ಮಂಡ್ಯ: ವಿಧಾನಸಭಾ ಚುನಾವಣೆಯ ಫಲಿತಾಂಶ ಮೇ 13 ರಂದು ಮತ ಏಣಿಕೆ ನಡೆಯಲಿರುವ ಹಿನ್ನಲೆಯಲ್ಲಿ ಮೇ 13 ರಂದು ಬೆಳಿಗ್ಗೆ 6 ಗಂಟೆಯಿಂದ ಮೇ 14 ರ ಬೆಳಿಗ್ಗೆ 6 ಗಂಟೆವರೆಗೆ 144ರ ಅಡಿ ನಿಷೇದಾಜ್ಞೆ ಜಾರಿಗೊಳಿಸಿ ಮಂಡ್ಯ ಜಿಲ್ಲಾಧಿಕಾರಿ ಡಾ.ಹೆಚ್ ಎನ್ ಗೋಪಾಲಕೃಷ್ಣ ಅವರು ಆದೇಶ ಹೊರಡಿಸಿದ್ದಾರೆ.
ಮತ ಏಣಿಕೆ ಕಾರ್ಯವು ಮುಗಿಯುತ್ತಿದ್ದಂತೆ ಅಭ್ಯರ್ಥಿಗಳು ಅವರು ಬೆಂಬಲಿಗರೊಡನೆ ಪಟಾಕಿ ಸಿಡಿಸಿಕೊಂಡು ಮೆರವಣಿಗೆಯ ಮೂಲಕ ವಿಜಯೋತ್ಸವವನ್ನು ಚುನಾವಣಾ ಮತ ಏಣಿಕೆ ಕಾರ್ಯ ನಡೆಯುತ್ತಿರುವ ಕೇಂದ್ರದ ಬಳಿ ಹಾಗೂ ಅವರವರ ಕ್ಷೆತ್ರ ವ್ಯಾಪ್ತಿಯ ಪಟ್ಟಣಗಳಲ್ಲಿ ಮತ್ತು ಗ್ರಾಮಗಳಿಗೆ ತೆರಳಿ ಅಲ್ಲಿಯೂ ಸಹಾ ಮೆರವಣಿಗೆ ಹಾಗೂ ವಿಜಯೋತ್ಸವವನ್ನು ಆಚರಿಸುವ ಸಂಭವಿರುತ್ತದೆ.
ಈ ಸಮಯದಲ್ಲಿ ಪರಾಭವಗೊಂಡ ಅಭ್ಯರ್ಥಿಗಳ ಹಾಗೂ ಅವರ ಬೆಂಬಲಿಗರ ನಡುವೆ ಘರ್ಷಣೆ ಉಂಟಾಗಿ ಗ್ರಾಮಗಳಲ್ಲಿ ಹಲ್ಲೆಗಳು ನಡೆದು ಒಬ್ಬರು ಮತ್ತೊಬ್ಬರ ಮನೆಗಳಿಗೆ ಕಲ್ಲುಗಳನ್ನು ಹೊಡೆದು, ಬೆಂಕಿ ಹಚ್ಚಿ ದುಷ್ಕೃತ್ಯಗಳನ್ನು ಮಾಡುವ ಸಾಧ್ಯತೆಯಿದ್ದು ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ಉಂಟಾಗುವು ಸಾಧ್ಯತೆಗಳು ಇರುತ್ತದೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಮೇ 13 ರ ಬೆಳಿಗ್ಗೆ 6 ಗಂಟೆಯಿಂದ ಮೇ 14 ರ ಬೆಳಿಗ್ಗೆ 6 ಗಂಟೆಯವರೆಗೆ ಯಾವುದೇ ಮೆರವಣಿಗೆ ಮಾಡುವುದನ್ನು, ಮಾರಕಾಸ್ತ್ರಗಳನ್ನು ಹಿಡಿದು ತಿರುಗಾಡುವುದನ್ನು ತಡೆಗಟ್ಟಲು ಸಿ.ಆರ್.ಪಿ.ಸಿ ಕಲಂ 144ರ ಅನ್ವಯ ಮಂಡ್ಯ ಜಿಲ್ಲೆಯಾದ್ಯಂತ ನಿಷೇಧಾಜ್ಞೆಯನ್ನು ಜಾರಿಗೊಳಿಸಿ ಆದೇಶಿಸಿದ್ದಾರೆ.
ಇನ್ನು ಮತದಾನ ಪ್ರಕ್ರಿಯೆ ಸುಗಮವಾಗಿ ಶಾಂತಿಯುತವಾಗಿ ಮುಕ್ತಾಯವಾಗಿದ್ದು, ಇದರ ಯಶಸ್ಸಿಗೆ ಶ್ರಮಿಸಿದ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗಳು, ಜಿಲ್ಲಾಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು, ಅಪರ ಜಿಲ್ಲಾಧಿಕಾರಿಗಳು ಹಾಗೂ ಚುನಾವಣಾಧಿಕಾರಿಗಳು, ಸಹಾಯಕ ಚುನಾವಣಾಧಿಕಾರಿಗಳು, ಜಿಲ್ಲೆಯ ಎಲ್ಲಾ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಜಿಲ್ಲಾಧಿಕಾರಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಜಿಲ್ಲೆಯಲ್ಲಿ ಹಿಂದಿನ ವಿಧಾನ ಸಭೆ ಹಾಗೂ ಲೋಕಸಭಾ ಚುನಾವಣೆಗಳಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಮತದಾನವಾಗಿದ್ದು, ಇದ್ದಕ್ಕಾಗಿ ಎಲ್ಲಾ ಮತದಾರ ಬಂಧುಗಳಿಗೆ, ಚುನಾವಣೆ ಸುಗಮವಾಗಿ ಹಾಗೂ ಶಾಂತಯುತವಾಗಿ ನಡೆಸಲು ಸಹಕರಿಸಿದ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರುಗಳಿಗೆ ಹಾಗೂ ಎಲ್ಲಾ ಅಭ್ಯರ್ಥಿಗಳಿಗೆ, ಜಿಲ್ಲಾಡಳಿತದ ಸ್ವೀಪ್ ರಾಯಭಾರಿಗಳಾಗಿದ್ದ ಖ್ಯಾತ ಚಲನಚಿತ್ರ ನಟ ನೀನಾಸಂ ಸತೀಶ್ ಹಾಗೂ ವಿಕಲಚೇತನ ಚುನಾವಣಾ ರಾಯಭಾರಿ ಡಾ. ಚಲುವರಾಜು, ಮತಗಟ್ಟೆ ಅಧಿಕಾರಿಗಳು, ಮೈಕ್ರೋ ಅಬ್ಸರ್ವರ್ ಗಳಿಗೂ ಅಭಿನಂದನೆ ತಿಳಿಸಿದ್ದಾರೆ.