ಮೈಸೂರು: ನಕಲಿ ಕ್ಲಿನಿಕ್ ಮೇಲೆ ದಾಳಿ ನಡೆಸಿದ ಆರೋಗ್ಯಾಧಿಕಾರಿಗಳು ಹಾಗೂ ಪೊಲೀಸರು ಅಲ್ಲಿದ್ದ ಪರಿಕರಗಳನ್ನು ವಶಕ್ಕೆ ತೆಗೆದುಕೊಂಡು ಕ್ಲಿನಿಕ್ಗೆ ಬೀಗ ಜಡಿದ ಘಟನೆ ಮೈಸೂರಿನ ಕೆ.ಎನ್.ಪುರದಲ್ಲಿ ನಡೆದಿದೆ.
ಆಲ್ಟರ್ ನೇಟಿವ್ ಮೆಡಿಸನ್ ಎಂಬ ಫಲಕವನ್ನು ಹಾಕಿಕೊಂಡು ಕವಿತಾ ಎಂಬಾಕೆ ಕ್ಲಿನಿಕ್ ನಡೆಸುತ್ತಿರುವ ಬಗ್ಗೆ ಡಿಸಿ, ಡಿಎಚ್ಒ ಕಚೇರಿಗೆ ಹಾಗೂ ಪೊಲೀಸರಿಗೆ ಸಾರ್ವಜನಿಕರಿಂದ ದೂರುಗಳು ಬಂದಿದ್ದವು.
ಈ ಹಿನ್ನಲೆಯಲ್ಲಿ ಆರೋಗ್ಯಾಧಿಕಾರಿ ಡಾ.ಕೆ.ಹೆಚ್.ಪ್ರಸಾದ್ ನೇತೃತ್ವದಲ್ಲಿ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಯ ನೋಡಲ್ ಅಧಿಕಾರಿ ಡಾ.ರವಿ, ತಾಲೂಕು ಆರೋಗ್ಯಾಧಿಕಾರಿ ಡಾ.ರಾಜೇಶ್ವರಿ ಅವರು ಉದಯಗಿರಿ ಠಾಣೆಯ ಪೊಲೀಸರೊಂದಿಗೆ ಕ್ಲಿನಿಕ್ ಮೇಲೆ ದಾಳಿ ನಡೆಸಿ, ದಾಖಲೆಗಳನ್ನು ಪರಿಶೀಲಿಸಿದಾಗ, ಡಾ.ರಾಮಚಂದ್ರ ಎಂಬುವರ ಪರವಾನಗಿಯನ್ನು ಪಡೆದು ಕವಿತಾ ವೈದ್ಯಕೀಯ ಸೇವೆ ನೀಡುತ್ತಾ ಕ್ಲಿನಿಕ್ ನಡೆಸುತ್ತಿರುವುದು ಕಂಡು ಬಂತು. ಈ ಹಿನ್ನಲೆಯಲ್ಲಿ ಕವಿತಾರನ್ನು ಹೆಚ್ಚಿನ ವಿಚಾರಣೆಗೆ ವಶಕ್ಕೆ ತೆಗೆದುಕೊಂಡು, ಕ್ಲಿನಿಕ್ಗೆ ಬೀಗ ಜಡಿದರು.