ಮೈಸೂರು: ದಕ್ಷಿಣ ಪದವಿಧರರ ಕ್ಷೇತ್ರದಿಂದ ವಿಧಾನ ಪರಿಷತ್ ಗೆ ಜೂ.13ರಂದು ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಸೋಮವಾರ ಜೆಡಿಎಸ್ ಪಕ್ಷದ ಚುನಾವಣಾ ಕಚೇರಿಯನ್ನು ಉದ್ಘಾಟಿಸಲಾಯಿತು.
ದೇವರಾಜ ಮೊಹಲ್ಲಾದ ಆಲಮ್ಮನ ಛತ್ರದಲ್ಲಿ ನೂತನ ಕಛೇರಿಗೆ ಶಾಸಕ ಸಾ.ರಾ.ಮಹೇಶ್ ಚಾಲನೆ ನೀಡಿದರು. ಇದೇ ವೇಳೆ ಜೆಡಿಎಸ್ ಅಭ್ಯರ್ಥಿಯ ಚುನಾವಣಾ ಪ್ರಚಾರದ ಭಿತ್ತಿ ಪತ್ರ ಬಿಡುಗಡೆ ಮಾಡಲಾಯಿತು.
ಈ ವೇಳೆ ಮಾತನಾಡಿದ ಶಾಸಕ ಸಾ.ರಾ.ಮಹೇಶ್ ಅವರು ಜನರು ಎರಡು ರಾಷ್ಟ್ರೀಯ ಪಕ್ಷಗಳನ್ನು ತಿರಸ್ಕರಿಸಿ, ಪ್ರಾದೇಶಿಕ ಪಕ್ಷಗಳನ್ನು ಬೆಂಬಲಿಸಬೇಕು. ಇಂದು ದೇಶದ ಮತ್ತು ರಾಜ್ಯದ ಪರಿಸ್ಥಿತಿ ಏನೆಂಬುದು ಗೊತ್ತಿದೆ. ಮತದಾರರು ಈ ರಾಷ್ಟ್ರೀಯ ಪಕ್ಷವನ್ನು ಧಿಕ್ಕರಿಸಿ ಪದವೀಧರ ಮತದಾರರು ಪ್ರಾದೇಶಿಕ ಪಕ್ಷವನ್ನು ಬೆಂಬಲಿಸಿ ಹೆಚ್.ಕೆ.ರಾಮು ಅವರನ್ನು ಗೆಲ್ಲಿಸಿಕೊಡಬೇಕು ಎಂದರು.
ಕೆ.ಆರ್.ನಗರದಲ್ಲಿ ಮಳೆ ಹಾನಿ ಕುರಿತು ಪ್ರತಿಕ್ರಿಯಿಸಿ ಜಿಲ್ಲಾ ಕಾರ್ಯದರ್ಶಿಗಳ ಜೊತೆ ಮಾತಾಡಿದ್ದೆ. 5,200ರೂ.ಕೊಡುತ್ತಾರೆ. ಅದರಲ್ಲಿ ಹತ್ತು ಮೂಟೆ ಸಿಮೆಂಟ್ ಬರಲ್ಲ. ಆಮೇಲೆ ಶೇ. 75ಕ್ಕಿಂತ ಮೇಲಿದ್ದರೆ 95ಸಾವಿರ ರೂ. ಕೊಡುತ್ತಿದ್ದಾರೆ ಅದು ಪರ್ವಾಗಿಲ್ಲ. ಆದರೆ ಹಿಂದೆ ಒಂದು ಲಕ್ಷ ತೊಂಭತ್ತೈದು ಸಾವಿರ ಕೊಟ್ಟಿದ್ದರು. ಇನ್ನೂ ನಾಲ್ಕು ಲಕ್ಷ ಕೊಡಬೇಕಿತ್ತು ಅದು ಕಂತುಗಳು ರಿಲೀಸ್ ಆಗಿಲ್ಲ. ಸರ್ಕಾರದವರು ಅವರದ್ದೇ ಆದ ಒತ್ತಡದಲ್ಲಿದ್ದಾರೆ. ಯಾರು ಯಾರು ಯಾವ ಯಾವ ಹುದ್ದೆಗೇರಬೇಕು ಎನ್ನುವ ಒತ್ತಡದಲ್ಲಿದ್ದಾರೆ ಎಂದು ವ್ಯಂಗ್ಯವಾಡಿದರು.
ಈಗ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡುವುದೇನೆಂದರೆ ಜನರು ತತ್ತರಿಸಿದ್ದು ಬೇಗನೇ ಪರಿಹಾರ ಕಲ್ಪಿಸಿ, ಮೈಸೂರು ಜಿಲ್ಲೆ ಕಥೆನೇ ಈ ರೀತಿ ಆದರೆ ಇನ್ನು ಇಡೀ ರಾಜ್ಯದ ಕಥೆ ಏನು? ನಾವು ಊಹಿಸಲಿಕ್ಕೂ ಸಾಧ್ಯವಿಲ್ಲ. ಮಳೆ ಹಾನಿ ಹಿನ್ನೆಲೆ ಸರ್ಕಾರ ಸಮರ್ಪಕವಾಗಿ ಸ್ಪಂದಿಸುತ್ತಾ ಇದೆಯಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ ನಿಮಗೇ ಗೊತ್ತಾಗಿರಬೇಕಲ್ಲ ಎಂದ ಅವರು, ಕೊನೆ ಕ್ಷಣದಲ್ಲಿ ಮನೆ ಬಿದ್ದಿರುವವರಿಗೇನೇ ಪರಿಹಾರ ಕೊಟ್ಟಿದ್ದಾರಾ? ಎಲ್ಲಿ ಕೊಟ್ಟಿದ್ದಾರಾ? ಕೋವಿಡ್ ನಲ್ಲಿ ಮೃತಪಟ್ಟವರಿಗೆ ಇನ್ನೂ ಚೆಕ್ ಗಳು ತಲುಪಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿವಿಧಾನ ಪರಿಷತ್ ಸದಸ್ಯರಾದ ಕೆ.ಟಿ.ಶ್ರೀಕಂಠೇಗೌಡ, ಸಿ.ಎನ್.ಮಂಜೇಗೌಡ, ಜೆಡಿಎಸ್ ಅಭ್ಯರ್ಥಿ ಹೆಚ್.ಕೆ.ರಾಮು ಭಾಗವಹಿಸಿದ್ದರು.