News Karnataka Kannada
Monday, May 06 2024
ಮೈಸೂರು

ನಾಲ್ಕು ತಿಂಗಳಿಂದ ವೇತನವಿಲ್ಲದೆ ನಾಗರಹೊಳೆ ಗುತ್ತಿಗೆ ನೌಕರರಿಗೆ ಪರದಾಟ

Nagarahole Protest
Photo Credit : News Kannada

ಮೈಸೂರು: ಬೇಟೆಗಾರರಿಂದ ವನ್ಯಪ್ರಾಣಿಗಳನ್ನು, ಕಾಡ್ಗಿಚ್ಚಿನಿಂದ ಅರಣ್ಯವನ್ನು ರಕ್ಷಿಸಲು ಹಗಲಿರುಳು ಶ್ರಮಿಸುತ್ತಿರುವ ನಾಗರಹೊಳೆ  ರಾಷ್ಟ್ರೀಯ ಉದ್ಯಾನವನದ ಗುತ್ತಿಗೆ ಆಧಾರದಲ್ಲಿ ನೇಮಕಗೊಂಡಿರುವ ಅರಣ್ಯ ವೀಕ್ಷಕರಿಗೆ ಕಳೆದ  ನಾಲ್ಕು ತಿಂಗಳಿನಿಂದ ವೇತನ ಬಾರದಿರುವುದು ತುಕ್ಕು ಹಿಡಿದ ನಮ್ಮ ಆಡಳಿತ ವ್ಯವಸ್ಥೆಗೆ ಸಾಕ್ಷಿಯಾಗಿದೆ.

ಈಗಾಗಲೇ ಬೇಸಿಗೆ ಆರಂಭವಾಗಿದ್ದು, ಕುರುಚಲು ಗಿಡಗಳು ಸೇರಿದಂತೆ ಕಾಡುಗಳು ಒಣಗಿ ನಿಂತಿವೆ. ಇಂತಹ ಸಂದರ್ಭದಲ್ಲಿ ಕಾಡ್ಗಿಚ್ಚುಗಳು ಸಂಭವಿಸುವ ಸಾಧ್ಯತೆಯಿದ್ದು, ಕಾಡ್ಗಿಚ್ಚಿನಿಂದ ಅರಣ್ಯವನ್ನು ಕಾಪಾಡಲು ಅರಣ್ಯ ವೀಕ್ಷಕರು ಹಗಲು ರಾತ್ರಿ ಎನ್ನದೆ ಶ್ರಮಿಸುತ್ತಿದ್ದಾರೆ. ಇಂತಹ ಅರಣ್ಯ ವೀಕ್ಷಕರಿಗೆ ಕಳೆದ ನಾಲ್ಕು ತಿಂಗಳಿನಿಂದ ವೇತನ ಬಂದಿಲ್ಲವೆಂದರೆ ಅವರ ಪರಿಸ್ಥಿತಿ ಏನಾಗಿರಬಹುದು?

ನಾಗರಹೊಳೆ ಅರಣ್ಯದಲ್ಲಿ ಅರಣ್ಯವೀಕ್ಷಕರು, ಕಚೇರಿ ಸಿಬ್ಬಂದಿ, ಚಾಲಕರು ಹೀಗೆ ಸುಮಾರು ಮುನ್ನೂರಕ್ಕೂ ಹೆಚ್ಚು ಮಂದಿ ಹೊರಗುತ್ತಿಗೆ ಆಧಾರದಲ್ಲಿ ನೇಮಕವಾಗಿದ್ದಾರೆ.ಆದರೆ ಇವರಿಗೆ 2021ರ ನವೆಂಬರ್ ತಿಂಗಳಿನಿಂದ ವೇತನವೇ ಮಂಜೂರಾಗಿಲ್ಲ. ಈ ತಿಂಗಳು ಇಲ್ಲವೆ ಮುಂದಿನ ತಿಂಗಳು ವೇತನವಾಗಬಹುದೆಂದು ಸಿಬ್ಬಂದಿ ಕಾಯುತ್ತಲೇ ಬಂದಿದ್ದು, ಮನೆಯಲ್ಲಿ ಇವರನ್ನೇ ನಂಬಿರುವ ಕುಟುಂಬ ಕಂಗಾಲಾಗಿದೆ.

ಇದೀಗ ಬೇಸಿಗೆ ದಿನವಾಗಿರುವುದರಿಂದ ಅರಣ್ಯದ ಮೇಲೆ ನಿಗಾವಹಿಸಬೇಕಾಗಿದೆ. ಸ್ವಲ್ಪ ಎಚ್ಚರ ತಪ್ಪಿದರೂ ಕೂಡ ಕಾಡ್ಗಿಚ್ಚು ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ ಹೆಚ್ಚಿನ ಸಿಬ್ಬಂದಿ ವರ್ಗ ಕಾಡನ್ನು ಕಣ್ಣಿಟ್ಟು ಕಾಯುತ್ತಿದೆ. ಹೀಗಿರುವಾಗ ಅವರಿಗೆ ಕೊಡಬೇಕಾಗಿದ್ದನ್ನು ಕೊಟ್ಟಿಲ್ಲವೆಂದರೆ ಹೇಗೆ? ಸರ್ಕಾರ ಈ ಬಗ್ಗೆ ನಿರ್ಲಕ್ಷ್ಯವಹಿಸಿರುವುದೇಕೆ ಎಂಬ ಪ್ರಶ‍್ನೆಗಳು ಜನ ಸಾಮಾನ್ಯರಲ್ಲಿ ಮೂಡುತ್ತಿದೆ.

ನಾಗರಹೊಳೆ ಅಭಯಾರಣ್ಯ ಪ್ರವಾಸಿಗರನ್ನು ಸೆಳೆಯುವ ತಾಣವಾಗಿದ್ದು, ದಿನನಿತ್ಯ ಸಾವಿರಾರು ಮಂದಿ ಇಲ್ಲಿಗೆ ಆಗಮಿಸುತ್ತಾರೆ. ಜತೆಗೆ ಸಫಾರಿಯೂ ಇರುವುದರಿಂದ ಆದಾಯಕ್ಕೇನು ಕೊರತೆಯಿಲ್ಲ. ಹೀಗಿದ್ದರೂ  ಅರಣ್ಯದ ರಕ್ಷಣೆಗೆ  ಜೀವ ಹಂಗು ತೊರೆದು ಕೆಲಸ ನಿರ್ವಹಿಸುವ ನೌಕರರಿಗೆ ಸಮಯಕ್ಕೆ ಸರಿಯಾಗಿ ವೇತನ ನೀಡುತ್ತಿಲ್ಲ ಎಂಬ ಪ್ರಶ್ನೆಗಳು ಕಾಡುತ್ತಿವೆ.

ಈಗಾಗಲೇ ಸಂಬಳ ಸಿಗದ ಕಾರಣದಿಂದ ಸಿಬ್ಬಂದಿ ಸಾಲ ಮಾಡಿಕೊಂಡಿದ್ದು, ಸಾಲ ಕಟ್ಟಲು ಸಂಬಳವಾಗಿಲ್ಲ. ಹೀಗಾಗಿ ತಲೆ ತಪ್ಪಿಸಿಕೊಂಡು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಹುಲಿಯೋಜನೆ ನಿರ್ದೇಶಕನ್ನು ವಿಚಾರಿಸಿದರೆ ತಾಂತ್ರಿಕ ತೊಂದರೆಯಿಂದ ತಡವಾಗಿದೆ. ಒಂದು ವಾರದಲ್ಲಿ ವೇತನ ನೀಡಲು ವ್ಯವಸ್ಥೆ ಮಾಡುವುದಾಗಿ ಹೇಳುತ್ತಾರೆ.

ಸಂಬಂಧಿಸಿದವರು ಇತ್ತ ಗಮನಹರಿಸಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಆದಷ್ಟು ಬೇಗ ವೇತನ ತಲುಪುವಂತೆ ಮಾಡಬೇಕಾಗಿದೆ. ಈ ಸಂಬಂಧಿಸಿದ ಅರಣ್ಯ ಸಚಿವರು, ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು