ಮಂಡ್ಯ: ಮೆದುಳು ನಿಷ್ಕ್ರೀಯಗೊಂಡು ಕೋಮ ಸ್ಥಿತಿಯಲ್ಲಿದ್ದ ವ್ಯಕ್ತಿಯ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಕುಟುಂಬ ಸಾರ್ಥಕತೆ ಮೆರೆದಿದೆ.
ಕೆ.ಆರ್.ಪೇಟೆ ತಾಲೂಕಿನ ಬೂಕನಕರೆ ಹೋಬಳಿಯ ಗಂಜಿಗೆರೆ ಕೊಪ್ಪಲು ಗ್ರಾಮದ ಮೊಗಣ್ಣೆಗೌಡ (65) ಎಂಬುವರೇ ಸಾವಿನಲ್ಲಿ ಸಾರ್ಥಕತೆ ಮೆರೆದವರು. ಇವರು ಪತ್ನಿಯ ಜೊತೆ ಜಮೀನಿನಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ಬಂದ ವೇಳೆ ತಲೆನೋವು ಜಾಸ್ತಿ ಆಗಿದೆ. ಕೂಡಲೇ ಅವರನ್ನು ಮೈಸೂರಿನ ಜೆಎಸ್ಎಸ್ ಆಸ್ಪತ್ರೆಗೆ ದಾಖಲಿಸಿ ಪರೀಕ್ಷಿಸಿದ ವೇಳೆ ಮೆದುಳು ಸ್ಟ್ರೋಕ್ ಆಗಿ ಕೋಮಾ ಸ್ಥಿತಿಗೆ ತಲುಪಿದ್ದರು.
ಮೆದುಳು ನಿಷ್ಕ್ರಿಯಗೊಂಡ ವಿಷಯ ತಿಳಿದ ಪುತ್ರರು ತಂದೆಯ ಜೀವಂತವಾಗಿ ಉಳಿಯೋದಿಲ್ಲ ಎಂದು ಮನಗೊಂಡು ಡಾ.ವಾಸನ್ ಅವರ ಸಲಹೆ ಮೇರೆಗೆ ಅಂಗಾಂಗ ದಾನಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಅದರಂತೆ ಅಂಗಾಂಗಗಳನ್ನು ದಾನ ಮಾಡಲಾಗಿದೆ. ಆ ಮೂಲಕ ಇತರರ ಬಾಳಿಗೆ ಬೆಳಕಾಗಿದ್ದಾರೆ.