ಉಜಿರೆ: ಹಿಂದೆ ವಿಜ್ಞಾನ ಕ್ಷೇತ್ರಗಳಲ್ಲಿ ಸೀಮಿತ ವೃತ್ತಿಗಳಿದ್ದವು. ಆದರೆ ಈಗ ಪ್ರಪಂಚ ವಿಸ್ತಾರಗೊಳ್ಳುತ್ತಿದ್ದ ಹಾಗೆ ಅವಕಾಶಗಳೂ ವಿಸ್ತಾರಗೊಳ್ಳುತ್ತಿವೆ. ಹಾಗಾಗಿ ವಿದ್ಯಾರ್ಥಿಗಳು ಸ್ಪಷ್ಟ ಗುರಿ ಹಾಗೂ ಇಚ್ಛಾ ಶಕ್ತಿಗಳನ್ನು ಹೊಂದಿ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಮಂಗಳೂರಿನ ಇನ್ಸ್ಟಿಟ್ಯೂಟ್ ಆಫ್ ಇಂಡಿವಿಜುವಲ್ ಡೆವಲಪ್ಮೆಂಟ್ ನಿರ್ದೇಶಕ ರೊನಾಲ್ಡ್ ಪಿಂಟೋ ಹೇಳಿದರು.
ಉಜಿರೆ ಎಸ್.ಡಿ.ಎಂ. ಕಾಲೇಜಿನಲ್ಲಿ ರಸಾಯನ ಶಾಸ್ತ್ರ ವಿಭಾಗದ ವತಿಯಿಂದ ಬಿ.ಎಸ್ಸಿ. ವಿದ್ಯಾರ್ಥಿಗಳಿಗಾಗಿ ಇತ್ತೀಚೆಗೆ ಆಯೋಜಿಸಲಾಗಿದ್ದ ‘ವೃತ್ತಿ ಅವಕಾಶಗಳು ಮತ್ತು ಭವಿಷ್ಯದ ನಿರೀಕ್ಷೆ’ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರಸ್ತುತ ಬಿ.ಎಸ್ಸಿ. ವಿದ್ಯಾರ್ಥಿಗಳಿಗೆ ರಸಾಯನಶಾಸ್ತ್ರದಲ್ಲಿ ಇಂಡಸ್ಟ್ರಿಯಲ್ ಕೆಮಿಸ್ಟ್ರಿ, ಬಯೋ-ಕೆಮಿಸ್ಟ್ರಿ, ಅಗ್ರಿಕಲ್ಚರಲ್ ಕೆಮಿಸ್ಟ್ರಿ; ಭೌತಶಾಸ್ತ್ರದಲ್ಲಿ ಆಸ್ಟ್ರೋಫಿಸಿಕ್ಸ್, ಪ್ಲಾಸ್ಮಾ ಫಿಸಿಕ್ಸ್, ನ್ಯಾನೋ ಟೆಕ್ನಾಲಜಿ; ಗಣಿತದಲ್ಲಿ ಸ್ಟ್ಯಾಟಿಸ್ಟಿಕ್ಸ್, ಅಪ್ಲೈಡ್ ಮ್ಯಾತ್ಸ್, ಪ್ಯೂರ್ ಮ್ಯಾತ್ಸ್ ಅಧ್ಯಯನ ಮಾಡಬಹುದಾಗಿದ್ದು, ಎಲೆಕ್ಟ್ರಾನಿಕ್ಸ್ ಹಾಗೂ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲೂ ಅವಕಾಶಗಳಿವೆ. ಹಾಗಾಗಿ ಉನ್ನತವಾದ ಗುರಿ ಹೊಂದಿ ಅದರ ಈಡೇರಿಕೆಗೆ ಶ್ರಮಿಸಬೇಕು ಎಂದು ಅವರು ಹೇಳಿದರು.
“ಪದವಿ ನಂತರದ ಉನ್ನತ ಅಧ್ಯಯನವು ನಿಮಗೆ ಉತ್ತಮ ಉದ್ಯೋಗಾವಕಾಶಗಳನ್ನು ಒದಗಿಸುತ್ತದೆ. ಅದಲ್ಲದೆ ಸಾಮಾಜಿಕ ಸ್ಥಾನವೂ ಉತ್ತಮವಾಗಿರುತ್ತದೆ. ಒಂದು ವೇಳೆ ವಿಜ್ಞಾನ ವಿಷಯ ಕಲಿತ ಮೇಲೂ ಆ ಕ್ಷೇತ್ರ ಇಷ್ಟವೆನಿಸದೇ ಇದ್ದಲ್ಲಿ ಕಲಾ ವಿಭಾಗದಲ್ಲಿ ಎಂಸಿಜೆ, ಎಂ.ಎಸ್.ಡಬ್ಲ್ಯೂ., ಇಂಗ್ಲಿಷ್ ಸಾಹಿತ್ಯದಲ್ಲಿ ಎಂಎ ಇತ್ಯಾದಿ ಕೋರ್ಸ್ ಗಳನ್ನು ಮಾಡಬಹುದಾಗಿದ್ದು, ಆ ಕ್ಷೇತ್ರಗಳಲ್ಲೂ ಮಿಂಚಲು ಸಾಧ್ಯವಿದೆ. ಅಷ್ಟೇ ಅಲ್ಲದೆ, ಬಿ.ಎಸ್ಸಿ. ವಿದ್ಯಾರ್ಥಿಗಳು ಸರಕಾರಿ ಮತ್ತು ಖಾಸಗಿ ಉದ್ಯೋಗಗಳಿಗೂ ಅರ್ಜಿ ಹಾಕಬಹುದಾಗಿರುತ್ತದೆ. ವಿದೇಶಕ್ಕೆ ಅಧ್ಯಯನಕ್ಕೆ ಹೋಗಬಹುದಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳನ್ನೂ ಎದುರಿಸಬಹುದಾಗಿದೆ” ಎಂದು ಅವರು ತಿಳಿಸಿದರು.
ಬಳಿಕ ಪ್ರಶ್ನೋತ್ತರ ಕಾರ್ಯಕ್ರಮ ನಡೆಯಿತು. ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥೆ ನಂದಕುಮಾರಿ, ಬೋಧಕರಾದ ರಾಜೇಶ್ ಹಾಗೂ ಗಾನವಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಬಿಂದ್ಯಾ ಸ್ವಾಗತಿಸಿದರು. ನಿರಂಜನ, ವೇದಶ್ರೀ ಪ್ರಾರ್ಥಿಸಿದರು. ಶ್ರೀನಯನ ನಿರೂಪಿಸಿದರು.