ಮೈಸೂರು: ಪರಿಸರ ಸಂರಕ್ಷಣೆಯಲ್ಲಿ ಎಲ್ಲರೂ ಭಾಗಿಯಾಗುವುದರೊಂದಿಗೆ ಸ್ವಚ್ಛ, ಸುಂದರ ನಗರವನ್ನಾಗಿಸಲು ಕೈ ಜೋಡಿಸಬೇಕು ಎಂದು ಮೇಯರ್ ಶಿವಕುಮಾರ್ ಹೇಳಿದರು.
ಮೈಸೂರು ಮಹಾನಗರ ಪಾಲಿಕೆ ಹಾಗೂಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕ ಹಾಗೂ ವಿದ್ಯಾರಣ್ಯ ಟ್ರಸ್ಟ್ ಮತ್ತು ಕೆಎಂಪಿ ಕೆ ಚಾರಿಟೇಬಲ್ ಟ್ರಸ್ಟ್ ಸಹಯೋಗದೊಂದಿಗೆ ನಡೆದ ಸ್ವಚ್ಛತಾ ಜಾಗೃತಿ ಜಾಥಾವನ್ನು ಉದ್ಘಾಟಿಸಿ ಮಾತನಾಡಿದರು.
ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಸ್ವಚ್ಛ ಭಾರತ್ ಮಿಷನ್ ನಗರ-2.0 ಯೋಜನೆಯಡಿ ಪ್ಲಾಸ್ಟಿಕ್ ಚೀಲ ಸೇರಿದಂತೆ ಆಟಿಕೆ ವಸ್ತುಗಳು, ಬಳಸಿದ ಬಟ್ಟೆ, ದಿನಪತ್ರಿಕೆಗಳು, ಹಳೆ ಪುಸ್ತಕಗಳು ಹಾಗೂ ಎಲೆಕ್ಟ್ರಾನಿಕ್ ವಸ್ತುಗಳಂತಹ ಇತರ ನವೀಕರಿಸಿ, ಮರು ಬಳಸಬಹುದಾದ ವಸ್ತುಗಳ ಉತ್ಪಾದನೆಯನ್ನು ಕಡಿಮೆಗೊಳಿಸಲು ಮತ್ತು ಸುಸ್ಥಿರ ಜೀವನ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಪರಿಸರ ರಕ್ಷಿಸುವ ಉದ್ದೇಶದಿಂದ ನನ್ನ ಲೈಪ್, ನನ್ನ ಸ್ವಚ್ಛ ನಗರ ಕಾರ್ಯಕ್ರಮ ಆಯೋಜಿಸಲಾಗಿದೆ.ಅದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ಯೋಜನೆ ಸಾಕಾರಗೊಳಿಸುವ ಅವಶ್ಯಕತೆ ಇದೆ ಎಂದರು.
ಈ ಯೋಜನೆಯಂತೆ ಜನರ ಬಳಿಯಿಂದ ಸಂಗ್ರಹಿಸಲಾಗುವ ಹಳೆ ಬಟ್ಟೆಗಳನ್ನು ಅನಾಥಾಶ್ರಮ ಸೇರಿದಂತೆ ಇನ್ನಿತರ ಅಗತ್ಯವಿರುವ ಸಂಸ್ಥೆಗಳಿಗೆ ವಿತರಿಸಲಾಗುತ್ತದೆ. ಇದೇ ರೀತಿ ಓದಿದ ಪುಸ್ತಕಗಳಿದ್ದರೆ ಅವುಗಳನ್ನು ಗ್ರಂಥಾಲಯ ಅಥವಾ ಅವಶ್ಯತೆ ಇರುವವರಿಗೆ ವಿತರಿಸಲಾಗುತ್ತದೆ. ಇದೇ ರೀತಿ ಹಳೆಯ ಆಟಿಕೆಗಳನ್ನು ಪುನರ್ವಸತಿ ಕೇಂದ್ರಗಳು ಹಾಗೂ ಮಕ್ಕಳನ್ನು ನೋಡಿಕೊಳ್ಳುವ ಸಂಘ ಸಂಸ್ಥೆಗಳಿಗೆ ನೀಡಲಾಗುತ್ತದೆ. ದಿನಪತ್ರಿಕೆಯನ್ನು ಮರು ಬಳಕೆ ಮಾಡಲು ಸಂಬಂಧಿಸಿದ ಕಂಪನಿಗೆ ತಲುಪಿಸಲಾಗುವುದು. ಮಾತ್ರವಲ್ಲದೆ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ಕವರ್ ನೀಡಿದರೆ, ಬಟ್ಟೆ ಬ್ಯಾಗ್ ನೀಡಲಾಗುತ್ತದೆ ಎಂದರು.
ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ ಟಿ ಪ್ರಕಾಶ್ ಮಾತನಾಡಿ, ನಮ್ಮ ಮನೆಗಳಲ್ಲಿ ಬಳಸದೆ ಇರುವ ವಸ್ತುಗಳನ್ನು ಸುಖಾಸುಮ್ಮನೇ ಇಟ್ಟುಕೊಂಡಿರುತ್ತೇವೆ. ಪರಿಸರ ರಕ್ಷಿಸುವ ಉದ್ದೇಶದಿಂದ ಈ ರೀತಿಯ ವಸ್ತುಗಳನ್ನೆಲ್ಲಾ ನಗರ ಪಾಲಿಕೆ ಮರುಬಳಕೆ ಕೇಂದ್ರಕ್ಕೆ ನೀಡಬೇಕು ಎಂದು ಹೇಳಿದರು.
ಹಿರಿಯ ಆರೋಗ್ಯ ನಿರೀಕ್ಷಕರಾದ ಶಿವಪ್ರಸಾದ್ ಮಾತನಾಡಿ,ತ್ಯಾಜ್ಯ ವಸ್ತುಗಳ ಸಮರ್ಪಕ ವಿಲೇವಾರಿ ದೃಷ್ಟಿಯಿಂದ ನನ್ನ ಜೀವನ ನನ್ನ ಸ್ವಚ್ಛ ನಗರ ಎಂಬ ವಿಶೇಷ ಅಭಿಯಾನ ಆರಂಭಿಸಲಾಗಿದೆ. ಇದಕ್ಕೆ ನಗರದ ಸಾರ್ವಜನಿಕರ ಸಹಕಾರ ಅಗತ್ಯ. ನಿಗದಿತ ಕೇಂದ್ರದಲ್ಲಿ ವಸ್ತುಗಳನ್ನು ನೀಡಿ ಯೋಜನೆ
ಸಾಕಾರಗೊಳಿಸಬೇಕಿದೆ ಎಂದು ತಿಳಿಸಿದರು.
ಮೈಸೂರು ವಿದ್ಯಾರಣ್ಯಪುರಂ ನಲ್ಲಿರುವ ವಿದ್ಯಾರಣ್ಯ ಕೋಚಿಂಗ್ ಸೆಂಟರ್ ನಿಂದ ಪ್ರಾರಂಭಗೊಂಡ ಜಾಥಾದಲ್ಲಿ ನಮ್ಮ ನಗರ ಸ್ವಚ್ಛ ನಗರ ಎಂಬ ಘೋಷವಾಕ್ಯದೊಂದಿಗೆನಾರಾಯಣ ಶಾಸ್ತ್ರಿ ರಸ್ತೆಯ ಮೂಲಕ ಚಾಮುಂಡಿಪುರಂ ವೃತ್ತದಲ್ಲಿ ಜಾಥಾ ಮುಕ್ತಾಯಗೊಳಿಸಿದರು.
ಇದೇ ಸಂದರ್ಭದಲ್ಲಿ ಮೈಸೂರು ನಗರ ಪಾಲಿಕೆಯ ಪರಿಸರ ಅಭಿಯಂತರರು ಜ್ಯೋತಿ,ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕ ಅಧ್ಯಕ್ಷರಾದ ಡಾ ಜಿ ವಿ ರವಿಶಂಕರ್, ಕೆಎಂಪಿಕೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ವಿಕ್ರಮ ಅಯ್ಯಂಗಾರ್, ಅಜಯ್ ಶಾಸ್ತ್ರಿ, ಬೈರತಿ ಲಿಂಗರಾಜು, ಸುರೇಶ್, ಜಿ ಎಮ್ ಪಂಚಾಕ್ಷರಿ ಹಾಗೂ ಇನ್ನಿತರರು ಭಾಗವಹಿಸಿದ್ದರು.