ನಂಜನಗೂಡು : ಹೆಂಡತಿ ಮೇಲೆ ಅನುಮಾನ ವ್ಯಕ್ತಪಡಿಸಿದ ಗಂಡ ಎದುರು ಮನೆಯ ವ್ಯಕ್ತಿಯ ತಂದೆ ತಾಯಿಯನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಲ್ಲದೆ, ಹೆಂಡತಿ ಮತ್ತು ಸಂಬಂಧಿಕರ ಮೇಲೆ ಮಚ್ಚು ಬೀಸಿ ರಕ್ತದ ಕೋಡಿ ಹರಿಸಿದ ಘಟನೆ ತಾಲ್ಲೂಕಿನ ನವಿಲೂರು ಗ್ರಾಮದಲ್ಲಿ ನಡೆದಿದೆ.
ನವಿಲೂರು ಗ್ರಾಮದ ನಿವಾಸಿ ಈರಯ್ಯ(48) ಎಂಬಾತನೇ ಹಂತಕನಾಗಿದ್ದು, ಈತನ ಮಚ್ಚಿನೇಟಿಗೆ ಗ್ರಾಮದ ನಿಂಗಮ್ಮ(57) ಹಾಗೂ ಮಾದಯ್ಯ(68) ದಂಪತಿ ಮೃತಪಟ್ಟಿದ್ದು, ಪತ್ನಿ ಮಹದೇವಮ್ಮ ಮತ್ತು ಸುರೇಶ, ಮಹದೇವಸ್ವಾಮಿ, ಮಾದಯ್ಯ ಮೊದಲಾದವರು ಗಾಯಗೊಂಡಿದ್ದಾರೆ.
ಹಂತಕ ಈರಯ್ಯ ಮದ್ಯವ್ಯಸನಿಯಾಗಿದ್ದು, ಸದಾ ತನ್ನ ಹೆಂಡತಿ ಮೇಲೆ ಅನುಮಾನ ವ್ಯಕ್ತಪಡಿಸುತ್ತಿದ್ದುದಲ್ಲದೆ, ಎದುರು ಮನೆಯ ರವಿ ಎಂಬಾತನೊಂದಿಗೆ ಸಂಬಂಧ ಕಲ್ಪಿಸಿ ಜಗಳ ತೆಗೆಯುತ್ತಿದ್ದನು. ಈ ನಡುವೆ ಕುಡಿದು ಬಂದ ಆತ ಜಗಳ ತೆಗೆದಿದ್ದಲ್ಲದೆ, ಹೆಂಡತಿ ಗರ್ಭಿಣಿಯಾಗಲು ಆತನೇ ಕಾರಣನೆಂದು ಆತನನ್ನು ಕೊಲೆ ಮಾಡುವುದಾಗಿ ಮನೆಗೆ ತೆರಳಿದ್ದಾನೆ. ಈ ವೇಳೆ ಆತ ಮನೆಯಲ್ಲಿ ಇಲ್ಲದ ಕಾರಣ ಆತನ ತಂದೆ ಮಾದಯ್ಯ ಮತ್ತು ನಿಂಗಮ್ಮನನ್ನು ಕೊಚ್ಚಿ ಕೊಲೆ ಮಾಡಿದ್ದಾನೆ.
ನಂತರ ಹೆಂಡತಿ ಮತ್ತು ಆಕೆಯ ತಾಯಿ ಮೇಲೂ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ. ವಿಷಯ ತಿಳಿದು ಗ್ರಾಮಕ್ಕೆ ಬಂದ ನಂಜನಗೂಡು ಗ್ರಾಮಾಂತರ ಪೊಲೀಸರು ಹಂತಕ ಈರಯ್ಯನ್ನು ವಶಕ್ಕೆ ಪಡೆದು ಪೊಲೀಸ್ ಜೀಪ್ನಲ್ಲಿ ಕರೆತಂದಿದ್ದ ವೇಳೆ ರವಿ ಸಂಬಂಧಿ ಸುರೇಶ ಹಾಗೂ ಮಹದೇವಸ್ವಾಮಿಯನ್ನು ನೋಡಿ ತಕ್ಷಣ ಜೀಪ್ನಿಂದ ಹಾರಿ ಬಂದು ಮತ್ತೆ ಅವರ ಮೇಲೆ ಹಲ್ಲೆ ನಡೆಸಿದ್ದಾನೆ. ಅಲ್ಲದೆ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ರಾಮಸ್ವಾಮಿ ಅವರ ಮೇಲೆ ಹಲ್ಲೆ ಮಾಡಿದ್ದಾನೆ.
ಸದ್ಯ ಗಂಭೀರ ಗಾಯಗೊಂಡ ಮಾದಯ್ಯ, ಸುರೇಶ್ ಹಾಗೂ ಮಹದೇವಸ್ವಾಮಿ ಅವರನ್ನು ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅತ್ತೆ ಗೌರಮ್ಮ, ಪತ್ನಿ ಮಹದೇವಮ್ಮ ಅವರಿಗೆ ಮೈಸೂರಿನ ಕೆಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇನ್ನು ಹಂತಕ ಈರಯ್ಯ ಕಳೆದ ಹತ್ತು ವರ್ಷದ ಹಿಂದೆ ಮೊದಲ ಹೆಂಡತಿಯನ್ನು ಕೊಲೆ ಮಾಡಿ ಜೈಲು ಸೇರಿ ಶಿಕ್ಷೆ ಮುಗಿಸಿ ಬಂದ ಬಳಿಕ ಎರಡನೇ ಹೆಂಡತಿಯನ್ನು ಮದುವೆಯಾಗಿದ್ದ ಮೊದಲನೇ ಹೆಂಡತಿಗೆ 2 ಹೆಣ್ಣು ಮಕ್ಕಳಿದ್ದು, ಗ್ರಾಮಸ್ಥರು ಆತನ ಆಸ್ತಿಯನ್ನು ಹೆಣ್ಣುಮಕ್ಕಳಿಗೆ ಬರೆದಿದ್ದರು ಎಂದು ತಿಳಿದುಬಂದಿದೆ. ಪ್ರಕರಣ ದಾಖಲಿಸಿಕೊಂಡ ನಂಜನಗೂಡು ಗ್ರಾಮಾಂತರ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.