ಬೆಂಗಳೂರು: ಕೊನೆಗೂ ಚುನಾವಣೆ ಮುಗಿದು ಅಭ್ಯರ್ಥಿಗಳ ಭವಿಷ್ಯ ಮತಯಂತ್ರದಲ್ಲಿ ಸೇರುವಂತಾಗಿದೆ. ಚುನಾವಣೆ ನಂತರದ ಸಮೀಕ್ಷೆಗಳು ಏನೇ ಹೇಳಿದರೂ ಅಂತಿಮವಾಗಿ ಮತದಾರರ ಹಾಕಿದ ಮತಗಳೇ ನಿರ್ಣಾಯಕವಾಗಿರುವುದರಿಂದ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು, ನಾಯಕರು, ಕಾರ್ಯಕರ್ತರು ಸೇರಿದಂತೆ ನಾಡಿನ ಜನ ಕಾತರದಿಂದ ಫಲಿತಾಂಶದ ದಿನ(ಮೇ.13)ವನ್ನು ಕಾಯುವಂತಾಗಿದೆ.
ಹಾಗೆನೋಡಿದರೆ 2023ರ ಚುನಾವಣೆಗೆ ಬಹುಶಃ 2018ರ ವಿಧಾನಸಭಾ ಚುನಾವಣೆಯ ಫಲಿತಾಂಶ ಬಂದ ದಿನದಿಂದಲೇ ಹಲವರು ಕಾಯುತ್ತಿದ್ದರು ಎಂದರೆ ತಪ್ಪಾಗಲಾರದು. ಕಾರಣ ಕಳೆದ ಬಾರಿಯ ಚುನಾವಣೆಯ ಫಲಿತಾಂಶ ಆ ರೀತಿಯಲ್ಲಿತ್ತು. ಮೂರು ಪಕ್ಷಗಳಿಗೂ ಬಹುಮತ ಬಂದಿರಲಿಲ್ಲ. ಹೀಗಾಗಿ ಸರ್ಕಾರ ರಚನೆಯ ವಿಷಯದಲ್ಲಿ ಗೊಂದಲಗಳು ಏರ್ಪಟ್ಟಿತ್ತು. ರೆಸಾರ್ಟ್ ರಾಜಕೀಯಗಳು ಗರಿಗೆದರಿತ್ತು. ಜನರಿಗೆ ಈ ಹಾಳು ರಾಜಕೀಯ ಸಾಕಪ್ಪಾ ಎನಿಸುವಂತಾಗಿತ್ತು. ಫಲಿತಾಂಶದ ಬಳಿಕ ಬದ್ಧವೈರಿಗಳಾಗಿ ಚುನಾವಣೆ ಎದುರಿಸಿದವರು ದೋಸ್ತಿಗಳಾಗಿ ಸರ್ಕಾರ ರಚಿಸಿದ್ದರು. ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಪಕ್ಷ ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತಿತ್ತು.
ಒಂದು ರಾಜ್ಯದಲ್ಲಿ ಬಹುಮತ ಬಾರದೆ ಹೋದರೆ ಏನೆಲ್ಲ ಸಮಸ್ಯೆಗಳು ಆಗುತ್ತವೆ ಎಂಬುದಕ್ಕೆ 2018ರ ಚುನಾವಣೆ ಸಾಕ್ಷಿಯಾಗಿತ್ತು. ಮತದಾರರಲ್ಲಿಯೂ ಅಸಮಾಧಾನಗಳಿದ್ದವು. ಜತೆಗೆ ರಾಜಕೀಯ ನಾಯಕರೊಳಗೆ ಭಿನ್ನಾಭಿಪ್ರಾಯಗಳಿದ್ದವು. ಇದೆಲ್ಲದರ ಪರಿಣಾಮ ಒಂದೇ ಅವಧಿಯಲ್ಲಿ ರಾಜ್ಯದಲ್ಲಿದ್ದ ಮೂರು ಪಕ್ಷಗಳು ಆಡಳಿತ ನಡೆಸುವಂತಾಯಿತು.
ಇದು ಪ್ರಜಾಪ್ರಭುತ್ವ ವ್ಯವಸ್ಥೆ ಇಲ್ಲಿ ಗೆಲುವಿಗೆ ರಾಜಕೀಯ ಪಕ್ಷಗಳು ಏನೇ ಕಸರತ್ತುಗಳನ್ನು ಮಾಡಿ, ಮತದಾರನ್ನು ಓಲೈಸುವ ತಂತ್ರವನ್ನು ಮಾಡಿದರೂ ಮತಯಂತ್ರದ ಮುಂದೆ ನಿಂತು ಮತಚಲಾಯಿಸುವ ಮತದಾರ ಏನು ನಿರ್ಧಾರ ತೆಗೆದುಕೊಳ್ಳುತ್ತಾನೆ ಎನ್ನುವುದು ಅವನಿಗಷ್ಟೆ ಗೊತ್ತು. ಹೀಗಾಗಿ ಫಲಿತಾಂಶವಷ್ಟೆ ಸತ್ಯವಾಗಲಿದೆ.
ರಾಜಕೀಯ ಪಕ್ಷಗಳ ನಾಯಕರು ಗೆಲುವಿಗೆ ಹಲವು ತಂತ್ರಗಳನ್ನು ಮಾಡುವುದರೊಂದಿಗೆ ಆರೋಪ ಪ್ರತ್ಯಾರೋಪಗಳಲ್ಲಿ ತೊಡಗಿದ್ದರು. ಅಷ್ಟೇ ಅಲ್ಲದೆ ಮೂರು ಪಕ್ಷಗಳು ಹಲವು ರೀತಿಯ ಭರವಸೆಗಳನ್ನು ನೀಡಿದ್ದರು. ಇನ್ನು ಅಲ್ಲಲ್ಲಿ ಸಮಾವೇಶ, ರೋಡ್ ಶೋ ಮಾಡುವ ಮೂಲಕ ಚುನಾವಣೆಯ ಭರಾಟೆ ಜೋರಾಗಿಯೇ ಸಾಗಿತ್ತು. ಆದರೆ ಎಲ್ಲದಕ್ಕೂ ಮತದಾರ ತನ್ನ ಮತವನ್ನು ಚಲಾಯಿಸುವ ಮೂಲಕ ಅಂತ್ಯ ಹಾಡಿದ್ದಾನೆ.ಸದ್ಯ ಅಭ್ಯರ್ಥಿಗಳ ಭವಿಷ್ಯ ಮತಯಂತ್ರದಲ್ಲಿ ಭದ್ರವಾಗಿದ್ದು, ಮತದಾರ ಏನು ತೀರ್ಮಾನ ಮಾಡಿದ್ದಾನೆ. ಮುಂದಿನ ಬೆಳವಣಿಗೆಗೆ ಮೇ.13ರತನಕ ಕಾಯಲೇ ಬೇಕಾಗಿದೆ.