ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದ ಪದವಿ ಪರೀಕ್ಷೆಯ ಉತ್ತರ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಭಾಗಿಯಾಗಿದ್ದ ಪ್ರಮುಖ ಆರೋಪಿ ಮಹಮ್ಮದ್ ನಿಸಾರ್ನನ್ನು ಸಿಸಿಬಿ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.
ಕೆಲ ದಿನಗಳ ಹಿಂದೆಯಷ್ಟೇ ಮೈಸೂರು ವಿವಿ ಪದವಿ ಪರೀಕ್ಷೆಯ ಉತ್ತರ ಪತ್ರಿಕೆ ಸೋರಿಕೆಯಾಗಿದ್ದ ಪ್ರಕರಣ ಬೆಳಕಿಗೆ ಬಂದಿತ್ತು. ಹಗರಣ ಬೆಳಕಿಗೆ ಬರುತ್ತಿದ್ದಂತೆ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನಲ್ಲಿ ದ್ವಿತೀಯ ದರ್ಜೆ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ಮಹಮ್ಮದ್ ನಿಸಾರ್ ಎಂಬಾತ ತಲೆಮರೆಸಿಕೊಂಡಿದ್ದ. ಈತನ ಬಳಿಯೇ ಕಾಲೇಜಿನ ಪ್ರಮುಖ ಕೀಲಿ ಕೈಗಳಿತ್ತು ಎನ್ನಲಾಗಿದೆ.ಈತನೊಂದಿಗೆ ಗುತ್ತಿಗೆ ನೌಕರ ಮತ್ತಿಬ್ಬರು ವಿದ್ಯಾರ್ಥಿಗಳು ಕೂಡ ಪರಾರಿಯಾಗಿದ್ದರು. ಸದ್ಯ, ಆರೋಪಿ ನಿಸಾರ್ನನ್ನು ಸಿಸಿಬಿ ಪೊಲೀಸರು ಬಂಧಿಸಿರುವ ಪೊಲೀಸರು ಮಹಾರಾಣಿ ಕಾಲೇಜಿನಲ್ಲಿ ಮಹಜರು ನಡೆಸಿದ್ದಾರೆ. ಉಳಿದ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.ಉತ್ತರ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೂ. 22ರಂದು ವಿಚಾರಣೆ ನಡೆಸಲಾಗಿತ್ತು. ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಪ್ರಾಂಶುಪಾಲರು, ಎಸ್ಡಿಎ ನೌಕರ ಮಹಮ್ಮದ್ ನಿಸಾರ್, ಗುತ್ತಿಗೆ ನೌಕರ ರಾಕೇಶ್, ಮೇಟಾಯಿ ಸಂಸ್ಥೆಯ ಮುಖ್ಯಸ್ಥ, ವಿದ್ಯಾರ್ಥಿಗಳಾದ ಚಂದನ್, ಚೇತನ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿತ್ತು. ಆದರೆ, ಪ್ರಾಂಶುಪಾಲರು ಹೊರತುಪಡಿಸಿ ಉಳಿದವರು ವಿಚಾರಣೆಗೆ ಹಾಜರಾಗಿರಲಿಲ್ಲ. ಲಾಕ್ಡೌನ್ ಪೂರ್ಣ ತೆರವಾದ ಬಳಿಕ ಮತ್ತೆ ವಿಚಾರಣೆ ನಡೆಸಲು ಉದ್ದೇಶಿಸಲಾಗಿದೆ ಎನ್ನಲಾಗಿದೆ.
ಮೈಸೂರಿನ ಲಾಡ್ಜ್ವೊಂದರಲ್ಲಿ ಮಹಮ್ಮದ್ ನಿಸಾರ್, ಗುತ್ತಿಗೆ ನೌಕರ ಹಾಗೂ ಕೆಲ ವಿದ್ಯಾರ್ಥಿಗಳೊಂದಿಗೆ ಸೇರಿ ಬಿಎಸ್ಸಿ ರಸಾಯನಶಾಸ್ತ್ರ ವಿಜ್ಞಾನ ವಿಷಯದ ಉತ್ತರ ಪತ್ರಿಕೆ ಸಿದ್ಧಪಡಿಸಿದ್ದ. ನಕಲಿ ಉತ್ತರ ಪತ್ರಿಕೆಯನ್ನು ಅಸಲಿ ಪತ್ರಿಕೆಯೊಂದಿಗೆ ಸೇರಿಸುವ ಸಂಚೂ ನಡೆದಿತ್ತು. ಈ ವೇಳೆ ದಾಳಿ ನಡೆಸಿದ್ದ ಮಂಡಿ ಠಾಣೆ ಪೊಲೀಸರು ಪ್ರಕರಣ ದಾಖಲಿಸದೆ ಆರೋಪಿಗಳನ್ನು ಬಿಟ್ಟು ಕಳುಹಿಸಿದ್ದರು ಎಂಬ ಆರೋಪ ಕೇಳಿ ಬಂದಿತ್ತು.ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ಮಂಡಿ ಠಾಣೆಯ ಇನ್ಸ್ಪೆಕ್ಟರ್ ನಾರಾಯಣಸ್ವಾಮಿ ಸೇರಿದಂತೆ ಐವರು ಪೊಲೀಸರನ್ನು ಅಮಾನತುಗೊಳಿಸಿದ್ದರು.
ಮೈಸೂರು ವಿವಿ ಉತ್ತರ ಪತ್ರಿಕೆ ಸೋರಿಕೆ ಪ್ರಕರಣ: ಮುಖ್ಯ ಆರೋಪಿ ಬಂಧನ
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.