ಬೀದರ್: ಚುನಾವಣಾ ಕರ್ತವ್ಯ ನಿರತ ಸಹಾಯಕ ಕೃಷಿ ಅಧಿಕಾರಿ ಆನಂದ ಅವರು ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಚಿಟಗುಪ್ಪ ತಾಲೂಕಿನ ಕೋಡಂಬಲ್ ಚೆಕ್ಪೋಸ್ಟ್ನಲ್ಲಿ ನಡೆದಿದೆ.
ಮೃತ ಆನಂದ ಅವರಿಗೆ 32 ವರ್ಷ ವಯಸ್ಸು. ನಿರ್ಣಾ ಗ್ರಾಮದಲ್ಲಿ ರೈತ ಸಂಪರ್ಕ ಕಚೇರಿಯಲ್ಲಿ ಆನಂದ್ ಅವರು ಸಹಾಯಕ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಚುನಾವಣೆ ಹಿನ್ನೆಲೆಯಲ್ಲಿ ಎಸ್ಎಸ್ಟಿ ತಂಡದ ಮುಖ್ಯಸ್ಥರಾಗಿ ಕೆಲಸ ಮಾಡುತ್ತಿದ್ದರು.
ಕೃಷಿ ಅಧಿಕಾರಿ ಆನಂದ ಅವರು ಬೆಳಗ್ಗೆ 8ರಿಂದ ಮಧ್ಯಾಹ್ನ 3ಗಂಟೆವರೆಗಿನ ಶಿಫ್ಟ್ನಲ್ಲಿ ಕೆಲಸ ಮಾಡುತ್ತಿದ್ದರು. ಕೋಡಂಬಲ್ ಚೆಕ್ಪೋಸ್ಟ್ನಲ್ಲಿ ಕರ್ತವ್ಯ ನಿರ್ವಹಿಸುವಾಗ ವಾಂತಿಯಾಗಿ ಅಸ್ವಸ್ಥರಾಗಿದ್ದಾರೆ.
ಕೂಡಲೇ ಚುನಾವಣಾ ಅಧಿಕಾರಿಯನ್ನ ಸಿಪಿಐ ಶ್ರೀನಿವಾಸ್ ಅಲ್ಲಾಪುರೆ ಅವರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಕೋಡಂಬಲ್ ಚೆಕ್ಪೋಸ್ಟ್ನಿಂದ ಹುಮನಾಬಾದ್ ತಾಲೂಕು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಆನಂದ ನಿಧನರಾಗಿದ್ದಾರೆ.