ಮೈಸೂರು : ಪ್ರವಾಸಿಗರ ಸ್ವರ್ಗವಾಗಿರುವ ಮೈಸೂರಿನ ಮೇಲೆ ಕೊರೊನಾದ ಕರಿನೆರಳು ಬಿದ್ದಿದೆ. ವರ್ಷ ಪೂರ್ತಿ ಪ್ರವಾಸಿಗರನ್ನು ಸೆಳೆಯುತ್ತಿದ್ದ ಅರಮನೆ ನಗರಿ ಈಗ ಪ್ರವಾಸಿಗರಿಲ್ಲದೆ ಭಣಗುಟ್ಟುತ್ತಿದೆ. ಹೀಗಾಗಿ ಪ್ರವಾಸಿಗರನ್ನು ನಂಬಿ ಬದುಕು ಕಟ್ಟಿಕೊಂಡಿದ್ದ ಹಲವು ಕ್ಷೇತ್ರಗಳ ಜನರು ಕಂಗಾಲಾಗುವಂತಾಗಿದೆ.
ಕೊರೊನಾ ಕಾಲಿಡುವ ಮೊದಲು ನಗರಕ್ಕೆ ಲಕ್ಷಾಂತರ ಪ್ರವಾಸಿಗರು ಭೇಟಿ ನೀಡುತ್ತಿದ್ದರು. ಆದರೀಗ ನಗರದ ಪ್ರಮುಖ ಪ್ರವಾಸಿ ತಾಣಗಳಾದ ಅರಮನೆ, ಮೃಗಾಲಯ, ಚಾಮುಂಡಿಬೆಟ್ಟ ಹೀಗೆ ಎಲ್ಲೆಲ್ಲೂ ಪ್ರವಾಸಿಗರೇ ತುಂಬಿ ತುಳುಕುತ್ತಿದ್ದರು. ಅದರಲ್ಲೂ ವಿದೇಶಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದರು. ಪ್ರವಾಸಿಗರು ಆಗಮಿಸಿದರೆ ಅದರ ಸುತ್ತಲೂ ಹಲವು ವ್ಯಾಪಾರ ವಹಿವಾಟುಗಳು ಗರಿಗೆದರುತ್ತಿದ್ದವು. ಆದರೆ ಪ್ರವಾಸಿಗರಿಲ್ಲದ ಕಾರಣದಿಂದ ಪ್ರವಾಸಿಗರನ್ನೇ ನಂಬಿ ಉದ್ಯಮ ಆರಂಭಿಸಿದವರು ಸಂಕಷ್ಟದಲ್ಲಿದ್ದಾರೆ.
ಪ್ರತಿವರ್ಷ ಈ ವೇಳೆಗೆ ಪ್ರವಾಸಿಗರು ಲಗ್ಗೆಯಿಡುತ್ತಿದ್ದರು. ಆದರೀಗ ಕೊರೊನಾ ಕಾರಣದಿಂದ ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ನಿಂದಾಗಿ ಜನ ಹೊರ ಬರುತ್ತಿಲ್ಲ. ಅದರಲ್ಲೂ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳು ಜನರನ್ನು ಒಂದೆಡೆಯಿಂದ ಮತ್ತೊಂದೆಡೆಗೆ ತೆರಳದಂತೆ ಮಾಡಿದೆ. ನಗರಕ್ಕೊಂದು ಸುತ್ತು ಹೊಡೆದರೆ, ಮೃಗಾಲಯ ಖಾಲಿ ಖಾಲಿಯಾಗಿದೆ. ಮೈಸೂರು ಅರಮನೆ, ಜಗನ್ಮೋಹನ ಅರಮನೆ, ಚಾಮುಂಡಿಬೆಟ್ಟ ಮೊದಲಾದ ಕಡೆ ಪ್ರವಾಸಿಗರು ಕಾಣಿಸುತ್ತಿಲ್ಲ.
ಈ ಪ್ರವಾಸಿ ತಾಣಗಳಲ್ಲಿ ವ್ಯಾಪಾರ ವಹಿವಾಟು ನಡೆಸುವವರೆಲ್ಲರೂ ಪ್ರವಾಸಿಗರನ್ನೇ ನಂಬಿದ್ದಾರೆ. ಅವರು ಭೇಟಿ ನೀಡಿ ವ್ಯಾಪಾರ ನಡೆಸಿದರೆ ಹೊಟ್ಟೆಪಾಡು ಕಳೆಯುತ್ತದೆ. ಇನ್ನು ಪ್ರವಾಸಿಗರಿಲ್ಲದ ಕಾರಣ, ಟ್ಯಾಕ್ಸಿಗಳು ನಿಂತಲ್ಲೇ ನಿಲ್ಲುತ್ತಿವೆ. ಆಟೋ ಚಾಲಕರು, ಟಾಂಗಾ ಗಾಡಿ ಓಡಿಸುವವರು ಅಷ್ಟೇ ಅಲ್ಲದೆ ಕೋಟ್ಯಂತರ ರೂ ಬಂಡವಾಳ ಸುರಿದ ಹೋಟೆಲ್ ಉದ್ಯಮಿಗಳು ಕೂಡ ಆಕಾಶ ನೋಡುವಂತಾಗಿದೆ.
ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣ ಗೌಡ ಅವರು ಹೇಳುವ ಪ್ರಕಾರ ಕೊರೊನಾ ಮೂರನೇ ಅಲೆ ನಿಯಂತ್ರಣಕ್ಕೆ ಸರ್ಕಾರ ವೀಕೆಂಡ್ ಕರ್ಫ್ಯೂ ಜಾರಿ ಮಾಡಿರುವುದರಿಂದ ಹೋಟೆಲ್ಗಳ ಬುಕ್ಕಿಂಗ್ ಶೇ.2ಕ್ಕೆ ಕುಸಿದಿದೆಯಂತೆ. ಹೀಗಾಗಿ ಭಾರೀ ನಷ್ಟವುಂಟಾಗುತ್ತಿರುವುದು ಗೋಚರಿಸುತ್ತಿದೆ. ಮೈಸೂರಿನಲ್ಲಿ ಇರುವ ಎಲ್ಲ ಹೋಟೆಲ್ ಗಳು ಸೇರಿದರೆ 10,300 ರೂಮ್ ಗಳಾಗುತ್ತವೆ. ಇಲ್ಲಿ ಶೇ.2ರಷ್ಟು ಮಾತ್ರ ಬುಕ್ ಆಗುತ್ತಿರುವುದನ್ನು ಗಮನಿಸಿದರೆ ಪ್ರವಾಸಿಗರ ಸಂಖ್ಯೆ ಯಾವ ಮಟ್ಟಕ್ಕೆ ಇಳಿಕೆಯಾಗಿದೆ ಎಂಬುದು ಗೊತ್ತಾಗಿ ಬಿಡುತ್ತದೆ.
ಕೊರೊನಾ ಒಂದು ಮತ್ತು ಎರಡನೇ ಅಲೆಗಳು ಬಡವರು ಶ್ರೀಮಂತರು ಎನ್ನದೆ ಎಲ್ಲರನ್ನೂ ಹಿಂಡಿ ಹಿಪ್ಪೆ ಮಾಡಿದೆ. ಇವರುಗಳ ಹೊಡೆತದ ನಡುವೆಯೂ ಆತ್ಮವಿಶ್ವಾಸದಿಂದ ಬದುಕು ಕಟ್ಟಿಕೊಳ್ಳಲು ಮುಂದಾಗಿದ್ದ ಬಹಳಷ್ಟು ಮಂದಿಯನ್ನು ಮತ್ತೆ ಕೊರೊನಾ ಮೂರನೇ ಅಲೆ ಪ್ರಪಾತಕ್ಕೆ ತಳ್ಳಿದೆ. ಕೊರೊನಾ ಪ್ರಕರಣಗಳು ಹೀಗೆಯೇ ಹೆಚ್ಚುತ್ತಾ ಹೋದರೆ ಮುಂದೆ ಹೇಗೆ ಜೀವನ ಸಾಗಿಸುವುದು ಎಂಬ ಚಿಂತೆ ಪ್ರತಿಯೊಬ್ಬರನ್ನು ಕಾಡಲು ಆರಂಭಿಸಿದೆ.