ನಂಜನಗೂಡು : ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯದ ಹುಂಡಿ ಹಣವನ್ನು ಎಣಿಕೆ ಮಾಡಲಾಗಿದ್ದು ಭಕ್ತಾಧಿಗಳಿಂದ ಕಾಣಿಕೆ ರೂಪದಲ್ಲಿ ಎರಡು ತಿಂಗಳಲ್ಲಿ ದೇಗುಲದಲ್ಲಿರುವ 24 ಹುಂಡಿಗಳಲ್ಲಿ 2ಕೋಟಿ 15 ಲಕ್ಷ 80 ಸಾವಿರ ರೂ.ಗಳು ಸಂಗ್ರಹವಾಗಿದೆ.
ದೀಪಾವಳಿ ಮತ್ತು ಹುಣ್ಣಿಮೆಯ ದಿನಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ದೇಗುಲಕ್ಕೆ ಆಗಮಿಸಿದ್ದರು. ಅಷ್ಟೇ ಅಲ್ಲದೆ ಪ್ರತಿದಿನವೂ ಸ್ಥಳೀಯರು ಸೇರಿದಂತೆ ಹೊರಗಿನಿಂದ ಸಾವಿರಾರು ಮಂದಿ ಆಗಮಿಸಿ ಶ್ರೀಕಂಠೇಶ್ವರನ ದರ್ಶನ ಪಡೆದು ತೆರಳಿದ್ದರು. ಹೀಗೆ ಆಗಮಿಸಿ ಭಕ್ತರು ಕಾಣಿಕೆಯಾಗಿ ಹಣ ಮತ್ತು ಚಿನ್ನ, ಬೆಳ್ಳಿಯನ್ನು ಅರ್ಪಿಸಿದ್ದಾರೆ.
ಎಣಿಕೆ ವೇಳೆ ನಗದು ಜತೆಗೆ ಚಿನ್ನ 108 ಗ್ರಾಂ, ಬೆಳ್ಳಿ 5 ಕೆಜಿ 750 ಗ್ರಾಂ ಹಾಗೂ ವಿದೇಶಿ ಕರೆನ್ಸಿ 29 ಮತ್ತು ನಿಷೇಧಿತ 1000 ಮತ್ತು 500 ರೂ ನೋಟುಗಳು ಒಟ್ಟು 42 ಸಾವಿರ ರೂ.ಗಳು ದೊರೆತಿವೆ. ಎಣಿಕೆ ಕಾರ್ಯದಲ್ಲಿ ಎಇಓ ವೆಂಕಟೇಶ್ ಪ್ರಸಾದ್, ಧಾರ್ಮಿಕ ದತ್ತಿ ತಹಸಿಲ್ದಾರ್, ಬ್ಯಾಂಕ್ ಆಫ್ ಬರೋಡದ ಮ್ಯಾನೇಜರ್ ಹರ್ಷ, ಶ್ರೀ ಶಕ್ತಿ ಸಂಘಗಳು ಶ್ರೀಕಂಠೇಶ್ವರ ದೇವಾಲಯದ ನೌಕರರು ಪಾಲ್ಗೊಂಡಿದ್ದರು.