ಕೆ.ಆರ್.ಪೇಟೆ: ಕಬ್ಬಿನಗದ್ದೆಯಲ್ಲಿ ವಿದ್ಯುತ್ ಪರಿವರ್ತಕವನ್ನು ಅಳವಡಿಸಿರುವ ಪರಿಣಾಮ ಕಬ್ಬಿನ ಸೂಲಂಗಿಗಳಿಗೆ ವಿದ್ಯುತ್ ತಂತಿಗಳ ಸ್ಪಶರ್ವಾಗಿ ಸುಮಾರು ಅರ್ಧ ಎಕರೆ ಕಬ್ಬು ಬೆಂಕಿಗೆ ಆಹುತಿಯಾಗಿರುವ ಘಟನೆ ತಾಲೂಕಿನ ಚಿಲ್ಲದಹಳ್ಳಿ ಗ್ರಾಮದಲ್ಲಿ ನಡೆದಿದೆ.
ಚಿಲ್ಲದಹಳ್ಳಿ ಗ್ರಾಮದ ನಿವಾಸಿ ಈರಯ್ಯ ಎಂಬುವವರಿಗೆ ಸೇರಿದ ಕಬ್ಬಿನ ಗದ್ದೆಯಲ್ಲಿ ಈ ಹಿಂದೆಯೇ ಟಿಸಿಯನ್ನು ಅಳವಡಿಸಲಾಗಿತ್ತು. ಈರಯ್ಯ ಟಿಸಿ ಇರುವ ಸ್ಥಳದ ಸುತ್ತಲೂ ಸ್ವಲ್ಪ ಜಾಗ ಬಿಟ್ಟು ಕಬ್ಬಿನ ನಾಟಿ ಮಾಡಿದ್ದರು. ಕಬ್ಬು ಕಟಾವು ಮಾಡಬೇಕಾಗಿರುವ ಸಮಯದಲ್ಲಿ ವಿದ್ಯುತ್ ತಂತಿಗಳಿಗೆ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಕಬ್ಬಿನ ಗದ್ದೆಗೆ ಬೆಂಕಿ ಬಿದ್ದಿದೆ. ಇದನ್ನು ಗಮನಿಸಿದ ಸ್ಥಳೀಯರು ಮಾಲೀಕ ಈರಯ್ಯ ಹಾಗೂ ಅಗ್ನಿಶಾಮಕ ಠಾಣೆಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.
ಕೂಡಲೇ ಸ್ಥಳಕ್ಕೆ ಆಗಮಿಸಿದ ಠಾಣಾಧಿಕಾರಿ ಶಿವಣ್ಣ, ಸೋಮಶೇಖರ್, ಶ್ರೀಕಾಂತ್, ಚಂದನ್ಕುಮಾರ್ ನೇತೃತ್ವದ ತಂಡ ಸುಮಾರು ಒಂದು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ತಹಬದಿಗೆ ತರುವಲ್ಲಿ ಯಶಸ್ವಿಯಾಗಿದೆ. ಆದರೂ ಸುಮಾರು ಅರ್ಧ ಎಕರೆಯಷ್ಟು ಕಬ್ಬು ಸಂಪೂರ್ಣವಾಗಿ ಸುಟ್ಟುಹೋಗಿದ್ದು ಬಡ ರೈತ ಈರಯ್ಯ ಟಿಸಿಯನ್ನು ಬೇರೆ ಕಡೆಗೆ ಸ್ಥಳಾಂತರ ಮಾಡಬೇಕು ಹಾಗೂ ತನಗಾಗಿರುವ ನಷ್ಟವನ್ನು ತುಂಬಿಕೊಡುವಂತೆ ತಾಲೂಕು ಆಡಳಿತವನ್ನು ಒತ್ತಾಯಿಸಿದ್ದಾರೆ.