ಮೈಸೂರು: ಕೇಂದ್ರದಂತೆ ರಾಜ್ಯದಲ್ಲೂ ಮೂರು ಕೃಷಿ ವಿರೋಧಿ ಕಾನೂನುಗಳನ್ನು ವಾಪಸ್ ಪಡೆಯಲು ಆಗ್ರಹಿಸಿ 24ಕ್ಕೂ ಹೆಚ್ಚೂ ಸಂಘಟನೆಗಳ ಜನಾಂದೋಲಗಳ ಮಹಾಮೈತ್ರಿ ವತಿಯಿಂದ ಮಾ.15 ರಂದು ಜನಜಾಗೃತಿ ಜಾಥಾ ಹಾಗೂ ಸಮಾವೇಶವನ್ನು ಹಮ್ಮಿಕೊಂಡಿವೆ.
ತಿ.ನರಸೀಪುರ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ನಡೆದ ಜಾಥಾದ ಪೂರ್ವಭಾವಿ ಸಭೆಯಲ್ಲಿ ಜನಜಾಗೃತಿ ಜಾಥಾ ಹಾಗೂ ಸಮಾವೇಶದ ಪೋಸ್ಟರ್ ಹಾಗೂ ಕರಪತ್ರಗಳನ್ನು ಬಿಡುಗಡೆ ಮಾಡಲಾಗಿದೆ. ರೈತರಿಗೆ ಮತ್ತು ಸಾಮಾನ್ಯ ಬಡ ಕುಟುಂಬಗಳಿಗೆ ಮಾರಕವಾಗಿರುವ ಕರ್ನಾಟಕ ಸರ್ಕಾರದ ಮೂರು ಕರಾಳ ಕಾಯ್ದೆ ವಾಪಸ್ಸಾಗಬೇಕು. ಎಂಎಸ್ ಹಾಗೂ ಕಾಯ್ದೆಬದ್ಧ ಖಾತರಿ ಒತ್ತಾಯಿಸಿ ರಾಜ್ಯದಾದ್ಯಂತ ಬಸವ ಕಲ್ಯಾಣದಲ್ಲಿ ಜನಜಾಗೃತಿ ಜಾಥಾ ಆರಂಭವಾಗಿದೆ. 9 ರಿಂದ ಶಿವಮೊಗ್ಗದ ಕಾಗೋಡು ಹಾಗೂ ಶ್ರೀ ಮಲೆ ಮಹದೇಶ್ವರ ಬೆಟ್ಟದಿಂದ ಜಾಥಾ ಹೊರಡಲಿದ್ದು, 15 ರಂದು ಬೆಂಗಳೂರಿನಲ್ಲಿ ಸಮಾವೇಶ ನಡೆಯಲಿದೆ.
ರೈತರ ಬದುಕು ಹಾಗೂ ಸಾಮಾನ್ಯ ಕುಟುಂಬಗಳ ಜೀವನದ ಅರಿವಿಲ್ಲದೆ ಆಡಳಿತರೂಢ ಬಿಜೆಪಿ ಸರ್ಕಾರ ರೈತ, ಜನವಿರೋಧಿ ಕೃಷಿ ಕಾಯ್ದೆಗಳನ್ನು ಜಾರಿಗೆ ತಂದಿತು. ಇಂತಹ ಅವೈಜ್ಞಾನಿಕ ಕ್ರಮದಿಂದ ಹೈನುಗಾರಿಕೆ ಜಾನುವಾರುವನ್ನು ಸಾಗಾಣಿಕೆ ಮಾಡುತ್ತಿದ್ದ ರೈತ ಸೇರಿದಂತೆ ವಾಹನದ ಚಾಲಕ ಹಾಗೂ ಮಾಲೀಕ ಮೂವರು ಪೊಲೀಸರಿಂದ ಕಾನೂನು ತೊಂದರೆಗೆ ಸಿಲುಕಿ ತಲೆ ಮರೆಸಿಕೊಂಡರು.
ಸ್ಥಳೀಯ ಸೋದರರಂತೆ ಇರುವ ಪೊಲೀಸರೊಂದಿಗೆ ಸಂಘರ್ಷ ನಡೆಸಿ, ಲಕ್ಷಾಂತರ ಹಣವನ್ನು ಖರ್ಚು ಮಾಡಿ ಜಾಮೀನು ಪಡೆಯಬೇಕಾಯಿತು. ಇಂತಹ ಸರ್ಕಾರವನ್ನು ಮುಂದಿನ ದಿನಗಳಲ್ಲಿ ಅಧಿಕಾರದಿಂದ ದೂರವಿಡಲು ಜನಜಾಗೃತಿ ಹೋರಾಟವನ್ನು ಮಾಡಬೇಕಾದ ಅನಿವಾರ್ಯತೆ ಪ್ರತಿಯೊಬ್ಬರ ಮುಂದಿದೆ. ನಮ್ಮ ಹೋರಾಟವನ್ನು ಬೆಂಬಲಿಸಬೇಕೆಂದು ಪ್ರಗತಿಪರ ಸಂಘಟನೆಗಳ ಮುಖಂಡ ಉಗ್ರನರಸಿಂಹೇಗೌಡ ಮನವಿ ಮಾಡಿದ್ದಾರೆ.