ಮೈಸೂರು: ಸಾಹಿತಿ ದೇವನೂರು ಮಹಾದೇವ ಅವರು ಆರ್ ಎಸ್ ಎಸ್ ಆಳ ಅಗಲ ಬರೆಯಲು ಹೋಗಿ ಒಂದು ಪಕ್ಷದ ಆಳಾಗಿ ಬರೆದಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮಗಳಿಗೆ ಆರ್ ಎಸ್ ಎಸ್ ಆಳ ಮತ್ತು ಅಗಲ ಕೃತಿ ರಚನೆ ವಿಚಾರವಾಗಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಸಾಹಿತಿ ದೇವನೂರು ಮಹಾದೇವ ಅವರು ಘನತೆ ಕಳೆದುಕೊಂಡಿದ್ದಾರೆ. ಇದು ದೇವನೂರು ಮಹಾದೇವ ಅವರ ಕೃತಿಯಲ್ಲ ವಿಕೃತಿ ಎಂದರು. ಕುಸುಮ ಬಾಲೆ ನಂತರ ದೇವನೂರು ಮಹಾದೇವನವರ ಆಸಕ್ತಿಯಿಂದ ಅವರ ಆರ್ ಎಸ್ ನ ಆಳ ಮತ್ತು ಅಗಲ ಕೃತಿಯನ್ನು ಓದಿದೆ. ಆದರೆ ಓದಾದ ನಂತರ ನನಗನಿಸಿದ್ದು ಕಾಂಗ್ರೆಸ್ ಪಕ್ಷದ ಆಳಾಗಿ ಬರೆದವರಿಗೆ ಆರ್ ಎಸ್ ಎಸ್ ನ ಆಳ ಅಗಲದ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಿಲ್ಲ. ಸಂಕುಚಿತ ಮನಸ್ಥಿತಿಯಿಂದ ಹೊರಗಡೆ ಬರದೆ ಒಂದು ಪಕ್ಷದ ಆಳಾಗಿ ಬರೆದಿದ್ದಾರೆ. ಆ ಮೂಲಕ ಅವರಿಗೆ ಆಳ ಅಗಲ ಎರಡೂ ಗೊತ್ತಿಲ್ಲ ಎಂಬುದು ಮನವರಿಕೆಯಾಗಿದೆ ಎಂದರು.
ಒಂದು ಪಕ್ಷ, ಒಬ್ಬ ನಾಯಕ, ಒಂದು ಸಿದ್ಧಾಂತದಿಂದ ಪ್ರಭಾವಿತವಾಗಿರುವ ಆರ್ ಎಸ್ ಎಸ್ ಅಪಾಯ ಎಂದು ಹೇಳಿದ್ದಾರೆ. ಆದರೆ ಅವರು ತಿಳಿದುಕೊಳ್ಳಬೇಕಾಗಿದ್ದು, ಒಂದು ಪಕ್ಷ, ಒಬ್ಬ ನಾಯಕ, ಒಂದು ಸಿದ್ಧಾಂತ, ಒಂದು ಬಾವುಟದಿಂದ ಪ್ರಭಾವಿತವಾಗಿರುವುದು ಆರ್ ಎಸ್ ಎಸ್ ಅಲ್ಲ. ಆರ್ ಎಸ್ ಎಸ್ ಭಗವಾಧ್ವಜದಿಂದ ಪ್ರಭಾವಿತವಾಗಿದೆ.
ಆರ್ ಎಸ್ ಎಸ್ ಭಾರತೀಯ ಸಂಸ್ಕೃತಿಯಿಂದ ಪ್ರಭಾವಿತವಾಗಿದೆ. ಆದರೆ ಒಂದು ಪಕ್ಷ, ಒಂದು ವ್ಯಕ್ತಿ, ಒಂದು ಸಿದ್ಧಾಂತದಿಂದ ಆತ ಹೇಳಿದಂತಹ ಪ್ರತಿಪಾದನೆಗಳಿಂದಲೇ ಇಂದು ಜಗತ್ತಿನಾದ್ಯಂತ ಭಯೋತ್ಪಾದನೆ ನಡೆಯುತ್ತಿರುವುದು. ಅದು ಯಾವ ಧರ್ಮ ಅಂತ ನಿಮಗೆ ಗೊತ್ತಿಲ್ಲವೆ ಎಂದು ಪ್ರಶ್ನಿಸಿದರು.
ಚಾತುರ್ ವರ್ಣ ಪದ್ಧತಿ ಕೇವಲ ಹಿಂದೂ ಧರ್ಮದಲ್ಲಿಲ್ಲ. ಕ್ರಿಶ್ಚಿಯನ್ ಧರ್ಮದಲ್ಲೂ ಕ್ಯಾಥೋಲಿಕ್, ಪ್ರಾಟೆಸ್ಟಂಟ್ , ನಿಗ್ರೋ ಮುಂತಾದ ಪಂಥಗಳಿವೆ.ಇಸ್ಲಾಂ ಧರ್ಮದಲ್ಲೂ ಸುನ್ನಿ, ಶಿಯಾ, ಪಠಾಣ್, ಮೊಗಲ್ ಅಲ್ಲೂ ನೂರಾರು ಜಾತಿಗಳಿವೆ. ಚಾತುರ್ ವರ್ಣ ವಿರೋಧಿಸುವುದಾದರೆ ಎಲ್ಲಾ ಧರ್ಮಗಳ ಬಗ್ಗೆಯೂ ಮಾತನಾಡಿ, ಅಂಬಾನಿ, ಅದಾನಿ ಆದಾಯ ಜಾಸ್ತಿಯಾಗಿದೆ. ಬ್ಯಾಂಕ್ ಗಳ ಸಾಲ ರೈಟ್ ಆಫ್ ಬಗ್ಗೆ ಏನೇನೋ ಬರೆದಿದ್ದಾರೆ ಇದೆಲ್ಲವನ್ನೂ ಗಮನಿಸಿದರೆ ಒಬ್ಬ ಕಾಂಗ್ರೆಸ್ ಕಾರ್ಯಕರ್ತ ರಾಹುಲ್ ಗಾಂಧಿ ಭಾಷಣದಿಂದ ಪ್ರೇರಿತರಾಗಿ ಬರೆದಿದ್ದಾರೆ ಅನಿಸುತ್ತದೆ ಎಂದು ಲೇವಡಿ ಮಾಡಿದ್ದಾರೆ.