ನಂಜನಗೂಡು : ಪರಿಷ್ಕೃತ ಪಠ್ಯದಿಂದ ‘ಸಂವಿಧಾನ ಶಿಲ್ಪಿ’ ಎಂಬ ಪದವನ್ನು ತೆಗೆದಿರುವುದು ಅತ್ಯಂತ ಖಂಡನೀಯ. ಆ ಪದವನ್ನು ತೆಗೆಯುವ ಅಗತ್ಯ ಏನಿತ್ತೋ ತಿಳಿಯದು. ಆದರೆ ಇಂತಹ ವಿಚಾರಗಳನ್ನು ನಾವು ಸಹಿಸುವುದಿಲ್ಲ ಹಾಗೂ ಖಂಡಿತ ರಾಜಿಯಾಗುವ ಪ್ರಶ್ನೆಯೂ ಇಲ್ಲ’ ಎಂದು ನಂಜನಗೂಡು ಶಾಸಕ ಬಿ. ಹರ್ಷವರ್ಧನ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಕ್ಷಿಣ ಪದವೀದರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ನಾನು ಬೆಂಗಳೂರಿಗೆ ಹೋಗಿ ಮುಖ್ಯಮಂತ್ರಿಗಳನ್ನು ಭೇಟಿಯಾಗಲು ಸಾಧ್ಯವಾಗಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜೂನ್ 8 ರಂದು ಮೈಸೂರಿಗೆ ಬರುತ್ತಿದ್ದಾರೆ. ಅಂದು ರಾಜಕೀಯ ಮುತ್ಸದ್ಧಿ, ಹಿರಿಯ ಸಂಸತ್ ಸದಸ್ಯರಾದ ವಿ.ಶ್ರೀನಿವಾಸ ಪ್ರಸಾದ್ ಅವರೊಂದಿಗೆ ಭೇಟಿ ಮಾಡಿ, ಹಳೆಯ ಪಠ್ಯವನ್ನೇ ಮುಂದುವರೆಸುವಂತೆ ಒತ್ತಾಯಿಸುತ್ತೇವೆ. ಜೊತೆಗೆ ನೂತನ ಪಠ್ಯ ಪರಿಷ್ಕರಣೆ ಮಾಡಿ ‘ಸಂವಿಧಾನ ಶಿಲ್ಪಿ’ ಎಂಬ ಪದ ತೆಗೆದಿರುವವರ ವಿರುದ್ಧ ಕ್ರಮ ಜರುಗಿಸುವಂತೆ ಹಾಗೂ ಮುಂದಿನ ದಿನಗಳಲ್ಲಿ ಮುಜುಗರಕ್ಕೊಳಗಾಗುವ ಇಂತಹ ಪ್ರಕರಣಗಳು ನಡೆಯದಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಸಲ್ಲಿಸುತ್ತೇವೆ ಎಂದು ತಿಳಿಸಿದರು.
‘ಸಂವಿಧಾನದಲ್ಲಿ ಕಂಡುಬರುವ ಪ್ರಖರ ಸಾಮಾಜಿಕ ಪ್ರಜ್ಞೆ, ರಾಷ್ಟ್ರೀಯತೆಯ ಪರಿಕಲ್ಪನೆ, ನ್ಯಾಯ ಮತ್ತು ಸಮಾನತೆಯ ಆಶಯಗಳಿಗೂ ಅಂಬೇಡ್ಕರ್ ಅವರು ಬರೆದ ನೂರಾರು ಲೇಖನಗಳಿಗೂ ಆಂತರಿಕ ಸಂಬಂಧವಿದೆ. ಹಾಗಾಗಿ ಡಾ.ಬಿ.ಆರ್. ಅಂಬೇಡ್ಕರ್ ಅವರು ‘‘ಸಂವಿಧಾನ ಶಿಲ್ಪಿ’’ ಹೌದು ಮತ್ತು ಎಂದೆಂದಿಗೂ ಸಂವಿಧಾನ ಶಿಲ್ಪಿಯೇ ಎಂದು ಅವರು ಹೇಳಿದ್ದಾರೆ.