ಮೈಸೂರು: ರಾಜ್ಯದ ಮುಸ್ಲಿಂ ಸಮುದಾಯದ ಜನರ ಮತಗಳನ್ನು ವಿಭಜಿಸಲು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಬಿಜೆಪಿ ಸುಫಾರಿ ನೀಡಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆರೋಪಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ . ಸಿಂಧಗಿ, ಹಾನಗಲ್ ಉಪ ಚುನಾವಣೆಯಲ್ಲಿ ಮುಸ್ಲಿಮರ ಮತ ವಿಭಜಿಸಲು ಮುಂದಾಗಿ ಆರ್ಎಸ್ಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಜೆಡಿಎಸ್ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡ ಬಳಿಕ ನಾಪತ್ತೆಯಾಗಿದ್ದರು. ಇದೀಗ ಕುಮಾರಸ್ವಾಮಿ ಬಿಜೆಪಿ ನಾಯಕರ ವಿರುದ್ಧ ನಿರಂತರ ವಾಗ್ದಾಳಿ ನಡೆಸುತ್ತಿರುವುದನ್ನು ಗಮನಿಸಿದರೆ ಈ ಅನುಮಾನ ದೃಢವಾಗುತ್ತಿದ್ದು, ಕುಮಾರಸ್ವಾಮಿ ಅವರಿಗೆ ಏಕಾಏಕಿ ಮುಸ್ಲಿಮರ ಮೇಲೆ ಕಳಕಳಿ ಬಂದಿರುವುದನ್ನು ಗಮನಿಸಿದರೆ ಅನುಮಾನ ಮೂಡುತ್ತಿದೆ ಎಂದರು.
ಈಗ ಸಿಎಂ ಬಸವರಾಜ ಬೊಮ್ಮಾಯಿ ಸಹಿತವಾಗಿ ಬಿಜೆಪಿ ನಾಯಕರನ್ನು ಟೀಕಿಸುತ್ತಿರುವುದರ ಹಿಂದೆ ಮುಸ್ಲಿಮರ ಮತ ವಿಭಜನೆಗೆ ದೀರ್ಘಕಾಲದ ಸುಫಾರಿ ಪಡೆದಿರಬಹುದು ಎಂದ ಅವರು, ಜಾತ್ಯಾತೀತ ಶಕ್ತಿಗಳು ಒಂದಾಗಿ ಸಮಾಜವನ್ನು ಅಶಾಂತಿಯತ್ತ ದೂಡುತ್ತಿರುವ ಕೋಮುಶಕ್ತಿಗಳ ವಿರುದ್ಧ ಎಚ್ಚರಿಕೆಯಿಂದ ಇರಬೇಕಾಗಿದೆ ಎಂದು ಹೇಳಿದರು.
ಕಾಮಗಾರಿಗಳಲ್ಲಿ ಶೇ.40ರಷ್ಟು ಕಮಿಷನ್ ಪಡೆಯಲಾಗುತ್ತಿದೆ. ತಮ್ಮ ವೈಫಲ್ಯಗಳನ್ನು ಮುಚ್ಚಿಕೊಳ್ಳಲು, ಜನರ ದಿಕ್ಕು ತಪ್ಪಿಸಲು ಬಿಜೆಪಿ ಯತ್ನಿಸುತ್ತಿದೆ. ನಿರುದ್ಯೋಗ ಸಮಸ್ಯೆ ತಾಂಡವಾಡುತ್ತಿದೆ. ಆರ್ಥಿಕತೆ ಕುಸಿದಿದೆ ಇದನ್ನು ಮರೆಮಾಚಲು ಬಿಜೆಪಿ ಬೇರೆ ಬೇರೆ ವಿಚಾರಗಳನ್ನು ಎಳೆದು ತರುತ್ತಿದೆ. ರಾಜ್ಯದ ಜನರು ಯಾರಿಗಾದರೂ ಮತ ನೀಡಿ ಬಿಜೆಪಿ ನಾಯಕರ ಪ್ರಚೋದನೆಗೆ ಒಳಗಾಗಬೇಡಿ ಎಂದು ಮನವಿ ಮಾಡಿದರು.
ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು ಇತ್ತೀಚೆಗೆ ಮೈಸೂರಿಗೆ ಬರುತ್ತಿಲ್ಲ. ನಮಗಿರುವ ಮಾಹಿತಿ ಪ್ರಕಾರ ಸಚಿವ ಸೋಮಶೇಖರ್ ಸೇರಿದಂತೆ ಎಂಟು ಮಂದಿಯನ್ನು ಸಚಿವ ಸಂಪುಟದಿಂದ ತೆಗೆಯಲಿದ್ದಾರೆ. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಹಿಂದೆ ವಾರಕ್ಕೊಮ್ಮೆ ಮೈಸೂರಿಗೆ ಬರುತ್ತಿದ್ದರು. ಆದರೆ ಈಗ ಯಾಕೋ ಜಿಲ್ಲೆಗೆ ಬರುತ್ತಿಲ್ಲ. ಅವರನ್ನು ಸಂಪುಟದಿಂದ ತೆಗೆಯುವ ಮಾಹಿತಿ ತಿಳಿದಿರುವುದರಿಂದ ಜಿಲ್ಲೆಗೆ ಬರುತ್ತಿಲ್ಲ ಎಂದು ಎಂದು ಶಂಕೆ ವ್ಯಕ್ತಪಡಿಸಿದರು. ಕೇಂದ್ರ ಗೃಹ ಸಚಿವ ಅಮಿತ್ ಷಾ ರಾಜ್ಯ ಪ್ರವಾಸದ ವೇಳೆ ಭಾವನಾತ್ಮಕ ವಿಚಾರಗಳನ್ನು ಮುನ್ನೆಲೆಗೆ ತಂದಿರುವುದಕ್ಕೆ ರಾಜ್ಯ ಬಿಜೆಪಿ ನಾಯಕರಿಗೆ ಪ್ರಶಂಸೆ ಮಾಡಿದ್ದಾರೆ. ಹಾಗೆಯೇ ಗೋಲಿಬಾರ್, ಲಾಠಿಚಾರ್ಜ್ ಮಾಡಿ ಜನರ ರಕ್ತ ಹರಿಸಬೇಕು. ಈ ಅಪಾದನೆಯನ್ನು ಕಾಂಗ್ರೆಸ್ ಮೇಲೆ ಹೊರಿಸಬೇಕೆಂದು ಸೂಚನೆ ಕೊಟ್ಟಿದ್ದಾರೆ. ಆದ್ದರಿಂದ ರಾಜ್ಯದ ಜನರು ಬಿಜೆಪಿಯವರ ಪ್ರಚೋದನೆಗೆ ಒಳಗಾಗಬೇಡಿ ಎಂದು ಹೇಳಿದರು.