ಹಂಪಾಪುರ : ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲ್ಲೂಕಿನ ಕೋಳಗಾಲದ ಚಂದ್ರರಾಜ ಅರಸ್ ಎಂಬುವವರ ಮೇಲೆ ಗುರುವಾರ ಚಿರತೆಯೊಂದು ದಾಳಿ ನಡೆಸಿ ಗಾಯಗೊಳಿಸಿದೆ.
ಚಿರತೆಯನ್ನು ನೋಡಿ ಇವರ ಕೊಟ್ಟಿಗೆಯಲ್ಲಿದ್ದ ಹಸು, ಕರುಗಳು ಜೋರಾಗಿ ಶಬ್ದ ಮಾಡಿವೆ. ಶಬ್ದವನ್ನು ಕೇಳಿದ ಇವರು ಕೊಟ್ಟೆಗೆಗೆ ಬಂದು ನೋಡಿದಾಗ ಚಿರತೆಯು ಇವರ ಮೇಲೆ ಎರಗಿ ತಲೆ, ಮೊಣಕೈ, ಬೆನ್ನುಗಳನ್ನು ಗಾಯಗೊಳಿಸಿದೆ.
ಇವರ ಕೂಗಾಟ ಕೇಳಿ ಅಕ್ಕಪಕ್ಕದವರು ಬಂದು ನೋಡುವಷ್ಟರಲ್ಲಿ ಚಿರತೆ ಪರಾರಿಯಾಗಿತ್ತು. ಗಾಯಗೊಂಡ ಇವರನ್ನು ಎಚ್.ಡಿ.ಕೋಟೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಕಳುಹಿಸಲಾಗಿದೆ.
ಕಳೆದ ಮೂರು ದಿನಗಳ ಹಿಂದೆಯಷ್ಟೇ ಮಾದಪುರ-ಚಕ್ಕೂರು ಮಧ್ಯ ಇರುವ ಕಪಿಲಾ ನದಿಯಲ್ಲಿ ಎರಡು ಚಿರತೆಗಳು ಈಜಾಡುತ್ತಿರುವುದನ್ನು ನೋಡಿದ ಕೆಲವರು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದರು. ದಾಳಿ ಮಾಡಿರುವ ಚಿರತೆ ಇದೇ ಚಿರತೆಯಾಗಿರಬಹುದು ಎಂದು ಗ್ರಾಮಸ್ಥರು ಶಂಕಿಸಿದ್ದಾರೆ.