ಮೈಸೂರು : ಡಾ. ಶ್ರೀ ಶಿವಕುಮಾರ ಮಹಾಸ್ವಾಮೀಜಿ ರವರ ಕಾಯಕ ಹಾಗೂ ದಾಸೋಹ ಪರಂಪರೆ ವಿಶ್ವಕ್ಕೆ ಮಾದರಿಯಾಗಿದೆ ಎಂದು ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ ಅಧ್ಯಕ್ಷರಾದ ಹೇಮಂತ್ ಕುಮಾರ್ ಗೌಡ ಹೇಳಿದರು.
ಜಯನಗರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಏರ್ಪಡಿಸಿದ್ದ ಕರ್ನಾಟಕ ರತ್ನ, ತ್ರಿವಿಧ ದಾಸೋಹಿ, ಶಿವಯೋಗಿ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಅವರ 115ನೇ ಜಯಂತಿ ಕಾರ್ಯಕ್ರಮದಲ್ಲಿ ಶಾಲೆಯಲ್ಲಿ ಶ್ರೀಗಳ ಹೆಸರಿನಲ್ಲಿ ಬೇಸಿಗೆ ಧಗೆ ಹೆಚ್ಚಿರುವುದರಿಂದ ಹಿನ್ನೆಲೆಯಲ್ಲಿ ಸಣ್ಣಪುಟ್ಟ ಪಕ್ಷಿ ಪ್ರಾಣಿಗಳಿಗೆ ನೀರುಣುಸಲು ತೊಟ್ಟಿಗಳನ್ನು ಅಳವಡಿಸಿ ಮಾತನಾಡಿದ ಅವರು, ಬದುಕಿನುದ್ದಕ್ಕೂ ನಿರಂತರ ಕಾಯಕದಲ್ಲಿ ನಿಷ್ಠೆ ಮೆರೆದು ಸದ್ದಿಲ್ಲದೆ ದಾಸೋಹ ಸಂಸ್ಕೃತಿಯನ್ನು ಜಗತ್ತಿಗೆ ಸಾರಿ ಲಕ್ಷಾಂತರ ಮಕ್ಕಳ ಭವಿಷ್ಯಕ್ಕೆ ಶ್ರೀಗಳು ಬೆಳಕಾಗಿದ್ದರು. ಸಿದ್ಧಗಂಗಾ ಶ್ರೀಗಳ ಸೇವೆ, ತ್ಯಾಗಕ್ಕೆ ಎಂದಿಗೂ ಬೆಲೆ ಕಟ್ಟಲಾಗದು. ಶಿಕ್ಷಣ, ದಾಸೋಹದ ಮೂಲಕ ಜಗತ್ತಿಗೆ ಬೆಳಕಾದ ಶ್ರೀಗಳ ಸೇವೆ ಅನನ್ಯವಾಗಿದೆ.
ಡಾ. ಶ್ರೀ ಶಿವಕುಮಾರ ಮಹಾಸ್ವಾಮೀಜಿ ಅವರು ನಾಡಿಗೆ ನೀಡಿದ ಕೊಡುಗೆ ಅಪಾರವಾಗಿದ್ದು, 21ನೇ ಶತಮಾನದಲ್ಲಿ ಬಸವತತ್ವಕ್ಕೆ ಜೀವಂತಿಕೆ ತಂದ ಮಹಾಮಹಿಮರು ಶ್ರೀ ಶಿವಕುಮಾರ ಶ್ರೀಗಳು. ಕಾಯಕ, ದಾಸೋಹದ ಮೂಲಕ ವಿಶ್ವವಿಖ್ಯಾತರಾಗಿದ್ದರು. ಲಕ್ಷಾಂತರ ವಿದ್ಯಾರ್ಥಿಗಳ ಬದುಕಿಗೆ ಬೆಳಕಾಗಿದ್ದರು. ಅವರು ಇಂದಿಗೂ ನಮ್ಮೆಲ್ಲರೊಂದಿಗೆ ಇದ್ದಾರೆ ಎಂದು ಹೇಳಿದರು.
ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದ ಸಿ ಜಿ ಗಂಗಾಧರ್ ಸಿದ್ಧಗಂಗಾ ಶ್ರೀಗಳಿಗೆ ಮರಣೋತ್ತರ ಭಾರತರತ್ನ ನೀಡಲು ಮನವಿ ಮಾಡಿದರು.
ಬಿಸಿಯೂಟ ದಕ್ಷಿಣ ವಲಯ ಸಹಾಯಕ ನಿರ್ದೇಶಕ ಶ್ರೀಕಂಠೇಶ್, ಕೆ ಆರ್ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ, ಅಪೂರ್ವ ಸುರೇಶ್, ಸುರೇಶ್ ಗೋಲ್ಡ್, ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ಅಜಯ್ ಶಾಸ್ತ್ರಿ, ವಿನಯ್ ಕಣಗಾಲ್, ನವೀನ್ ಕೆಂಪಿ, ರಾಕೇಶ್ ಕುಂಚಿಟಿಗ, ಸುಚೀಂದ್ರ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿವಕುಮಾರ್ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.