ಮೈಸೂರು: ಯುವ ಪೂಜಾರಿಯನ್ನು ನಂಬಿ ಬಂದ ವಿವಾಹಿತ ಮಹಿಳೆ ಇದೀಗ ಗಂಡನೂ ಇಲ್ಲದೆ, ಪ್ರಿಯಕರನೂ ಇಲ್ಲದೆ ಪರದಾಡುತ್ತಿರುವ ಘಟನೆ ನಂಜನಗೂಡು ತಾಲೂಕು ಕೊಲ್ಲೂಪುರ ಗ್ರಾಮದಲ್ಲಿ ನಡೆದಿದೆ.
ಇಪ್ಪತ್ತೊಂದು ವರ್ಷ ಪ್ರಾಯದ ಸಂತೋಷ್ ಎಂಬಾತ ದೇವಸ್ಥಾನವೊಂದರಲ್ಲಿ ಪೂಜಾರಿಯಾಗಿ ಕೆಲಸ ಮಾಡುತ್ತಿದ್ದನು. ಇಲ್ಲಿಗೆ ಆಗಮಿಸುತ್ತಿದ್ದ ವಿವಾಹಿತ ಮಹಿಳೆಯ ಪರಿಚಯವಾಗಿ ಇಬ್ಬರು ಪ್ರೇಮಿಗಳಾಗಿದ್ದಾರೆ.
ಎರಡು ಮಕ್ಕಳಿದ್ದ ಆಕೆ ಗಂಡ ಮತ್ತು ಮಕ್ಕಳನ್ನು ಬಿಟ್ಟು ಸಂತೋಷನೊಂದಿಗೆ ಇರಲು ಬಯಸಿದ್ದು, ತನ್ನನ್ನು ಮದುವೆಯಾಗುವಂತೆ ಪಟ್ಟು ಹಿಡಿದಿದ್ದಳು. ಈ ನಡುವೆ ಆಕೆಯನ್ನು ಕರೆದೊಯ್ದ ಆತ ಸುಮಾರು ಹತ್ತು ದಿನಗಳ ಕಾಲ ಆಕೆಯೊಂದಿಗೆ ಇದ್ದು ಬಳಿಕ ಹುಲ್ಲಹಳ್ಳಿಯ ಬಳಿಯ ಕಾಡಿಗೆ ಕರೆದೊಯ್ದು ಅಲ್ಲಿಂದ ತಪ್ಪಿಸಿಕೊಂಡಿದ್ದಾನೆ.
ಪ್ರಿಯಕರ ಸಂತೋಷ್ ತನಗೆ ಮೋಸ ಮಾಡಿದ್ದಾನೆ ಎಂದು ಆಕೆಗೆ ಗೊತ್ತಾಗಿದ್ದು, ಕಾಡಿನಿಂದ ಹೊರ ಬಂದ ಆಕೆ ಪಕ್ಕದ ಜಮೀನಿನ ಬಳಿ ಕುಳಿತು ಮುಂದೆ ಏನು ಮಾಡುವುದು? ಎಲ್ಲಿಗೆ ಹೋಗುವುದು ಎಂಬುದು ಗೊತ್ತಾಗದೆ ಅಳುತ್ತಾ ಕೂತಿದ್ದಾಳೆ.
ಜಮೀನಿನ ಬಳಿ ಏಕಾಂಗಿಯಾಗಿ ಕುಳಿತಿದ್ದ ಮಹಿಳೆಯನ್ನು ಕಂಡು ಗ್ರಾಮಸ್ಥರು ವಿಚಾರಿಸಿದಾಗ ಅರ್ಚಕ ಮಹಿಳೆಗೆ ಮೋಸ ಮಾಡಿರುವುದು ಗೊತ್ತಾಗಿದೆ. ಕೂಡಲೇ ಗ್ರಾಮಸ್ಥರು ಹುಲ್ಲಹಳ್ಳಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಪೊಲೀಸರು ವಿಚಾರಣೆ ನಡೆಸಿದಾಗ ಆಕೆ ನನಗೆ ಗಂಡ ಮಕ್ಕಳು ಬೇಡ ಸಂತೋಷ್ ಬೇಕು ಆತನೊಂದಿಗೆ ಸಂಸಾರ ನಡೆಸುವುದಾಗಿ ಹೇಳಿದ್ದಾಳೆ.
ಪೊಲೀಸರು ನಾಪತ್ತೆಯಾಗಿರುವ ಪೂಜಾರಿಗಾಗಿ ಹುಡುಕಾಟ ನಡೆಸಿದ್ದಾರೆ. ಗಂಡ ಮಕ್ಕಳ ಜತೆ ಸುಖವಾಗಿ ಇರಬೇಕಾದ ಮಹಿಳೆ ಹರೆಯದ ಪೂಜಾರಿಯ ಪ್ರೇಮ ಪಾಶಕ್ಕೆ ಬಿದ್ದು ಈಗ ಕಣ್ಣೀರು ಹಾಕುವಂತಾಗಿದೆ.