ಮೈಸೂರು: ಕಾಂಗ್ರೆಸ್ ಆಗಲಿ, ಬಿಜೆಪಿಯಾಗಲಿ, ಜೆಡಿಎಸ್ ಆಗಲಿ ಒಂದು ಕುಟುಂಬಕ್ಕೆ ಒಂದೇ ಟಿಕೆಟ್ ನೀಡಲು ಸಾಧ್ಯವೇ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ವಿಧಾನ ಪರಿಷತ್ ಸದಸ್ಯರ ಪಟ್ಟಿಯನ್ನು ನೋಡಿದರೆ ಸಾಕು. ಇನ್ನು ಕಾಂಗ್ರೆಸ್ನಲ್ಲಿ ಈ ವಿಷಯವನ್ನು ಮೈಸೂರು ಭಾಗದ ನಾಯಕರೇ ಒಪ್ಪುತ್ತಿಲ್ಲ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ಅವರ ಕಾಲೆಳೆದಿದ್ದಾರೆ. ಕಳೆದ ಬಾರಿ ಚುನಾವಣೆಯಲ್ಲಿ ನಾನು 36 ಸಾವಿರ ಮತಗಳಿಂದ ಗೆದ್ದರೆ, ನನ್ನ ಮಗ ವರುಣ ಕ್ಷೇತ್ರದಲ್ಲಿ 50 ಸಾವಿರ ಮತಗಳ ಅಂತರದಿಂದ ಜಯಗಳಿಸಿರುವುದಾಗಿ ಹೇಳಿದ್ದಾರೆ. ಅಂದರೆ ಇದೊಂದು ರೀತಿಯಲ್ಲಿ ಹಾಸ್ಯಾಸ್ಪದ ಮಾತುಗಳು. ಕರ್ನಾಟಕದ ಮಟ್ಟಿಗಂತು ಇದು ಸಾಧ್ಯವೇ ಇಲ್ಲ. ಇವರು ಜನರನ್ನು ಮೂರ್ಖರನ್ನಾಗಿಸಲು ನೋಡುತ್ತಿದ್ದಾರೆ ಎಂದರು.
ವಿಧಾನ ಸಭೆಯಿಂದ ವಿಧಾನ ಪರಿಷತ್ಗೆ ನಡೆಯುವ ಚುನಾವಣೆ ಸಂಬಂಧ ಪಕ್ಷದ ಶಾಸಕಾಂಗ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದು. ಇನ್ನು ರಾಜ್ಯಸಭೆಗೆ ಬಿಜೆಪಿ ಮತ್ತು ಕಾಂಗ್ರೆಸ್ನವರು ಎಷ್ಟು ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಾರೆ ಎಂಬುದನ್ನು ನೋಡಬೇಕು. ಅಲ್ಲದೆ ನಾವು ಯಾರನ್ನೂ ಬೆಂಬಲಿಸದಿರಲು ತೀರ್ಮಾನಿಸಿದ್ದೇವೆ ಎಂದು ಅವರು ಹೇಳಿದರು.
ಮುಂದಿನ ದಿನಗಳಲ್ಲಿ ಪಕ್ಷದಲ್ಲಿ ಕೆಲವೊಂದು ಕಠಿಣ ನಿರ್ಧಾರಕ್ಕೆ ಬರಲಾಗುತ್ತಿದೆ. ಪಕ್ಷಕ್ಕೆ ಬಂದವರಿಗೆಲ್ಲ ಮಣೆ ಹಾಕುವುದಿಲ್ಲ. ಪಕ್ಷದಲ್ಲಿ ದುಡಿದವರಿಗೆ ಮಾತ್ರ ಮಣೆ. ಬಂದ ಕೂಡಲೇ ಅವರಿಗೆ ಅಧಿಕಾರ ನೀಡದಿರಲು ತೀರ್ಮಾನಿಸಲಾಗುತ್ತಿದೆ. ಪಕ್ಷವನ್ನು ಯಾರು ಬಿಡುತ್ತಾರೆ. ಯಾವ ಪಕ್ಷಕ್ಕೆ ಯಾರು ಹೋಗುತ್ತಾರೆ ಎಂಬುದಕ್ಕಿಂತ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 123ಸ್ಥಾನ ಗೆಲ್ಲಬೇಕು ಎಂಬುದಷ್ಟೇ ನನ್ನ ಗುರಿ ಎಂದರು.