ಮೈಸೂರು: ಸ್ವಂತ ಜಮೀನಿನಲ್ಲಿ ಪ್ರತಿ ವರ್ಷ ಸಸಿಗಳನ್ನು ಬೆಳೆಸಿ ಅವುಗಳನ್ನು ಮೈಸೂರಿನ ಜನತೆಗೆ ನೀಡುವ ಕಾರ್ಯವನ್ನು ರಾಜೀವ್ ಅವರು ಮಾಡುತ್ತಾ ಬಂದಿದ್ದು, ಇದೊಂದು ಅತ್ಯುತ್ತಮ ಕಾರ್ಯ ಎಂದು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಶ್ಲಾಘಿಸಿದರು.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ ರಿ , ರಾಜೇಶ್ ಸ್ನೇಹ ಬಳಗ ಇವರ ಸಂಯುಕ್ತ ಆಶ್ರಯದಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಘಟಿಕೋತ್ಸವ ಭವನದಲ್ಲಿ ಆಯೋಜಿಸಲಾಗಿದ್ದ 25000 ಸಸಿ ನೆಡುವ ವನಮಹೋತ್ಸವ ಕಾರ್ಯಕ್ರಮದಲ್ಲಿ “ವನಸಿರಿ” ಉದ್ಘಾಟಿಸಿ ಅವರು ಮಾತನಾಡಿ, ಅರಣ್ಯ ಇಲಾಖೆ ವತಿಯಿಂದಲೂ ಸಸಿಗಳ ವಿತರಣೆ ಮಾಡುವ ಮೂಲಕ ಪರಿಸರ ಸಂರಕ್ಷಣೆಗೆ ಒತ್ತು ನೀಡಲಾಗುತ್ತಿದೆ. ಎರಡು ವರ್ಷದ ಹಿಂದೆ ಚಾಮುಂಡಿಬೆಟ್ಟದ ಸುತ್ತ 2 ಲಕ್ಷ ಗಿಡಗಳನ್ನು ನೆಡುವ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು. ಅರಣ್ಯ ಇಲಾಖೆಯವರು 40 ಸಾವಿರ ಸಸಿಗಳನ್ನು ನೆಟ್ಟಿದ್ದಾರೆ ಎಂದು ಹೇಳಿದರು.
ರಾಜೀವ್ ಅವರು ಸಹಕಾರ ಕ್ಷೇತ್ರದಲ್ಲಿ ಅಪಾರ ಸೇವೆ ಮಾಡುವುದರ ಜೊತೆಗೆ ಪರಿಸರ, ಸ್ವಚ್ಛತೆ ಬಗ್ಗೆ ವಿಶೇಷ ಗಮನ ನೀಡಿದ್ದಾರೆ. ಮೈಸೂರಿನ ಸುತ್ತಮುತ್ತ ಗಿಡ ನೆಡುವುದರ ಜೊತೆಗೆ ಪೋಷಣೆ ಕೂಡ ಮಾಡುತ್ತಿದ್ದಾರೆ. ಜಿಲ್ಲಾಡಳಿತ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಕೂಡ ರಾಜೀವ್ ಅವರ ಕಾರ್ಯಕ್ಕೆ ಕೈ ಜೋಡಿಸಿ ಮೈಸೂರಿನ ಪರಿಸರ, ಸ್ವಚ್ಛತೆ ಬಗ್ಗೆ ಕಾಳಜಿ ವಹಿಸುತ್ತಿದೆ ಎಂದರು.
ರಾಜ್ಯಸಭೆಗೆ ವೀರೇಂದ್ರ ಹೆಗ್ಗಡೆ ಅವರನ್ನು ಆಯ್ಕೆ ಮಾಡಿರುವುದನ್ನು ಇಡೀ ದೇಶವೇ ಸ್ವಾಗತಿಸಿದೆ. ಎಷ್ಟರಮಟ್ಟಿಗೆ ಎಂದರೆ ನಾವೇ ರಾಜ್ಯಸಭೆಗೆ ಆಯ್ಕೆಯಾದ ಭಾವನೆ ಪ್ರತಿಯೊಬ್ಬರಲ್ಲಿ ಮೂಡಿದೆ. ಸುತ್ತೂರು ಶ್ರೀಗಳು ಕೋವಿಡ್ ಸಂದರ್ಭದಲ್ಲಿ ಸರ್ಕಾರದ ಜೊತೆ ಕೈಜೋಡಿಸಿದ್ದರು. ಮಠದ ಕಾರ್ಯಕ್ಕೆ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರು ಕೂಡ ಶ್ಲಾಘಿಸಿದರು. ರಾಜೀವ್ ಅವರ ಕಾರ್ಯ ಇತರರಿಗೂ ಮಾದರಿಯಾಗಲಿ. ಅವರ ಪರಿಸರ ಕಾಳಜಿ ಕಾರ್ಯ ಯಶಸ್ವಿಯಾಗಲಿ ಎಂದರು.
ರಾಜರ್ಷಿ, ಪದ್ಮಭೂಷಣ, ಪದ್ಮವಿಭೂಷಣ ಪುರಸ್ಕೃತರಾದ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಮಾತನಾಡಿ ಪ್ರಕೃತಿಯ ಬಗ್ಗೆ ಇರುವ ನಮ್ಮ ಜ್ಞಾನವನ್ನು ಜಾಗೃತಗೊಳಿಸಿದ್ದಾರೆ. ಮುಂದಿನ ಜನಾಂಗದವರೆಗೂ ತಲುಪುವಂತೆ ಗಿಡಮರಗಳನ್ನು ಬೆಳೆಸಬೇಕು ಹಸಿರನ್ನು ಉಳಿಸಿ ಪರಿಸರ ಬೆಳೆಸಿ ಎಂಬ ನಾಣ್ನುಡಿಯಂತೆ ನಮ್ಮ ಮುಂದಿನ ಪೀಳಿಗೆಗಾಗಿ ವೃಕ್ಷವನ್ನು ಬೆಳೆಸಬೇಕು.
ಕಾಡಿನಲ್ಲಿರುವ ಪ್ರಾಣಿಗಳು ನಾಡಿಗೆ ಬರುತ್ತವೆ ಏಕೆಂದರೆ ಕಾಡಿನಲ್ಲಿ ಇರುವ ವೃಕ್ಷಗಳು, ಮರಗಿಡಗಳನ್ನು ನಾವು ನಾಶ ಮಾಡಿದ್ದೇವೆ ಹಾಗೂ ಪ್ರಾಣಿಗಳನ್ನು ನಾಶ ಮಾಡಿದ್ದೇವೆ. ಸಸಿಗಳನ್ನು ಹಾಗೂ ಪ್ರಾಣಿಗಳು ತಿನ್ನುವಂತ ಗಿಡಗಳನ್ನು ಕಾಡಿನಲ್ಲಿ ಬೆಳೆಸಿದರೆ ಪ್ರಾಣಿಗಳು ನಾಡಿಗೆ ಬರುವುದಿಲ್ಲ ಹಾಗೆ ಪ್ರಾಣಿಗಳ ನಾಶವೂ ಕೂಡ ಆಗುವುದಿಲ್ಲ ಎಂದು ಹೇಳಿದರು.
ಪಬ್ಲಿಕ್ ಟಿವಿ ಮುಖ್ಯಸ್ಥರಾದ ಎಚ್.ಆರ್.ರಂಗನಾಥ್ ಅವರು ಮಾತನಾಡಿ ಮರ ಹಸಿರು ಪ್ರಕೃತಿ ರಾಜಕೀಯ ಇದೆಲ್ಲಾ ವಿರುದ್ಧವಾಗಿರುವ ಸಂಬಂಧವಾಗಿದೆ. ಇಂದು ಗ್ಲೋಬಲ್ ವಾರ್ಮಿಂಗ್ ನಿಂದ ಆಗುತ್ತಿರುವ ಪರಿಣಾಮಗಳಿಂದಾಗಿ ಕ್ಯಾನ್ಸರ್ ಶ್ವಾಸಕೋಶ ತೊಂದರೆ ಹಾಗೂ ಅನೇಕ ಆರೋಗ್ಯ ಸಮಸ್ಯೆಗಳನ್ನು ನಾವು ಇಂದು ನೋಡಿದ್ದೇವೆ ಹಾಗೆಯೇ ಪ್ರಕೃತಿಗೂ ಕೂಡ ಇದೇ ಗ್ಲೋಬಲ್ ವಾರ್ಮಿಂಗ್ ಸಮಸ್ಯೆಯನ್ನು ಒಳಗೊಳಗೆ ಅನುಭವಿಸುತ್ತಿದೆ ಹಾಗಾಗಿ ಪರಿಸರದಲ್ಲಿ ಭೂಕಂಪ, ಅತಿವೃಷ್ಟಿ-ಅನಾವೃಷ್ಟಿ ಹೆಚ್ಚಾಗಿ ಕಂಡು ಬರುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಪಬ್ಲಿಕ್ ಟಿ.ವಿ ಮುಖ್ಯಸ್ಥರಾದ ಎಚ್.ಆರ್.ರಂಗನಾಥ್ ಅವರ ಸಮಾಜಮುಖಿ ಪುಸ್ತಕವನ್ನು ಲೋಕಾರ್ಪಣೆ ಮಾಡಲಾಯಿತು ಹಾಗೂ ಪ್ರಜಾವಾಣಿಯ ಕಾರ್ಯನಿರ್ವಾಹಕ ಸಂಪಾದಕರಾದ ರವೀಂದ್ರ ಭಟ್ ಅವರಿಗೆ ಸಿರಿ ಸಂವರ್ಧನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರಶಸ್ತಿ ಪುರಸ್ಕೃತರಾದ ಪರಿಸರ ತಜ್ಞರು ಮತ್ತು ಲೇಖಕರಾದ ಶಿವಾನಂದ ಕಳವೆ ಹಾಗೂ ಪರಿಸರ ಮತ್ತು ಶಿಕ್ಷಣ ತಜ್ಞರಾದ ವಿನಯ್ ರಾಮಕೃಷ್ಣ, ಹಾಗು ವನ್ಯಜೀವಿ ಪತ್ರಿಕೋದ್ಯಮಿಯಾದ ವಿನೋದ್ ಕುಮಾರ್ ಬಿ ನಾಯಕ್ ಅವರಿಗೆ ಸಿರಿ ಸಂವರ್ಧನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಸುತ್ತೂರು ಶ್ರೀಗಳಾದ ಪರಮಪೂಜ್ಯ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಂಸದರಾದ ಪ್ರತಾಪ್ ಸಿಂಹ, ಶಾಸಕರಾದ ಎಲ್.ನಾಗೇಂದ್ರ, ಜಿ.ಟಿ.ದೇವೇಗೌಡ, ಮೂಡಾ ಅಧ್ಯಕ್ಷರಾದ ರಾಜೀವ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.