾತನಾಡಿ, ಹೆಚ್ಚು ಶ್ರಮವಿಲ್ಲದೇ ಬೆಳೆಯಬಹುದಾದ ಕಂದಮೂಲಗಳು ಪ್ರಕೃತಿಯ ಅಮೂಲ್ಯ ಕೊಡುಗೆ. ಸುಲಭವಾಗಿ ಬೆಳೆಯುವ ಗೆಡ್ಡೆ ಗೆಣಸುಗಳತ್ತ ರೈತರು ನಿರ್ಲಕ್ಷ್ಯ ತೋರುತ್ತಿದ್ದಾರೆ. ಈ ಮನೋಭಾವದಿಂದ ಹೊರಬಂದು, ನಿಸರ್ಗದ ಕಾಣಿಕೆಯಾದ ಗೆಡ್ಡೆ ಗೆಣಸುಗಳನ್ನು ವ್ಯವಸಾಯದ ಒಂದು ಭಾಗವನ್ನಾಗಿ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ರೊಟೇರಿಯನ್ ಡಾ. ಬಿ. ಚಂದ್ರ, ಸಹಜ ಸಮೃದ್ಧದ ನಿರ್ದೇಶಕ ಜಿ. ಕೃಷ್ಣಪ್ರಸಾದ್ ಸೇರಿದಂತೆ ಇತರರು ಇದ್ದರು.