ಮೈಸೂರು: ಆನ್ಲೈನ್ ಮೂಲಕ ಭಗವದ್ಗೀತೆ ಸ್ಪರ್ಧೆ ಯ ಪೋಸ್ಟರ್ ನ್ನು ಬಿಜೆಪಿ ನಗರಾಧ್ಯಕ್ಷ ಟಿ.ಎಸ್.ಶ್ರೀವತ್ಸ ಬಿಡುಗಡೆ ಮಾಡಿದ್ದಾರೆ.
ನಗರ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ವತಿಯಿಂದ ಭಗವದ್ಗೀತೆ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ನಗರದ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪೋಸ್ಟರ್ ಬಿಡುಗಡೆ ಮಾಡಿ, ಮಾತನಾಡಿದ ಟಿ.ಎಸ್.ಶ್ರೀವತ್ಸ ಅವರು, ಭಗವದ್ಗೀತೆ ಹಿಂದೂಗಳ ಪವಿತ್ರ ಗ್ರಂಥಗಳಲ್ಲಿ ಒಂದು. ಭಗವದ್ಗೀತೆಯ ಪ್ರತಿಯೊಂದು ಶ್ಲೋಕ ಜ್ಞಾನದ ಕಿಡಿ. ಇದು ಒಂದು ಬೆಂಕಿ ಪೊಟ್ಟಣವಿದ್ದಂತೆ. ಅದರಲ್ಲಿನ ಪ್ರತಿಯೊಂದು ಶ್ಲೋಕವೂ ಜ್ಞಾನದ ಬೆಳಕು ನೀಡುತ್ತದೆ ಎಂದರು.
ನಮ್ಮ ಜೀವನ ಶೈಲಿ ಬದಲಾಗುತ್ತಿದೆ. ಶರೀರಕ್ಕೆ ಕೆಲಸ ಕಡಿಮೆಯಾಗಿ, ಮನಸ್ಸಿಗೆ ಉದ್ವೇಗ ಹೆಚ್ಚಾಗುತ್ತಿದೆ. ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿವೆ. ಡಯಾಬಿಟಿಸ್, ರಕ್ತದೊತ್ತಡ, ಹೃದಯ ತೊಂದರೆ, ಮಾನಸಿಕ ಒತ್ತಡ ಹೆಚ್ಚಾಗುತ್ತಿದ್ದು, ಮಾನಸಿಕ ಆರೋಗ್ಯ ನಿರ್ವಹಣೆ ದೊಡ್ಡ ಸವಾಲಾಗಿದೆ.
ಪಾಲಕರ ಒತ್ತಡ ತಾಳಲಾಗದೇ ಕೆಲವು ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಮಕ್ಕಳಿಗೆ ಮುಕ್ತವಾಗಿ ಅಧ್ಯಯನ ಮಾಡಲು ಪೂರಕ ವಾತಾವರಣ ಸೃಷ್ಟಿಸಬೇಕು. ನಮ್ಮ ದೇಶದ ಜ್ವಲಂತ ಸಮಸ್ಯೆಗಳಿಗೆ ಭಗವದ್ಗೀತೆ ಪರಿಹಾರ ನೀಡಬಲ್ಲದು. ಹೀಗಾಗಿ ಭಗವದ್ಗೀತೆಯಲ್ಲಿ ತಿಳಿಸಿದ ರೀತಿಯಲ್ಲಿ ಜೀವನ ಕ್ರಮ ಅನುಸರಿಸಬೇಕು ಎಂದರು.
ಮೈಸೂರು ಜಿಲ್ಲಾ ವ್ಯಾಪ್ತಿ ಒಳಗೊಂಡಂತೆ 8ರಿಂದ 18ವರ್ಷದೊಳಗಿನ ಮಕ್ಕಳಿಗಾಗಿ ಸ್ಪರ್ಧೆ ಆಯೋಜಿಸಲಾಗಿದ್ದು, ಏ.8ರೊಳಗೆ ಭಗವದ್ಗೀತೆಯ ಶ್ಲೋಕಗಳನ್ನು ಮೂರು ನಿಮಿಷಗಳ ವಿಡಿಯೋ ತುಣುಕುಗಳನ್ನು ವಾಟ್ಸಪ್ ಮೂಲಕ 9880304324, 9060543667ಗೆ ಕಳುಹಿಸಿಕೊಡಬೇಕು.
ಸನಾತನ ಧರ್ಮದ ಹಿಂದೂಗಳ ಪ್ರತೀಕವಾದ 14 ಅಧ್ಯಾಯದ ಶ್ಲೋಕ ಪಠಣ ಮಾಡಿ ಪ್ರಸ್ತುತಪಡಿಸಬಹುದು. ಸ್ಫರ್ಧಿಗಳ ಭಾಷಾ ಶೈಲಿ, ಸಂಹವನ ಕೌಶಲ್ಯ, ಸ್ಪಷ್ಟತೆಯ ಆಧಾರದ ಮೇಲೆ ಬಹುಮಾನ ನೀಡಲಾಗುವುದು. ಪ್ರಥಮ ಬಹುಮಾನ 2 ಸಾವಿರ, ದ್ವಿತೀಯ ಬಹುಮಾನ 1 ಸಾವಿರ, ತೃತೀಯ ಬಹುಮಾನವಾಗಿ 500ರೂ ಹಾಗೂ ಪಾರಿತೋಷಕ ನೀಡಲಾಗುವುದು. ಭಾಗವಹಿಸಿದ ಎಲ್ಲಾ ಮಕ್ಕಳಿಗೂ ನೆನಪಿನ ಕಾಣಿಕೆ ಮತ್ತು ಪ್ರಮಾಣ ಪತ್ರ ನೀಡಲಾಗುತ್ತದೆ.