ಮಂಡ್ಯ: ವೀರ್ ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರರಲ್ಲ ಎಂದು ಹಿಂದುತ್ವ ಸಿದ್ಧಾಂತವನ್ನು ಟೀಕಿಸುತ್ತಿದ್ದ ಕಾಂಗ್ರೆಸ್ ಪಕ್ಷಕ್ಕೆ ಇದೀಗ ಸಾವರ್ಕರ್ ಕಾರಣದಿಂದ ಮತ್ತೆ ಮುಖಭಂಗವಾಗಿದೆ.
ಭಾರತ್ ಜೋಡೋ ಯಾತ್ರೆ ವೇಳೆ ಕೆಆರ್ ಪೇಟೆಯಲ್ಲಿ ವೀರ್ ಸಾವರ್ಕರ್ ಭಾವಚಿತ್ರವಿರುವ ಬ್ಯಾನರ್ ವೈರಲ್ ಆಗಿತ್ತು. ಕೂಡಲೇ ಎಚ್ಚೆತ್ತುಕೊಂಡ ಕಾಂಗ್ರೆಸ್ ಗಾಂಧೀಜಿ ಭಾವಚಿತ್ರವನ್ನು ಅಂಟಿಸಿತ್ತು. ಇದೀಗ ಇಲ್ಲಿನ ಭಾರತ್ ಜೋಡೋ ಯಾತ್ರೆಗೆ ಸಂಬಂಧಿಸಿದ ಬ್ಯಾನರ್ನಲ್ಲಿ ವೀ ಸಾವರ್ಕರ್ ಅವರ ಫೋಟೋ ಕಾಣಿಸಿಕೊಂಡಿದೆ. ಈ ಬ್ಯಾನರ್ನಲ್ಲಿ ರಾಹುಲ್ ಗಾಂಧಿ, ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರ ಫೋಟೋ ಕೂಡ ಇದೆ. ಆದರೆ ಇದು ಕಿಡಿಗೇಡಿಗಳ ಕೆಲಸ ಎಂದು ಕಾಂಗ್ರೆಸ್ ಕಿಡಿಕಾರಿದೆ.
ರಾಹುಲ್ ಗಾಂಧಿ ನೇತೃತ್ವದಲ್ಲಿ ರಾಜ್ಯದಲ್ಲಿ ಭಾರತ್ ಜೋಡೋ ಯಾತ್ರೆ ನಡೆಯುತ್ತಿದ್ದು, ಮೈಸೂರು ನಂತರ ಯಾತ್ರೆ ಮಂಡ್ಯ ತಲುಪಿದೆ. ಅದರಂತೆ ರಾಹುಲ್ ಗಾಂಧಿ ಅವರನ್ನು ಸ್ವಾಗತಿಸುವ ಹಾಗೂ ಯಾತ್ರೆಗೆ ಸಂಬಂಧಿಸಿದ ಹಲವು ಬ್ಯಾನರ್ ಗಳನ್ನು ಅಳವಡಿಸಲಾಗಿತ್ತು.
ಈ ಪೈಕಿ ಶಾಂತಿನಗರ ಶಾಸಕ ಅಹಮದ್ ಹ್ಯಾರಿಸ್ ಗೆ ಸಂಬಂಧಿಸಿದ್ದು ಎನ್ನಲಾದ ಬ್ಯಾನರ್ ನಲ್ಲಿ ವೀರ ಸಾವರ್ಕರ್ ಫೋಟೋ ಕಾಣಿಸಿಕೊಂಡಿದೆ. ಇದು ಕಾಂಗ್ರೆಸ್ ನಾಯಕರಿಗೆ ಎರಡನೇ ಬಾರಿ ಮುಜುಗರ ತಂದಿದೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಹ್ಯಾರಿಸ್, ಇದು ಯಾರೋ ಕಿಡಿಗೇಡಿಗಳು ಮಾಡಿರುವ ಕೃತ್ಯ. ಇದು ನಾವು ಹಾಕಿರುವ ಬ್ಯಾನರ್ ಅಲ್ಲ. ಇಂತಹ ಕೃತ್ಯ ಎಸಗಿದವರ ವಿರುದ್ಧ ಮಂಡ್ಯ ಜಿಲ್ಲೆಯಲ್ಲಿ ದೂರು ದಾಖಲಿಸುವುದಾಗಿ ಹ್ಯಾರಿಸ್ ಎಚ್ಚರಿಕೆ ನೀಡಿದ್ದಾರೆ. ಹಿಂದಿನ ಸೆಪ್ಟೆಂಬರ್ 21 ರಂದು, ಸಾವರ್ಕರ್ ಅವರು ಇತರ ಸ್ವಾತಂತ್ರ್ಯ ಹೋರಾಟಗಾರರ ಜೊತೆಗೆ ಕೇರಳದಲ್ಲಿ ಭಾರತ್ ಜೋಡೋ ಯಾತ್ರೆಯ ಪೋಸ್ಟರ್ನಲ್ಲಿ ಕಾಣಿಸಿಕೊಂಡಿದ್ದರು. ಅದರಲ್ಲಿ ಗಾಂಧೀಜಿಯವರ ಭಾವಚಿತ್ರ ಕಾಣೆಯಾಗಿತ್ತು. ಈ ಫೋಟೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ನಾಯಕರು ಸಾವರ್ಕರ್ ಭಾವಚಿತ್ರದ ಮೇಲೆ ಗಾಂಧಿ ಚಿತ್ರವನ್ನು ಅಂಟಿಸಿದ್ದರು.