ಕೆ.ಆರ್.ಪೇಟೆ: ಆನೆಗೊಳಮ್ಮ ದೇವಿಯ ನೂತನ ದೇವಾಲಯದ ಉದ್ಘಾಟನೆ ಮತ್ತು ಕಳಸ ಪ್ರತಿಷ್ಠಾಪನೆಯು ಸಡಗರ ಸಂಭ್ರಮದಿಂದ ಆನೆಗೊಳ ಗ್ರಾಮಸ್ಥರ ಸಮ್ಮುಖದಲ್ಲಿ ಮೂರುದಿನಗಳ ಕಾಲ ನಡೆಯಿತು.
ಲಕ್ಷ್ಮಿದೇವಿ ದೇವತೆಯನ್ನು ಆನೆಗೊಳ ಗ್ರಾಮಸ್ಥರು ತಮ್ಮ ಗ್ರಾಮ ದೇವತೆಯಾಗಿ ಪೂಜಿಸುತ್ತಿದ್ದು, ನಂತರದಲ್ಲಿ ಆನೆಗೊಳಮ್ಮ ದೇವಿ ಎಂದು ಕರೆದು ಪೂಜಿಸುತ್ತಿದ್ದರು. ಆದರೆ ಗ್ರಾಮದಲ್ಲಿ ಇದುವರೆಗೂ ಗ್ರಾಮ ದೇವತೆಯ ದೇವಾಲಯ ಇಲ್ಲದನ್ನು ಗ್ರಾಮಸ್ಥರು ಸೇರಿ ಚರ್ಚಿಸಿ ನಂತರ ದೇವಾಲಯ ನಿರ್ಮಾಣ ಮಾಡಲು ಆರು ತಿಂಗಳ ಹಿಂದೆ ಸಂಕಲ್ಪಗೊಂಡಿದ್ದರು. ಇದರ ಪ್ರೇರೇಪಣೆಯಂತೆ ಆನೆಗೊಳ ಗ್ರಾಮದಲ್ಲಿ ಭವ್ಯವಾದ ನೂತನ ದೇವಾಲಯ ಮತ್ತು ಉತ್ಸವ ಮೂರ್ತಿಯ ಪ್ರತಿಷ್ಠಾಪನೆಯು ಹಿಂದೂ ಧಾರ್ಮಿಕ ವಿಧಿ ವಿಧಾನಗಳಂತೆ ಮೂರು ದಿನಗಳ ಕಾಲ ನಡೆಯಿತು.
ರಾಮನಾಥಪುರ ಗ್ರಾಮದಲ್ಲಿ ಹರಿಯುವ ನಾಡಿನ ಜೀವನದಿ ಕಾವೇರಿಯಿಂದ ಆನೆಗೊಳ ಗ್ರಾಮಸ್ಥರು ಪ್ರಾಣಪ್ರತಿಷ್ಠಾಪನೆಗಾಗಿ ಕಾಲ್ನಡಿಗೆಯಲ್ಲಿ ಆನೆಗೊಳಮ್ಮ ದೇವಿಯನ್ನು ನದಿಗೆ ತಂದು ಧಾರ್ಮಿಕ ವಿಧಾನಗೊಳೊಂದಿಗೆ ಪ್ರಾಣಪ್ರತಿಷ್ಠಾಪಿಸಿ ಮೂಲದೇವರಿಗೆ ಜಲಾಭಿಷೇಕ ಮುಂತಾದ ಅಭಿಷೇಕಗಳೊಂದಿಗೆ ಮೂಲ ದೇವಿಯ ಪ್ರಾಣಪ್ರತಿಷ್ಠಾಪಿಸಲು ಗ್ರಾಮದ ಮಹಿಳೆಯರು ಮತ್ತು ದೇವಿಯ ಒಕ್ಕಲುತನದ ಕುಟುಂಬದ ಮಹಿಳೆಯರು 1001 ಪೂರ್ಣಕುಂಭ ಕಳಸವನ್ನು ತಂದು ಗ್ರಾಮದ ರಾಜಬೀದಿಗಳಲ್ಲಿ ಜಾನಪದ ಕಲಾತಂಡಗಳ ಜೊತೆ ಮಂಗಳವಾದಗಳೊಡನೆ ದೇವಾಲಯದ ಆವರಣಕ್ಕೆ ಪೂರ್ಣಕುಂಭ ಕಳಸವನ್ನು ಪ್ರತಿಷ್ಠಾಪಿಸಲಾಯಿತು. ನಂತರ ದೇವಾಲಯದ ಕಳಸ ಪ್ರತಿಷ್ಠಾಪನೆಯನ್ನು ಶ್ರೀಮದ್ ರಂಭಪುರಿ ಶಾಖಾಪುರವರ್ಗ, ಹಿರೇಮಠ ನುಗ್ಗೇಹಳ್ಳಿ ಮಠದ ಸ್ವಾಮೀಜಿಗಳಾದ ಷ||ಬ್ರ||ಡಾ.ಶ್ರೀ ಮಹೇಶ್ವರ ಶಿವಾಚಾರ್ಯ ಸ್ವಾಮೀಜಿಗಳು ನೇರವೇರಿಸಿದರು.
ದೇವಾಲಯದ ಪ್ರತಿಷ್ಠಾಪನಾ ಮಹೋತ್ಸವದಲ್ಲಿ ಮೂರುಗಳ ಕಾಲ ನಡೆದ ಧಾರ್ಮಿಕ ವಿಧಿಗಳು, ಜನಪದ ಕಲಾನೃತ್ಯಗಳು, ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ಬಾಣಬಿರುಸುಗಳ ವೈಭವವೂ ಮೈಸೂರು ದಸರಾ ವೈಭವವನ್ನು ನೆನಪಿಸುವಂತ್ತಿತ್ತು. ದೇವಾಲಯಕ್ಕೆ ಆಗಮಿಸಿದ ಭಕ್ತಾಧಿಗಳಿಗೆ ಯಾವುದೇ ರೀತಿಯ ಮೂಲಭೂತ ಸೌಲಭ್ಯಗಳು ತೊಂದರೆಯಾಗದಂತೆ ಗ್ರಾಮಸ್ಥರು ಜಾಗ್ರತೆವಹಿಸಿದ್ದು ಮಾದರಿಯಾಗಿತ್ತು. ಮೂರು ದಿನಗಳ ಕಾಲ ದೇವಾಲಯಕ್ಕೆ ಆಗಮಿಸಿದ ಸುಮಾರು ಇಪ್ಪತ್ತು ಸಾವಿರಕ್ಕೂ ಹೆಚ್ಚು ಭಕ್ತಾಧಿಗಳಿಗೆ ಹಾಗೂ ನಾಗರೀಕರಿಗೆ ಉಚಿತ ಅನ್ನದಾಸೋಹ ಕಾರ್ಯಕ್ರಮ ಏರ್ಪಡಿಸಿದ್ದರು.