ಕೆ.ಆರ್.ಪೇಟೆ: ಬರದ ಛಾಯೆ ಹೆಚ್ಚಾಗುತ್ತಿದ್ದು, ಪರಿಣಾಮ ತಾಲೂಕಿನಾದ್ಯಂತ ಕೆರೆ- ಕಟ್ಟೆಗಳು ಒಣಗಿ ನಿಂತಿದ್ದು ತಾಲೂಕಿನಲ್ಲಿ ಹಾದು ಹೋಗಿರುವ ಜೀವನದಿ ಹೇಮಾವತಿಯ ಒಡಲು ಬರಿದಾಗುತ್ತಿದೆ. ಇದರಿಂದಾಗಿ ಕೆ.ಆರ್.ಪೇಟೆ ಪಟ್ಟಣದ ಜನಕ್ಕೆ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಲಕ್ಷಣ ಕಂಡು ಬಂದಿದೆ.
ಕೆ.ಆರ್.ಪೇಟೆ ಪಟ್ಟಣದ ಪುರಸಭೆ ವ್ಯಾಪ್ತಿಯ 23ವಾರ್ಡುಗಳ 30 ಸಾವಿರ ಜನರಿಗೆ ಕುಡಿಯುವ ನೀರನ್ನು ಸರಬರಾಜು ಮಾಡುವ ಶುದ್ಧ ಕುಡಿಯುವ ನೀರಿನ ಮೂಲದ ತಾಣವಾಗಿರುವ ಹೇಮಾವತಿ ನದಿಯಲ್ಲಿ ನೀರಿನ ಹರಿವು ಕಡಿಮೆಯಾಗಿದೆ. ಇದರಿಂದ ಹೇಮಾವತಿ ನದಿಯಿಂದ ನೀರೆತ್ತುವ ಜಾಕ್ ವೆಲ್ ಇರುವ ಹೇಮಗಿರಿ ಬೆಟ್ಟದ ಪಾದದ ಬಳಿ ಹೇಮಾವತಿ ನದಿಯ ನೀರು ಅಶುದ್ಧಗೊಂಡು ಪಾಚಿಗಟ್ಟಿ ನಿಂತಿದ್ದು ನದಿಯಲ್ಲಿ ಕೇವಲ ಎರಡರಿಂದ ಮೂರು ಅಡಿಗಳಷ್ಟು ಮಾತ್ರ ನೀರಿದ್ದು, ನದಿಯೊಳಗಿನ ಕಲ್ಲು ಕಾಣುವಂತಾಗಿದೆ.
ಪಟ್ಟಣಕ್ಕೆ ಕೇವಲ ಎಂಟು ಕಿ.ಮೀ ದೂರದಲ್ಲಿ ಹೇಮಗಿರಿ ಬೆಟ್ಟದ ತಪ್ಪಲಿನಲ್ಲಿ ಹಾದು ಹೋಗಿರುವ ಜೀವನದಿ ಹೇಮಾವತಿ ನದಿಯಿಂದ ಪೈಪ್ಲೈನ್ ಮೂಲಕ ಕುಡಿಯುವ ನೀರನ್ನು ಪಟ್ಟಣಕ್ಕೆ ಸರಬರಾಜು ಮಾಡಲಾಗುತ್ತಿದೆ. ಇದಕ್ಕಾಗಿ ಬೆಟ್ಟದ ತಪ್ಪಲಿನಲ್ಲಿ ಕುಪ್ಪಳ್ಳಿಯ ಭಾಗದಲ್ಲಿ ನದಿಯ ಒಡಲಿನಲ್ಲಿ ಕುಡಿಯುವ ನೀರು ಸರಬರಾಜು ಮಾಡುವ ಜಾಕ್ವೆಲ್ ನಿರ್ಮಿಸಲಾಗಿದೆ. ನದಿಯಲ್ಲಿ ನೀರು ಖಾಲಿಯಾಗಿರುವುದರಿಂದ ಜಾಕ್ವೆಲ್ ನೀರಿನಿಂದ ಹೊರಬಂದಿದ್ದು ಜಾಕ್ವೆಲ್ ಹೊರಭಾಗಕ್ಕೆ ಗೋಚರಿಸುತ್ತಿದೆ. ಇದೇ ರೀತಿ ಮುಂದುವರೆದರೆ ಸಂಕಷ್ಟ ಎದುರಾಗಲಿದೆ
ಹೇಮಾವತಿ ನದಿಯಲ್ಲಿ ನೀರು ಖಾಲಿಯಾಗುತ್ತಿರುವುದರಿಂದ ಕೆ.ಆರ್.ಪೇಟೆ ಪುರಸಭೆಯು ಎರಡು ದಿನಗಳಿಗೊಮ್ಮೆ ದಿನ ಬಿಟ್ಟು ದಿನ ಕುಡಿಯುವ ನೀರನ್ನು ಸರಬರಾಜು ಮಾಡುತ್ತಿದೆ. ಜಲಕ್ಷಾಮದ ಅರಿವಿದ್ದರೂ ಜೀವಜಲವಾದ ಕುಡಿಯುವ ನೀರನ್ನು ಪೋಲು ಮಾಡುತ್ತಿರುವ ಪಟ್ಟಣದ ಜನತೆ ನಲ್ಲಿಯ ನೀರಿನಲ್ಲಿಯೇ ಪಾತ್ರೆ ತೊಳೆಯುವುದು, ಬಟ್ಟೆ ಒಗೆಯುವುದು ಸೇರಿದಂತೆ ಬೇಕಾಬಿಟ್ಟಿಯಾಗಿ ಬಳಕೆ ಮಾಡುತ್ತಿದ್ದಾರೆ. ಪುರಸಭೆಯ ಸಿಬ್ಬಂದಿ ಎಷ್ಟೇ ಸೂಚನೆ ನೀಡಿದರೂ ನಲ್ಲಿಗಳಿಗೆ ಟ್ಯಾಪ್ ಹಾಕದ ಸಾರ್ವಜನಿಕರು ಕುಡಿಯುವ ನೀರನ್ನು ಯಥೇಚ್ಛವಾಗಿ ಪೋಲು ಮಾಡುತ್ತಿದ್ದಾರೆ ಎಂಬ ದೂರುಗಳು ಕೇಳಿ ಬರುತ್ತಿವೆ.