ಕೃಷ್ಣರಾಜಪೇಟೆ: ಕೋವಿಡ್ ಮೂರನೇ ಅಲೆಯ ಭೀತಿಯ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಇತಿಹಾಸ ಪ್ರಸಿದ್ಧ ಹೇಮಗಿರಿ ಶ್ರೀ ಕಲ್ಯಾಣ ವೆಂಕಟರಮಣಸ್ವಾಮಿ ಧನಗಳ ಜಾತ್ರೆಯನ್ನು ನಿಷೇಧಿಸಿ ಆದೇಶ ಹೊರಡಿಸಿದ್ದರೂ ರೈತರು ಸರ್ಕಾರದ ಆದೇಶವನ್ನು ಧಿಕ್ಕರಿಸಿ ತಮ್ಮ ರಾಸುಗಳೊಂದಿಗೆ ಹೇಮಗಿರಿ ಜಾತ್ರೆಗೆ ಆಗಮಿಸಿರುವುದು ಕಂಡು ಬಂದಿದೆ.
ಕೆ.ಆರ್.ಪೇಟೆ ತಾಲ್ಲೂಕಿನ ಪುರಾಣ ಪ್ರಸಿದ್ಧ ಪುಣ್ಯ ಕ್ಷೇತ್ರ ಹೇಮಗಿರಿಯ ಶ್ರೀ ಕಲ್ಯಾಣವೆಂಕಟರಮಣ ಸ್ವಾಮಿ ದನಗಳ ಜಾತ್ರೆಯು ಆರಂಭವಾಗಿದ್ದು, ಮೈಸೂರು, ತುಮಕೂರು, ಶಿವಮೊಗ್ಗ, ಹುಬ್ಬಳ್ಳಿ, ಧಾರವಾಢ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ತಮ್ಮ ರಾಸುಗಳೊಂದಿಗೆ ಜಾತ್ರೆಗೆ ಆಗಮಿಸಿರುವ ರೈತ ಬಾಂಧವರು ಹಾಗೂ ರಾಸುಗಳನ್ನು ಮಾರಾಟ ಮಾಡುವ ದಲ್ಲಾಳಿಗಳು ಕಳೆದ ಎರಡು ದಿನಗಳಿಂದ ಹೇಮಗಿರಿ ಜಾತ್ರೆಯಲ್ಲಿ ಬೀಡುಬಿಟ್ಟಿದ್ದಾರೆ.
ಕನಿಷ್ಟ ಐವತ್ತು ಸಾವಿರ ರೂ.ಗಳಿಂದ ಆರಂಭವಾಗುವ ರಾಸುಗಳು ಐದು ಲಕ್ಷ ರೂ.ಗಳ ವರೆಗೆ ಮಾರಾಟವಾಗುತ್ತಿವೆ. ರಾಜ್ಯ ಸರ್ಕಾರವು ಕೋವಿಡ್ ಹಿನ್ನೆಲೆಯಲ್ಲಿ ಹೇಮಗಿರಿ ಧನಗಳ ಜಾತ್ರೆಯನ್ನು ನಿಷೇಧಿಸಿ ಆದೇಶ ಹೊರಡಿಸಿದ್ದರೂ, ಜಗ್ಗದ ರೈತರು ನಿಷೇಧಾಜ್ಞೆಯನ್ನು ಉಲ್ಲಂಘಿಸಿ ತಮ್ಮ ರಾಸುಗಳೊಂದಿಗೆ ಜಾತ್ರೆಗೆ ಆಗಮಿಸಿದ್ದಾರೆ. ಕರುಗಳು, ಬೇಸಾಯ ಮಾಡುವ ರಾಸುಗಳು, ಧನಗಳು, ಹಾಲುಗಲ್ಲಿನ ಕರುಗಳು, ಎರಡು ಹಲ್ಲಿನ ಕರುಗಳು, ಹೋರಿಗಳು, ಬನ್ನೂರು ತಳಿಯ ಟಗರುಗಳು, ಹಳ್ಳಿಕಾರ್ ರಾಸುಗಳು, ಗಿಡ್ಡ ಹಸುಗಳು, ಸೇರಿದಂತೆ ವಿವಿಧ ಜಾತಿಯ ರಾಸುಗಳು ಜಾತ್ರೆಗೆ ಆಗಮಿಸಿವೆ.
ಈ ಭಾರಿ ಕೊರೊನಾ ಕರಿನೆರಳು ಹೇಮಗಿರಿ ಜಾತ್ರೆಯನ್ನು ಆವರಿಸಿದೆ. ಫೆ.7 ರಂದು ನಡೆಯ ಬೇಕಾಗಿದ್ದ ಶ್ರೀ ಕಲ್ಯಾಣ ವೆಂಕಟರಮಣಸ್ವಾಮಿ ರಥೋತ್ಸವವನ್ನು ತಾಲ್ಲೂಕು ಆಡಳಿತವು ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ. ಫೆ.11 ರಂದು ಹೇಮಗಿರಿಯ ಬೆಟ್ಟದ ತಪ್ಪಲಿನಲ್ಲಿ ಹರಿಯುವ ಹೇಮಾವತಿ ನದಿಯಲ್ಲಿ ನಡೆಯಬೇಕಾಗಿದ್ದ ತೆಪ್ಪೋತ್ಸವವು ಕೂಡಾ ನಡೆಯುವುದಿಲ್ಲ. ಜಾನುವಾರು ಪ್ರೇಮಿಗಳು ಹಾಗೂ ರೈತರಿಗೆ ಈ ಬಾರಿಯ ವೈಶಿಷ್ಯ ಪೂರ್ಣ ದನಗಳ ಜಾತ್ರೆಯು ಇಲ್ಲದಿರುವುದರಿಂದ ಪ್ರತಿವರ್ಷದಂತೆ ನಡೆಯುತ್ತಿದ್ದ ಜಾತ್ರೆಯು ರದ್ದಾಗಿರುವುದರಿಂದ ಬೇಸರವು ಮನೆಮಾಡಿದೆ.
ತಾಲೂಕು ಆಡಳಿತವು ಜಾತ್ರಾ ಮಾಳಕ್ಕೆ ರೈತರು ರಾಸುಗಳೊಂದಿಗೆ ಆಗಮಿಸುವುದನ್ನು ತಡೆಯಲು ಹರಸಾಹಸ ಮಾಡಿದರೂ ರಾಸುಗಳು ಜಾತ್ರೆಗೆ ಆಗಮಿಸುವುದನ್ನು ತಡೆಯಲಾಗದೆ, ಕೈಚೆಲ್ಲಿರುವುದು ಕಂಡು ಬಂದಿದೆ.