ಮಂಗಳೂರು: ಗ್ಯಾನ್ ವಾಪಿ ಮಸೀದಿ ವಿಚಾರವಾಗಿ ಮ್ಯಾಜಿಸ್ಟ್ರೇಟ್ ಕೋರ್ಟ್ ನೀಡಿರುವ ಆದೇಶವನ್ನು ವಿರೋಧಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ “ಗ್ಯಾನ್ ವಾಪಿ ಮಸೀದಿ ವಿರುದ್ಧದ ಷಡ್ಯಂತ್ರವನ್ನು ಸೋಲಿಸೋಣ, 1991ರ ಆರಾಧನಾ ಸ್ಥಳಗಳ ಕಾಯ್ದೆಯನ್ನು ಜಾರಿಗೊಳಿಸೋಣ” ಎಂಬ ಆಗ್ರಹದೊಂದಿಗೆ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕರೆ ನೀಡಿದ್ದು ಇದರ ಭಾಗವಾಗಿ ಎಸ್ ಡಿಪಿಐ ವತಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ದೇರಳಕಟ್ಟೆ ಮತ್ತು ಬೆಳ್ತಂಗಡಿ ಯಲ್ಲಿ ಕೋರ್ಟ್ ಆದೇಶದ ವಿರುದ್ಧ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಾ ಸಭೆಯನ್ನುದ್ದೇಶಿಸಿ ಎಸ್ ಡಿಪಿಐ ಸುಳ್ಯ ಕ್ಷೇತ್ರ ಸಮಿತಿ ಅಧ್ಯಕ್ಷ ಇಕ್ಬಾಲ್ ಬೆಳ್ಳಾರೆ,ಜಿಲ್ಲಾ ಸಮಿತಿ ಸದಸ್ಯ ಆಶ್ರಫ್ ಕೆಸಿರೋಡ್, ನವಾಝ್ ಕಟ್ಟೆ, ಝಾಕಿರ್ ಉಳ್ಳಾಲ, ನಾಸಿರ್ ಸಜಿಪ ಮಾತನಾಡಿ ಗ್ಯಾನ್ ವಾಪಿ ಮಸೀದಿಯ ವುಝು ಕೊಳದಲ್ಲಿದ್ದ ನೀರಿನ ಕಾರಂಜಿ ಆಕೃತಿಯನ್ನು ಶಿವಲಿಂಗ ಪತ್ತೆಯಾಗಿದೆ ಎಂಬ ಸುಳ್ಳು ವರದಿ ನೀಡಿ ಷಡ್ಯಂತ್ರವನ್ನು ರೂಪಿಸಿ ಕೋರ್ಟ್ ಮೂಲಕ ನಿರ್ಬಂಧ ಹೇರಿರುವುದು 1991 ರ ಆರಾಧನಾ ಸ್ಥಳಗಳ ಕಾಯ್ದೆಯ ಉಲ್ಲಂಘನೆಯಾಗಿದೆ ಇದನ್ನು ಒಪ್ಪಲು ಸಾಧ್ಯವಿಲ್ಲ ಇದರ ವಿರುದ್ಧ ಎಲ್ಲರೂ ಒಟ್ಟಾಗಿ ಹೋರಾಟ ನಡೆಸಬೇಕಾಗಿದೆ ಎಂದು ಸರಕಾರ ಮತ್ತು ಸಂಘಪರಿವಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಎಸ್ ಡಿಪಿಐ ಜಿಲ್ಲಾ,ಕ್ಷೇತ್ರ ,ಬ್ಲಾಕ್ ಮತ್ತು ಸ್ಥಳೀಯ ಮಟ್ಟದ ನಾಯಕರು, ಪಕ್ಷದ ಜನಪ್ರತಿನಿಧಿಗಳು, ಕಾರ್ಯಕರ್ತರು, ಹಿತೈಷಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.