ಹೆಚ್.ಡಿ.ಕೋಟೆ: ತಾಲೂಕಿನ ಅಂತರಸಂತೆ ವ್ಯಾಪ್ತಿಯಲ್ಲಿ ಹುಲಿಯೊಂದು ಎಲ್ಲೆಂದರಲ್ಲಿ ಅಡ್ಡಾಡುತ್ತಾ ರೈತರ ಜಾನುವಾರುಗಳನ್ನು ಬಲಿತೆಗೆದುಕೊಳ್ಳುತ್ತಿರುವ ಹಿನ್ನಲೆಯಲ್ಲಿ ಹುಲಿಯ ಸೆರೆಗೆ ಅರಣ್ಯ ಇಲಾಖೆ ಬೋನಿಟ್ಟು, ಕಾರ್ಯಾಚರಣೆ ಆರಂಭಿಸಲಾಗಿದೆ.
ಕಳೆದ ಭಾನುವಾರ ತಾಲ್ಲೂಕಿನ ಅಂತರಸಂತೆ ಗ್ರಾಮದ ಗೋವಿಂದರಾಜು ಎಂಬುವವರ ಜಾನುವಾರನ್ನು ಹುಲಿ ಬಲಿ ಪಡೆದಿಲ್ಲದೆ, ಕುರಿಗಾಯಿ ಮಹಿಳೆ ಮತ್ತು ಗ್ರಾಮಸ್ಥರೊಬ್ಬರಿಗೂ ಕಾಣಿಸಿಕೊಂಡಿತ್ತು. ಬಳಿಕ ಆ ಸ್ಥಳದಲ್ಲಿ ಅರಣ್ಯ ಇಲಾಖೆ ಹುಲಿಯ ಚಲನವಲನಗಳ ಮೇಲೆ ನಿಗಾ ಇಡುವ ಸಲುವಾಗಿ ಕ್ಯಾಮೆರಾಗಳನ್ನು ಸಹ ಅಳವಡಿಸಿತ್ತು. ಸದ್ಯ ಆ ಕ್ಯಾಮೆರಾದಲ್ಲಿ ಹುಲಿಯ ಚಿತ್ರ ಸೆರೆಯಾಗಿದ್ದು, ಹುಲಿ ಇರುವುದು ಖಚಿತಗೊಂಡಿದೆ.
ಹೀಗಾಗಿ ಹುಲಿಯ ಪತ್ತೆ ಕಾರ್ಯಾಚರಣೆ ಆರಂಭಿಸಿರುವ ಅರಣ್ಯ ಇಲಾಖೆ ಹಸುವಿನ ಮೃತದೇಹದ ಸಮೀಪ ಬೋನ್ ಇರಿಸಿ ಹುಲಿಯ ಸೆರೆ ಹಿಡಿಯುವ ಪ್ರಯತ್ನ ನಡೆಸಿದೆ. ಈಗಾಗಲೇ ಸುತ್ತಮುತ್ತಲಿನ ಸ್ಥಳಗಳಲ್ಲಿ 20 ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಹುಲಿ ಬೋನಿಗೆ ಬರದಿದ್ದಲ್ಲಿ ಹುಲಿ ಇರುವ ಸ್ಥಳವನ್ನು ಪತ್ತೆ ಮಾಡಿ ಬಳಿಕ ಮುಂದಿನ ಕ್ರಮ ಕೈಗೊಳ್ಳವುದಾಗಿ ಇಲಾಖೆ ತಿಳಿಸಿದೆ.
ಅರಣ್ಯ ಇಲಾಖೆ ಈಗಾಗಲೇ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು, ಧ್ವನಿವರ್ಧಕದ ಮೂಲಕ ಅಂತರಸಂತೆ, ನೂರಲಕುಪ್ಪೆ ಸೇರಿದಂತೆ ಅಕ್ಕಪಕ್ಕದ ಗ್ರಾಮದಲ್ಲಿ ರೈತರು ಜಮೀನುಗಳಿಗೆ ಹೋಗದಂತೆ, ದನಕರುಗಳನ್ನು ಹೊರಗೆ ಬಿಡದಂತೆ ಪ್ರಚಾರ ಮಾಡಲಾಗುತ್ತಿದೆ.