ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕ್ರೈಸ್ತರ ಪ್ರವಿತ್ರ ಹಬ್ಬವಾದ ಕ್ರಿಸ್ಮಸ್ ಸಂಭ್ರಮ ಮನೆ ಮಾಡಿದ್ದು, ಶುಕ್ರವಾರ ರಾತ್ರಿಯಿಂದಲೇ ಚರ್ಚ್ಗಳಲ್ಲಿ ಪೂಜಾ ಕೈಂಕರ್ಯಗಳು, ಕ್ಯಾರಲ್ ಗಾಯನ ಸಂಭ್ರಮದಿಂದ ನಡೆಯಿತು.
ಕೋವಿಡ್-19 ಹಿನ್ನೆಲೆಯಲ್ಲಿ ಈ ಬಾರಿಯೂ ಅದ್ದೂರಿ, ಆಡಂಭರದ ಕ್ರಿಸ್ಮಸ್ ಆಚರಣೆಗೆ ಬ್ರೇಕ್ ಬಿದ್ದಿದ್ದು, ಸರ್ಕಾರದ ಮಾರ್ಗಸೂಚಿಗಳನ್ವಯ ಕ್ರಿಸ್ಮಸ್ ಆಚರಣೆಗೆ ಚರ್ಚ್ಗಳು ಸಿದ್ಧವಾಗಿವೆ. ನಗರದ ಮಧ್ಯ ಭಾಗದಲ್ಲಿರುವ ಸೇಂಟ್ ಫಿಲೋಮಿನಾ, ಸಾಡೇ, ವೆಸ್ಲಿ, ಬಾರ್ತೊಲೋಮಿಯಾ, ಆರ್.ಎಸ್.ನಾಯ್ಡು ನಗರದ ಇನ್ಫೆಂಟ್ ಜೀಸಸ್, ಯಾದವಗಿರಿಯ ಸೇಕ್ರೆಡ್ ಹಾರ್ಟ್, ಜಯಲಕ್ಷ್ಮೀಪುರಂನ ಸೇಂಟ್ ಜೋಸೆಫ್, ವಿಶ್ವೇಶ್ವರ ನಗರದ ಸೇಂಟ್ ಥಾಮಸ್, ಸೇಂಟ್ ಮೇರಿಸ್ ಸೇರಿದಂತೆ ನಗರದಲ್ಲಿರುವ 30ಕ್ಕೂ ಹೆಚ್ಚು ಚರ್ಚ್ ಹಾಗೂ ಪ್ರಾರ್ಥನಾ ಸಭೆಗಳ ಕಟ್ಟಡಗಳು ವಿದ್ಯುತ್ ದೀಪಗಳನ್ನು ಹೊದ್ದಿವೆ. ಎಲ್ಲ ಚರ್ಚ್ಗಳ ಕಟ್ಟಡಗಳು ಹೊಸ ಬಣ್ಣದಿಂದ ಕಂಗೊಳಿಸುತ್ತಿವೆ. ಅಲ್ಲದೆ ಚರ್ಚ್ ಆವರಣದಲ್ಲಿ ಏಸುಕ್ರಿಸ್ತನ ಮೂರ್ತಿಗಳನ್ನು ವಿಶೇಷವಾಗಿ ಸಿಂಗರಿಸಿ, ಏಸು ಜನಿಸಿದ ಚಿತ್ರಣವನ್ನು ಕಟ್ಟಿಕೊಡಲಾಗಿದೆ.
ಚರ್ಚಿನ ಹೊರಭಾಗದಲ್ಲಿ ಗೋದಲಿಯನ್ನು ನಿರ್ಮಿಸಿದ್ದು, ಗುರುವಾರ ರಾತ್ರಿಯೇ ಬಾಲ ಏಸುವಿನ ಮೂರ್ತಿಯನ್ನು ವಿಲಿಯಂ ಬಿಷಪ್ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದ್ದರು. ಗೋದಲಿಯ ಪಕ್ಕದಲ್ಲಿ ಸುಂದರವಾದ ಸಂತ ಕ್ಲಾಸ್ನನ್ನು ನಿರ್ಮಿಸಲಾಗಿದ್ದು ಎಲ್ಲರ ಗಮನ ಸೆಳೆಯಿತು. ಇಸ್ರೆಲ್ನ ಬೆತ್ಲೆಹೆಮ್ನ ಕೊಟ್ಟಿಗೆಯೊಂದರಲ್ಲಿ ಜನ್ಮಪಡೆದ ಬಾಲ ಯೇಸು ಬೊಂಬೆ, ಯೇಸುವಿನ ತಂದೆ ಜೋಸೆಫ್, ತಾಯಿ ಮೇರಿ ಬೊಂಬೆಗಳ ಜತೆಗೆ ಕುರಿ, ಹಸು, ಒಂಟೆ ಇನ್ನಿತರ ಪ್ರಾಣಿಗಳ ಗೊಂಬೆಗಳು ಕಣ್ಮನ ಸೆಳೆದವು. ಬಳಿಕ ಸಂತ ಫಿಲೋಮಿನಾ ಚರ್ಚ್ನಲ್ಲಿ ಕ್ರೈಸ್ತ ಧರ್ಮಗುರು ಡಾ.ಕೆ.ಎ.ವಿಲಿಯಂ ಸಮ್ಮುಖದಲ್ಲಿ ಮಿಡ್ನೈಟ್ ಮಾಸ್ ನಡೆಯಿತು. ಕೊರೊನಾ ಹಿನ್ನೆಲೆಯಲ್ಲಿ ಕ್ರೈಸ್ತರನ್ನು ಹೊರತುಪಡಿಸಿ ಸಾರ್ವಜನಿಕರು, ಪ್ರವಾಸಿಗರು ಹೆಚ್ಚಾಗಿ ಆಗಮಿಸಿರಲಿಲ್ಲ.
ರಾತ್ರಿಯೆಲ್ಲಾ ಪೂಜೆ: ಕ್ರಿಸ್ಮಸ್ ಮುನ್ನಾದಿನವಾದ ಶುಕ್ರವಾರ ಎಲ್ಲಾ ಚರ್ಚುಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ನೆರವೇರಿತು. ಮಧ್ಯರಾತ್ರಿ 12ಗಂಟೆಯಿಂದ ಚರ್ಚ್ಗಳು ಧಾರ್ಮಿಕ ಆಚರಣೆ ಆರಂಭವಾಯಿತು. ಈ ಸಂದರ್ಭದಲ್ಲಿ ಚರ್ಚ್ನಲ್ಲಿ ಕ್ಯಾರಲ್ ಗೀತೆ ಮೊಳಗಿತು. ಉಡುಗೊರೆಗಳನ್ನು ಸ್ನೇಹಿತರು, ಸಂಭಂಧಿಕರು, ಬಡವರಿಗೆ ನೀಡಿದರು. ನಸುಕಿನವರೆಗೆ ವಿಶೇಷ ಪ್ರಾರ್ಥನೆ, ಬೈಬಲ್ ಪಾರಾಯಣ ನಡೆಯಿತು. ಸೀಮಿತ ಜನರಿಗೆ ಮಾತ್ರ ಅವಕಾಶ ನೀಡಿರುವುದರಿಂದ ಹಲವರು ತಮ್ಮ ಹತ್ತಿರದ ಚರ್ಚ್ಗಳಿಗೆ ಭೇಟಿ ನೀಡಿ ಏಸುವಿಗೆ ಪೂಜೆ ಸಲ್ಲಿಸಿದರು.
ಇಂದೂ ಸಹ ಚರ್ಚ್ಗಳಲ್ಲಿ ಪ್ರಾರ್ಥನೆ, ಆ ಬಳಿಕ ಕ್ರೈಸ್ತರು ತಮ್ಮ ಗೆಳೆಯರು, ನೆರೆಮನೆಯವರು, ಸಂಬಂಧಿಕರಿಗೆ ಹಬ್ಬದ ಶುಭಾಶಯ ಕೋರುತ್ತಾರೆ. ಮಧ್ಯಾಹ್ನ ಆಟ, ಕ್ರೀಡಾ ಸ್ಪರ್ಧೆಗಳನ್ನು ಚರ್ಚ್ನ ಸಭೆಗಳು ನಡೆಯಲಿವೆ.