ಮೈಸೂರು : ಮೈಸೂರು-ಬೆಂಗಳೂರು ನಡುವೆ ಸಂಚರಿಸುತ್ತಿರುವ ಟಿಪ್ಪು ಎಕ್ಸ್ಪ್ರೆಸ್ ರೈಲಿಗೆ ಒಡೆಯರ್ ಹೆಸರಿಡುವ ವಿಚಾರದಲ್ಲಿ ನನ್ನದೇನೂ ಅಭ್ಯಂತರ ಇಲ್ಲ. ಸರ್ಕಾರದ ಇಚ್ಛೆ ಇದ್ದರೆ ನಾಮಕರಣ ಮಾಡಬಹುದು ಎಂದು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ನಗರದ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಮುಂಭಾಗ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರಿಗೆ ಖಾಸಗಿಯಾಗಿ ರೈಲ್ವೆ ಹಳಿ ತರಬೇಕು ಎನ್ನುವುದರ ಬಗ್ಗೆ 10ನೇ ಚಾಮರಾಜ ಒಡೆಯರ್ ಆಸಕ್ತಿ ವಹಿಸಿ ರೈಲ್ವೆ ಯೋಜನೆ ರೂಪಿಸಿದ್ದರು. ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲೂ ರೈಲ್ವೆಗಾಗಿ ಕೆಲಸ ನಡೆದಿತ್ತು. ಸಂಸದ ಪ್ರತಾಪ್ ಸಿಂಹ ಅವರು ರೈಲ್ವೆ ಯೋಜನೆಗೆ ಒಡೆಯರ್ ಅವರು ನೀಡಿದ್ದ ಕೊಡುಗೆಗಳನ್ನು ಹೇಳಿದ್ದಾರೆ. ಅದನ್ನು ಮತ್ತೆ ನಾನು ಹೇಳುವ ಅಗತ್ಯವಿಲ್ಲ ಎಂದು ತಿಳಿಸಿದರು.
ಸರ್ಕಾರ ನಾಮಕರಣ ಮಾಡಿದರೆ ಒಳ್ಳೆಯದು. ಆದರೆ, ಈ ವಿಚಾರ ಬೇರೆ ಕಡೆಗೆ ತಲುಪಬಾರದು. ಯಾವುದಾದರೂ ಒಂದು ರೈಲು ಅಥವಾ ನಿಲ್ದಾಣಕ್ಕೆ ಒಡೆಯರ್ ಹೆಸರು ನಾಮಕರಣ ಮಾಡುವ ಬಗ್ಗೆ ನನ್ನದೇನೂ ಇಲ್ಲ. ಸರ್ಕಾರದ ತೀರ್ಮಾನ ಮತ್ತು ಇಚ್ಛೆ ಆಗಿರಬೇಕು. ಅದಕ್ಕೆ ಜನರ ಬೆಂಬಲವೂ ಇರಬೇಕು ಎಂದು ಹೇಳಿದರು.