ಮೈಸೂರು: ಆರೋಗ್ಯ ಎಂಬುದು ಕೇವಲ ದೈಹಿಕವಾಗಿ ಉತ್ತಮವಾಗಿರುವುದು ಮಾತ್ರವಲ್ಲದೇ ಮನಸ್ಸಿನ ಮತ್ತು ಸಾಮಾಜಿಕ ಸ್ವಾಸ್ಥ್ಯ ಕಾಯ್ದುಕೊಳ್ಳುವುದಾಗಿ ಎಂದು ಭಾರತ್ ಆಸ್ಪತ್ರೆ ಮತ್ತು ಆಂಕಾಲಜಿ ಸಂಸ್ಥೆಯ ವೈದ್ಯಕೀಯ ಅಧೀಕ್ಷಕ ಡಾ. ಎಂ.ಎಸ್.ವಿಶ್ವೇಶ್ವರ ಹೇಳಿದರು.
ʼವಿಶ್ವ ಆರೋಗ್ಯ ದಿನʼದ ಅಂಗವಾಗಿ ಭಾರತ್ ಆಸ್ಪತ್ರೆ ಮತ್ತು ಆಂಕಾಲಜಿ ಸಂಸ್ಥೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರೋಗಿಗಳಿಗೆ ಹಣ್ಣು ವಿತರಿಸಿ ಮಾತನಾಡಿದ ಅವರು, ಪ್ರತಿಯೊಬ್ಬರು ಆರೋಗ್ಯಕರವಾಗಿರುವುದು ಅತ್ಯಂತ ಮುಖ್ಯವಾಗಿದ್ದು, ಆರೋಗ್ಯವಂತ ವ್ಯಕ್ತಿಯೂ ಯಾವುದೇ ರೋಗವಿಲ್ಲದೆ, ಹೆಚ್ಚು ಕಾಲ ಜೀವಿಸುತ್ತಾನೆ. ಪ್ರತಿಯೊಬ್ಬರಿಗೂ ಆರೋಗ್ಯವೇ ಭಾಗ್ಯವಾಗಿದ್ದು, ಇದೇ ಕಾರಣಕ್ಕೆ ವಿಶ್ವದೆಲ್ಲೆಡೆ ವಿಶ್ವ ಆರೋಗ್ಯ ದಿನವನ್ನು ಆಚರಿಸಲಾಗುತ್ತದೆ.
ಆ ಮೂಲಕ ಜನರಿಗೆ ಸಾಮಾನ್ಯ ಆರೋಗ್ಯದ ಬಗ್ಗೆ ಅರಿವು ಮೂಡಿಸಿ, ಉತ್ತಮ ಜೀವನ ನಡೆಸಲು ತಿಳುವಳಿಕೆ ಮೂಡಿಸಲಾಗುತ್ತಿದೆ. ಅಲ್ಲದೇ ವಿಶ್ವ ಆರೋಗ್ಯ ದಿನದ ಮೂಲಕ ವೈದ್ಯಕೀಯ ಸಿಬ್ಬಂದಿಯ ಸೇವೆ, ಯಶಸ್ಸು ಹಾಗೂ ಸಮಾಜಕ್ಕೆ ನೀಡಿರುವ ಕೊಡುಗೆಯನ್ನು ಗುರುತಿಸಲಾಗುತ್ತದೆ. ಈ ಬಾರಿಯ 2022ರ ವಿಶ್ವ ಆರೋಗ್ಯ ದಿನವನ್ನು “ನಮ್ಮ ಗ್ರಹ, ನಮ್ಮ ಆರೋಗ್ಯ” ಎಂಬ ಘೋಷವಾಕ್ಯದ ಮೂಲಕ ಆಚರಿಸಲಾಗುತ್ತಿದೆ. ಆ ಮೂಲಕ ಉತ್ತಮ ಆರೋಗ್ಯವನ್ನು ಕಾಯ್ದುಕೊಳ್ಳುವ ಕುರಿತು ವಿಶ್ವದ ಗಮನ ಸೆಳೆಯುವುದಾಗಿದೆ ಎಂದರು.
ಕಳೆದ ದಶಕದಲ್ಲಿ ಭಾರತದಲ್ಲಿ ಕ್ಯಾನ್ಸರ್ ಪ್ರಮಾಣವು ಆತಂಕಕಾರಿಯಾಗಿ ಹೆಚ್ಚಾಗಿದ್ದು, ಬಹುತೇಕ ಸಂದರ್ಭಗಳಲ್ಲಿ ಕ್ಯಾನ್ಸರ್ ರೋಗವು ತಡವಾಗಿ ಪತ್ತೆಯಾಗುತ್ತಿರುವ ಕಾರಣಕ್ಕೆ ಅನೇಕರು ಕ್ಯಾನ್ಸರ್ಗೆ ಬಲಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕ್ಯಾನ್ಸರ್ ಹಾಗೂ ಕ್ಯಾನ್ಸರ್ಗೆ ಕಾರಣವಾಗುವ ಅಪಾಯಕಾರಿ ಅಂಶಗಳ ಬಗ್ಗೆ ಮತ್ತು ಅವುಗಳ ರೋಗ ಲಕ್ಷಣಗಳ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಅತ್ಯಂತ ಅವಶ್ಯಕವಾಗಿದೆ. ಏಕೆಂದರೆ ಆರಂಭಿಕ ಹಂತದಲ್ಲಿ ಕ್ಯಾನ್ಸರ್ ಪತ್ತೆಯಾದರೆ ಅದನ್ನು ಗುಣಪಡಿಸಲು ಅನುಕೂಲವಾಗಲಿದೆ. ಜತೆಗೆ ಸಾಮಾನ್ಯ ಜನರು ತಮ್ಮ ಆರೋಗ್ಯದ ಬಗ್ಗೆ ತಾವೇ ಕಾಳಜಿವಹಿಸಲು ಹಾಗೂ ಸೂಕ್ತ ಸಮಯಕ್ಕೆ ಚಿಕಿತ್ಸೆ ಪಡೆಯಲು ಅನುಕೂಲವಾಗಲಿದೆ.
ಕ್ಯಾನ್ಸರ್ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನಾವು ಆರಂಭಿಕ ಸ್ಕ್ರೀನಿಂಗ್ ಸೇರಿದಂತೆ ಇನ್ನಿತರ ಪ್ರಾಮುಖ್ಯತೆಗಳನ್ನು ನೀಡುತ್ತಿದ್ದೇವೆ. ಗ್ರಾಮೀಣ ಜನರನ್ನು ತಲುಪಲು ನಾವು ಎಲ್ಲಾ ಸೌಲಭ್ಯಗಳನ್ನು ಹೊಂದಿರುವ ಮೊಬೈಲ್ ಬಸ್ ಅನ್ನು ಬಳಸುತ್ತಿದ್ದೇವೆ. ಅಲ್ಲದೇ ಜನರಿಗೆ ಉತ್ತಮ ಕ್ಯಾನ್ಸರ್ ಚಿಕಿತ್ಸೆ ಮತ್ತು ಆರೈಕೆ ನೀಡಲು ದೇಶಾಧ್ಯಂತ ಲಭ್ಯವಿರುವ ಶಸ್ತ್ರಚಿಕಿತ್ಸಾ ವ್ಯವಸ್ಥೆ, ವೈದ್ಯಕೀಯ ಮತ್ತು ವಿಕಿರಣದಂತಹ ಕ್ಯಾನ್ಸರ್ ಚಿಕಿತ್ಸಾ ಸೌಲಭ್ಯಗಳನ್ನು ಹೆಚ್ಚಿಸುವುದು ಮುಖ್ಯವಾಗಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಭಾರತ್ ಆಸ್ಪತ್ರೆ ಮತ್ತು ಆಂಕಾಲಜಿ ಸಂಸ್ಥೆ ವ್ಯವಸ್ಥಾಪಕರಾದ ನಿರ್ಮಲ ಕೆ.ಮೂರ್ತಿ, ಕ್ವಾಲಿಟಿ ಎಕ್ಸಿಕ್ಯುಟಿವ್ ಸಿ. ಸ್ವಪ್ನಾ, ಎಚ್ಆರ್ ಅಸಿಸ್ಟೆಂಟ್ ಪಿಡಿ ಅಶ್ವಿನಿ, ನರ್ಸಿಂಗ್ ವಿಭಾಗದ ಸಹಾಯಕ ಅಧೀಕ್ಷಕಿ ಪ್ರೇಮಾ, ಭವ್ಯ ಸೇರಿದಂತೆ ಇನ್ನಿತರರು ಹಾಜರಿದ್ದರು.