ಮೈಸೂರು ನಗರದ ಅಭಿವೃದ್ಧಿಗೆ ಶ್ರಮಿಸುತ್ತೇನೆ : ನೂತನ ಮೇಯರ್ ಸುನಂದಾ ಪಾಲನೇತ್ರ
ಮೈಸೂರು, ಮೊದಲ ಬಾರಿಗೆ ಮೈಸೂರು ಮಹಾನಗರ ಪಾಲಿಕೆಯಲ್ಲಿ ಬಿಜೆಪಿಗೆ ಮೇಯರ್ ಅಧಿಕಾರ ಲಭಿಸಿದ್ದು ಮೈಸೂರು ನಗರದ ಅಭಿವೃದ್ಧಿಗೆ ಶ್ರಮಿಸುವುದಾಗಿ ನೂತನ ಮೇಯರ್ ಸುನಂದಾ ಪಾಲನೇತ್ರ ತಿಳಿಸಿದರು.
ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು ಮೊದಲ ಬಾರಿಗೆ ಮೇಯರ್ ಆಗಿರುವುದು, ಪಾಲಿಕೆಯಲ್ಲಿ ಬಿಜೆಪಿಗೆ ಮೇಯರ್ ಸ್ಥಾನ ಲಭಿಸಿರುವುದಕ್ಕೆ ತುಂಬಾ ಖುಷಿ ಆಗುತ್ತಿದೆ. ಪಕ್ಷದ ಹಿರಿಯರಿಗೆ , ಬಿಜೆಪಿಯ ಎಲ್ಲ ನಾಯಕರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ. ನನ್ನೆದುರು, ನನ್ನ ಹಿಂದೆ ಶ್ರಮಿಸಿದ ಎಲ್ಲರಿಗೂ ಕೃತಜ್ಞತೆಯನ್ನು ಅರ್ಪಿಸುತ್ತೇನೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರನ್ನು ನಾಳೆ ಭೇಟಿಯಾಗುತ್ತೇನೆ ಎಂದರು.
ಹತ್ತು ನಿಮಿಷದ ಹಿಂದೆ ಎಲ್ಲರೂ ಅಭಿನಂದನೆ ತಿಳಿಸಿದ್ದರು. ನಂತರ ಅವರೆಲ್ಲ ಗದ್ದಲ ಮಾಡಿ ಹೊರಗೆ ಬಂದಿರುವುದು ತುಂಬಾ ಬೇಸರ ಆಯಿತು. ಮನಸ್ಸಿಗೆ ನೋವಾಯಿತು. ನಾವು 65ಮಂದಿಯೂ ಒಂದೇ ಎಂದು ತಿಳಿದುಕೊಂಡಿದ್ವಿ, ಅವರು ಬೈ ಕಾಟ್ ಮಾಡಿದ್ದು ಇಷ್ಟ ಆಗಿಲ್ಲ. ಪರವಾಗಿಲ್ಲ ಬಿಡಿ ಎಂದು ನೊಂದು ನುಡಿದರು. ನಾನು ಕೇಳೋದಿಷ್ಟೇ. ಇಬ್ಬರೂ ಸಹಕಾರ ಕೊಡಿ ಮೈಸೂರಿನ ಹಿತಾಸಕ್ತಿ ಇಟ್ಟು ಕೆಲಸ ಮಾಡೋಣ, ಗೊಂದಲಗಳು ಬೇಡ, ನಾವೆಲ್ಲರೂ ಒಟ್ಟಿಗೆ ಇದ್ದರೆ ತಾನೆ ನಾಳೆ ಮೈಸೂರಿನ ಜನತೆಗಾಗಿ ಒಳ್ಳೆಯ ಕೆಲಸ ಮಾಡಲು ಸಾಧ್ಯ ಎಂದರಲ್ಲದೇ, ಮೈಸೂರಿನ ಜನತೆಗೆ ಹೃದಯತುಂಬಿದ ಧನ್ಯವಾದಗಳನ್ನು ಹೇಳುತ್ತೇನೆ ಎಂದರು. ಇದೇ ವೇಳೆ ಮೈಸೂರಿನ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು.