ಮೈಸೂರು: ನಾಗರಹೊಳೆ ಅರಣ್ಯದಲ್ಲಿ ಜಿಂಕೆ ಮತ್ತು ಕಡವೆಯನ್ನು ಬೇಟೆಯಾಡಿದ್ದ ಐವರು ಬೇಟೆಗಾರರನ್ನು ಬಂಧಿಸಿರುವ ಅರಣ್ಯ ಇಲಾಖೆ ಅಧಿಕಾರಿಗಳು ತಲೆ ಮರೆಸಿಕೊಂಡಿರುವ ಏಳು ಮಂದಿಗಾಗಿ ಶೋಧನೆ ಆರಂಭಿಸಿದ್ದಾರೆ.
ಪಿರಿಯಾಪಟ್ಟಣ ತಾಲೂಕು ದೊಡ್ಡಹರವೆ ಗ್ರಾಮದ ರವಿ, ನಾರಾಯಣ, ನವಿಲೂರು ಗ್ರಾಮದ ಸ್ವಾಮಿ, ಸುದೀಪ್ ಮತ್ತು ಪ್ರೇಮಕುಮಾರ್ ಬಂಧಿತರಾಗಿದ್ದು, ಇವರಿಂದ ಬೇಟೆಯಾಡಿದ ಕಡವೆ ಮತ್ತು ಮೂಸಿಕ ಜಿಂಕೆಯ ಮಾಂಸ, ಐದು ದ್ವಿಚಕ್ರವಾಹನ, ಎರಡು ಒಂಟಿ ನಳಿಕೆಯ ಬಂದೂಕನ್ನು ವಶಪಡಿಸಿಕೊಳ್ಳಲಾಗಿದೆ.
ಇದೀಗ ಸೆರೆ ಸಿಕ್ಕಿರುವ ಐವರು ಆರೋಪಿಗಳು ಸೇರಿದಂತೆ ಹನ್ನೆರಡು ಮಂದಿ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಹುಣಸೂರು ವನ್ಯ ಜೀವಿ ವಲಯದ ದೊಡ್ಡಹರವೆ ಮೀಸಲು ಅರಣ್ಯದಲ್ಲಿ ಕಡವೆ ಮತ್ತು ಹೆಣ್ಣು ಮೂಸಿಕ ಜಿಂಕೆಯನ್ನು ಬೇಟೆಯಾಡಿದ್ದು, ಬಳಿಕ ಶುಂಠಿ ಜಮೀನಿನಲ್ಲಿರುವ ಶೆಡ್ ನಲ್ಲಿ ಮಾಂಸ ಮಾಡಿ ಸಂಗ್ರಹಿಸಿಟ್ಟಿದ್ದರು. ಈ ಬಗ್ಗೆ ಖಚಿತ ಮಾಹಿತಿ ಅರಣ್ಯ ಇಲಾಖೆಗೆ ಬಂದಿತ್ತು. ಹೀಗಾಗಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಅವರ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ಹನುಮಂತ ರಾಜು ಅವರ ನೇತೃತ್ವದಲ್ಲಿ ವಲಯ ಅರಣ್ಯಾಧಿಕಾರಿ, ಗಣರಾಜ್ ಪಟಗಾರ್, ಉಪ ವಲಯ ಅರಣ್ಯಾಧಿಕಾರಿಗಳಾದ ರಾಮು, ಪ್ರಸನ್ನಕುಮಾರ್, ಅರಣ್ಯರಕ್ಷಕ ಮಹೇಶ್ ಸೇರಿದಂತೆ ಸಿಬ್ಬಂದಿ ದಾಳಿ ನಡೆಸಿದ್ದಾರೆ.
ಈ ವೇಳೆ ಐವರು ಆರೋಪಿಗಳು ಸೆರೆ ಸಿಕ್ಕಿದ್ದು ಉಳಿದ ಏಳು ಮಂದಿ ತಲೆ ಮರೆಸಿಕೊಂಡಿದ್ದಾರೆ. ಆರೋಪಿಗಳಿಂದ ಮಾಂಸ ಸೇರಿದಂತೆ ಬಂದೂಕು, ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಮೇರೆಗೆ ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರೆದಿದೆ.