ಕೆ.ಆರ್.ಪೇಟೆ: ಆಕಸ್ಮಿಕ ಬೆಂಕಿ ತಗುಲಿ ಕಟಾವಿಗೆ ಬಂದಿದ್ದ ಎರಡು ಎಕರೆಯ ಕಬ್ಬಿನ ಫಸಲು ಬೆಂಕಿಗಾಹುತಿಯಾಗಿರುವ ಘಟನೆ ತಾಲೂಕಿನ ಕಸಬಾ ಹೋಬಳಿಯ ಪುರ ಗ್ರಾಮದಲ್ಲಿ ನಡೆದಿದೆ.
ಈ ಘಟನೆಯಿಂದ ನೊಂದ ರೈತ ಸಣ್ಣ ಮೊಗಣ್ಣ ಅವರು ಇದೀಗ ಚಿಂತಾಕ್ರಾಂತರಾಗಿದ್ದಾರೆ. ಇವರು ತಮಗೆ ಸೇರಿದ ಎರಡು ಎಕರೆ ಪ್ರದೇಶದಲ್ಲಿ ಕಬ್ಬನ್ನು ಬೆಳೆದಿದ್ದರು, ಬರಗಾಲದಲ್ಲಿ ನೀರು ಹಾಯಿಸಿ ಬೆಳೆ ಬೆಳೆದಿದ್ದರು. ಕಬ್ಬು ಬೆಳೆದು ಕಟಾವಿಗೆ ಸಿದ್ದವಾಗಿತ್ತು. ಆದರೆ ಈ ನಡುವೆ ಕಬ್ಬಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ಪರಿಣಾಮ ಇಡೀ ಕಬ್ಬಿನ ಗದ್ದೆ ಹೊತ್ತಿ ಉರಿಯಲಾರಂಭಿಸಿದ್ದು, ತಕ್ಷಣ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ತೆರಳಿ ಬೆಂಕಿ ನಂದಿಸಿದರು. ಆದರೆ ಅಷ್ಟರಲ್ಲಿ ಕಬ್ಬಿನ ಫಸಲು ಸಂಪೂರ್ಣ ಸುಟ್ಟು ಕರಕಲಾಗಿತ್ತು.
ಈ ವೇಳೆ ಮಾತನಾಡಿದ ನೊಂದ ರೈತ ಸಣ್ಣ ಮೊಗಣ್ಣ ಸರ್ವೇ ನಂಬರ್ 22ರಲ್ಲಿ ಎರಡು ಎಕರೆಯಲ್ಲಿದ ಕಬ್ಬಿನ ಫಸಲನ್ನು ಸಮರ್ಪಕವಾಗಿ ವಿದ್ಯುತ್ ಪೂರೈಕೆ ಇಲ್ಲದಿದ್ದರೂ ಹಗಲು ಇರುಳು ಬೆವರ ಸುರಿಸಿ ಬೆಳೆಯಲಾಗಿತ್ತು. ಕಬ್ಬಿನ ಫಸಲು ಜತೆಗೆ ಹತ್ತಕ್ಕೂ ಹೆಚ್ಚು ಫಲ ಬಿಡುತ್ತಿದ್ದ ತೆಂಗಿನ ಸಸಿ ಬೆಂಕಿ ತಗುಲಿ ಸಂಪೂರ್ಣ ನಾಶವಾಗಿವೆ. ಇದರಿಂದ ಕೈಗೆ ಬಂದಿದ್ದ ತುತ್ತು ಬಾಯಿಗೆ ಬಾರದಂತಾಗಿದೆ.ಈ ಘಟನೆಯಿಂದ ಲಕ್ಷಾಂತರ ರೂ. ನಷ್ಟವಾಗಿದ್ದು, ಸೂಕ್ತ ಪರಿಹಾರ ನೀಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.